ಕನ್ನಡಪ್ರಭ ವಾರ್ತೆ ಹಾಸನ
ಇತ್ತೀಚೆಗೆ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರಿಂದ ಬಂಧಿತನಾಗಿರುವ ಮಡೆನೂರು ಮನು ಹಿರಿಯ ನಟ ಡಾ. ಶಿವರಾಜ್ ಕುಮಾರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಕೂಡಲೇ ಆತನ ಮೇಲೆ ಪ್ರಕರಣ ದಾಖಲಿಸಿ ಎಂದು ಅಖಿಲ ಕರ್ನಾಟಕ ಡಾ. ರಾಜ್ಕುಮಾರ್, ಡಾ. ಶಿವರಾಜಕುಮಾರ್ ಹಾಗೂ ಡಾ. ಪುನೀತ್ ರಾಜಕುಮಾರ್ ಅಭಿಮಾನಿ ಸಂಘದಿಂದ ಬುಧವಾರ ಪ್ರತಿಭಟಿಸಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಯಿತು.ಇದೇ ವೇಳೆ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್. ರತೀಶ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಡಾ. ರಾಜಕುಮಾರ್ ಪುತ್ರರಾದ ಡಾ. ಶಿವರಾಜ ಕುಮಾರ್ ಬಗ್ಗೆ ಅವಹೇಳನಕಾರಿಯಾಗಿ ಮಡೆನೂರು ಮನು ಕುಡಿದ ಅಮಲಿನಲ್ಲಿ ಮಾತನಾಡಿದ್ದಾನೆ. ಇದೇ ರೀತಿ ಈ ಮಡೆನೂರು ಮನು ಇತ್ತೀಚೆಗೆ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರಿಂದ ಬಂಧಿತನಾಗಿದ್ದಾನೆ. ಕಾಮಿಡಿ ಕಿಲಾಡಿಗಳ ಷೋನಲ್ಲಿ ನಟಿಸಿರುತ್ತಾನೆ. ಅಲ್ಲದೇ ಕುಲದಲ್ಲಿ ಕೀಳ್ಯಾವುದೋ ಎಂಬ ಚಿತ್ರದಲ್ಲಿ ನಟಿಸಿ, ನಾನೇ ಹೀರೋ ಎಂದು ಬಡಾಯಿಸುತ್ತಾ ದುರಹಂಕಾರದಿಂದ ತನಗೆ ಮನಸ್ಸಿಗೆ ಬಂದಂತೆ ಮಾತನಾಡಿರುತ್ತಾನೆ. ಡಾ. ರಾಜಕುಮಾರ್ ಕುಟುಂಬದ ಮೇಲೆ ಇದುವರೆಗೂ ಯಾರೊಬ್ಬರೂ ಈ ರೀತಿಯ ಹೇಳಿಕೆಗಳನ್ನು ನೀಡಿರುವುದಿಲ್ಲ. ಇದೊಂದು ಅಕ್ಷಮ್ಯ ಅಪರಾಧವಾಗಿರುತ್ತದೆ. ಆದುದರಿಂದ ಕೂಡಲೇ ಮಡೆನೂರು ಮನು ಎಂಬಾತನನ್ನು ಬಂಧಿಸಿ ಅವನ ಮೇಲೆ ಕೇಸು ದಾಖಲಿಸಿ ಅವನಿಂದ ಕ್ಷಮೆಯಾಚಿಸಿ, ಅವನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು. ಹಾಸನ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಉಪಾಧ್ಯಕ್ಷ ಜಕ್ಕನಹಳ್ಳಿ ಮೋಹನ್ ಕುಮಾರ ಮಾಧ್ಯಮದೊಂದಿಗೆ ಮಾತನಾಡಿ, ಡಾ. ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದಿಂದ ನಾವು ಮಡೆನೂರು ಹೇಳಿಕೆ ಖಂಡಿಸಿ ಪ್ರತಿಭಟಿಸುತ್ತಿದ್ದೇವೆ. ಡಾ. ರಾಜ್ ಮತ್ತು ಕುಟುಂಬವು ಕಲಾತ್ಮಕ ಸೇವೆಯನ್ನು ಬಹಳಷ್ಟು ಮಾಡಿದ್ದು, ಅವರ ಸಿನಿಮಾವನ್ನು ನೋಡಿ ಕರ್ನಾಟಕದ ನಾವು ಎಷ್ಟೋ ತಿಳಿವಳಿಕೆ ತಿಳಿದುಕೊಂಡಿದ್ದೇವೆ. ಶಿವರಾಜಕುಮಾರ್ ಅವರಿಗೆ ವಯಸಾಗಿದ್ದು, ಇನ್ನು ಎರಡರಿಂದ ಆರು ವರ್ಷ ಬದುಕುವುದಾಗಿ ಹೇಳಿಕೆ ನೀಡಿದ್ದು, ಇಂತಹವರ ಮೇಲೆ ಮಡೆನೂರು ಮನು ಅವಹೇಳನಕಾರಿ ರೀತಿ ಮಾತನಾಡಿರುವುದು ಉತ್ತಮ ಬೆಳೆವಣಿಗೆಯಲ್ಲ. ಕೂಡಲೇ ಆತನ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಅಭಿಮಾನಿ ಸಂಘದ ಮಹಿಳಾ ಘಟಕದ ಅಧ್ಯಕ್ಷ ವಿಜಯಲಕ್ಷ್ಮಿ ಅಂಜನಪ್ಪ ಮಾತನಾಡಿ, ಮಡೆನೂರು ಮನು ಅವರು ನಮ್ಮ ನಾಯಕ ನಟ ಶಿವಣ್ಣರ ಬಗ್ಗೆ ಆಯಸ್ಸು ಹೇಳುವುದಕ್ಕೆ ಇವನು ಯಾವನು ಎಂದು ಏಕ ವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು. ಈತ ಒಬ್ಬ ಸಣ್ಣ ಕಲಾವಿದ. ಇತ ನಮ್ಮ ಹಾಸನದ ಮರ್ಯಾದೆ ತೆಗೆದವನು. ಈತನನ್ನು ಬಿಡಬಾರದು. ಮುಂದೆ ಈತನ ರೀತಿ ಯಾರು ಮಾತನಾಡಬಾರದು, ಆ ರೀತಿ ಇವನಿಗೆ ತಕ್ಕ ಶಿಕ್ಷೆ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಡಾ. ರಾಜಕುಮಾರ್, ಡಾ. ಶಿವರಾಜಕುಮಾರ್ ಹಾಗೂ ಡಾ. ಪುನೀತ್ ರಾಜಕುಮಾರ್ ಅಭಿಮಾನಿ ಸಂಘದ ಭಾಗ್ಯ, ಶೋಭಾ ಶಂಕರ್, ಎಚ್.ಎಂ. ಶಂಕರ್, ಜನಾರ್ಧನ್, ವಿಜಯಣ್ಣ, ಸಾಲಗಾಮೆ ರಾಜಣ್ಣ, ಜಕ್ಕನಹಳ್ಳಿ ಕುಮಾರ್, ಶರತ್. ರಮೇಶ್, ಪ್ರವೀಣ್, ಭಾನುಪ್ರಕಾಶ್, ವಿನುತಾ ಕುಮಾರ್, ರವಿಕುಮಾರ್, ರೇವಣ್ಣ ಇತರರು ಪಾಲ್ಗೊಂಡಿದ್ದರು.