ಕನ್ನಡಪ್ರಭ ವಾರ್ತೆ ತರೀಕೆರೆ
ನಮ್ಮ ಮನೆ ಮತ್ತು ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕೆಂದು ಪುರಸಭೆ ಅಧ್ಯಕ್ಷರು ಪರಮೇಶ್ ಹೇಳಿದರು.ಅವರು, ಮಂಗಳವಾರ ಪುರಸಭಾ ಕಾರ್ಯಾಲಯ ವತಿಯಿಂದ ಪಟ್ಟಣದ 17ನೇ ವಾರ್ಡ್ನಲ್ಲಿ ನಮ್ಮ ನಡೆ ವಾರ್ಡ್ ಕಡೆ ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಏರ್ಪಾಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವಿಧ ಸೌಲಭ್ಯಗಳ ಅನುಕೂಲ ಪಡೆಯಲು ಈಗ ಶಾಲೆಗಳಿಗೆ ಅನುದಾನಗಳ ಕೊರತೆ ಇದೆ. ಪುರಸಭೆ ಸದಸ್ಯರು ಟಿ.ದಾದಾಪೀರ್ ಅವರು ಈ ವಿಚಾರ ಪ್ರಸ್ತಾಪ ಮಾಡಿ ಪಟ್ಟಣದ ಸರ್ಕಾರಿ ಶಾಲೆಗಳ ಶೌಚಾಲಯಗಳ ಗುಂಡಿಗಳನ್ನು ಸ್ವಚ್ಚಗೊಳಿಸಲು ಪುರಸಭೆಯಿಂದ ಉಚಿತವಾಗಿ ಸಕ್ಕಿಂಗ್ ಯಂತ್ರ ವಾಹನಗಳನ್ನು ಒದಗಿಸಲಾಗುವುದು, ಪ್ಲಾಸ್ಟಿಕ್ ಬಳಸಬಾರದು ಎಂದು ಹೇಳಿದರು.ಪುರಸಭೆ ಸದಸ್ಯರು ಟಿ.ದಾದಾಪೀರ್ ಮಾತನಾಡಿ, ಪಟ್ಟಣದಲ್ಲಿ ಹೆಚ್ಚು ಸ್ವಚ್ಚತೆಯನ್ನು ಕಾಪಾಡಬೇಕು. ಪಟ್ಟಣದಲ್ಲಿ ಈಗಾಗಲೇ ಡೆಂಘೀ ಕಾಯಿಲೆಗಳು ವರದಿಯಾಗಿದ್ದು, ಪರಿಸರವನ್ನು ಚೊಕ್ಕವಾಗಿಟ್ಟುಕೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲಿರುವ ಶೌಚಾಲಯ ಗುಂಡಿಗಳನ್ನು ಸ್ವಚ್ಚಗೊಳಿಸಲು ಪುರಸಭೆ ವತಿಯಿಂದ ಸಕ್ಕಿಂಗ್ ಯಂತ್ರ ವಾಹನವನ್ನು ಉಚಿತವಾಗಿ ಒದಗಿಸಬೇಕು. ಪಟ್ಟಣದ 17ನೇ ವಾರ್ಡ್ನಲ್ಲಿ ಪ್ರತಿ ಮನೆಗೆ ತೆರಳಿ ಗುಲಾಬಿ ಹೂವು ನೀಡುವುದರ ಮೂಲಕ ಪುರಸಭೆ ಕಸ ಸಂಗ್ರಹಿಸುವ ಟಿಪ್ಪರ್ ವಾಹನಗಳಿಗೆ ಕಸ ನೀಡಿ ಪಟ್ಟಣದಲ್ಲಿ ಸ್ವಚ್ಚತೆ ಕಾಪಾಡಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ ಸರ್ಕಾರಿ ಶಾಲೆಗಳ ಹಿತದೃಷ್ಠಿಯಿಂದ ಶೌಚಾಲಯಗಳ ಗುಂಡಿ ಚೊಕ್ಕಟಗೊಳಿಸಲು ಪುರಸಭೆ ವತಿಯಿಂದ ಸಕ್ಕಿಂಗ್ ವಾಹನಗಳನ್ನು ಉಚಿತವಾಗಿ ಒದಗಿಸಲಾಗುವುದು. ಪುರಸಭೆ ವತಿಯಿಂದ ನಮ್ಮ ನಡೆ ವಾರ್ಡ್ ಕಡೆಗೆ ಕಾರ್ಯಕ್ರಮದಲ್ಲಿ ಪಟ್ಟಣದಲ್ಲಿ ಎಲ್ಲಾ ವಾರ್ಡುಗಳಲ್ಲೂ ಇಂತಹ ಕಾರ್ಯಕ್ರಮ ಆಯೋಜಿಸಿ, ವಾರ್ಡ್ನಲ್ಲಿ ಕುಡಿಯುವ ನೀರು ಇತ್ಯಾದಿ ಸಮಸ್ಯೆಗಳ ಬಗ್ಗೆ ಸ್ಥಳದಲ್ಲಿಯೇ ಪರಿಹರಿಸಲು ಪ್ರಯತ್ನಿಸಲಾಗುವುದು. ವಾರ್ಡ್ನ ಪ್ರತಿ ಮನೆಗೆ ತೆರಳಿ ಗುಲಾಬಿ ಹೂವು ನೀಡುವುದರ ಮೂಲಕ ಪುರಸಭೆ ವತಿಯಿಂದ ವಾರ್ಡುಗಳಿಗೆ ಬರುವ ಕಸ ಸಂಗ್ರಹಿಸುವ ಟಿಪ್ಪರ್ಗೆ ಕಸ ನೀಡುವಂತೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.ಪುರಸಭೆ ಪರಿಸರ ಅಭಿಯಂತರರಾದ ತಾಹೆರಾ ತಸ್ನಿಂ ಮಾತನಾಡಿ ಪುರಸಭೆ ವತಿಯಿಂದ ಪ್ರತಿ ವಾರ್ಡ್ನಲ್ಲಿ ಸಂಚರಿಸುವ ಕಸ ಸಂಗ್ರಹಿಸುವ ಟಿಪ್ಪರ್ಗೆ ಒಣ ಕಸ ಮತ್ತು ಹಸಿ ಕಸ ವಿಂಗಡಿಸಿ ನೀಡಬೇಕು. ಕಸ ಉತ್ಪಾದನೆ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು. ಶಿಕ್ಷಣ ಇಲಾಖೆ ಅಧಿಕಾರಿ ಸತೀಶ್ ಮಾತನಾಡಿದರು. ಮೌಲಾನಾ ಜಬೀಉಲ್ಲಾ ಖಾನ್ ನಿಜಾಮಿ, ಮುಖಂಡರಾದ ಸಮೀವುಲ್ಲಾ ಹಸನ್, ಅಬ್ದುಲ್ ಶುಕುರ್, ಶಾಲೆ ಸಮಿತಿ ಅಧ್ಯಕ್ಷೆ ರೇಷ್ಮ, ಶಾಲೆ ಮುಖ್ಯ ಶಿಕ್ಷಕಿ ಸಾಹೆರಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.