ಚನ್ನಗಿರಿ: ತಾಲೂಕಿನ ಶಾಲೆಗಳಲ್ಲಿ ಬಿಸಿ ಊಟ ತಯಾರಕರು ಯಾವುದೇ ಹೆಚ್ಚಿನ ಸೌಲಭ್ಯಗಳಿಲ್ಲದೆ ವಂಚನೆಗೆ ಒಳಗಾಗಿದ್ದಾರೆ. ಅವರ ವೇತನ ಹೆಚ್ಚಿಸಲು ಮುಂಬರುವ ಬಜೆಟ್ನಲ್ಲಿ ಅನುದಾನ ನಿಗದಿ ಮಾಡಬೇಕು ಎಂದು ಎಐಟಿಯುಸಿ ಫೆಡರೇಷನ್ನ ರಾಜ್ಯಾಧ್ಯಕ್ಷ ಅವರಗೆರೆ ಚಂದ್ರು ಆಗ್ರಹಿಸಿದರು.
ಈಗಾಗಲೇ ನಿವೃತ್ತಿ ಹೊಂದಿದ ಬಿಸಿ ಊಟ ತಯಾರಕರಿಗೆ 2 ಲಕ್ಷ ರುಪಾಯಿ ಇಡಿಗಂಟು ಹಣ ನೀಡಲು ಜಾರಿಗೆ ತರುವ ಜೋತೆಗೆ ಅವರು ಮರಣ ಹೊಂದಿದ ನಂತರ ಪರ್ಯಾಯ ವಾಗಿ 10 ಲಕ್ಷ ರುಪಾಯಿ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತರಬೇಕು ಎಂದರು.
ಒಂದು ನೂರು ಜನ ವಿದ್ಯಾರ್ಥಿಗಳಿದ್ದರೆ ಮೂರು ಜನ ಅಡಿಗೆ ಅವರನ್ನು ನೇಮಿಸಿಕೊಳ್ಳಬೇಕು, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೆ ಒಬ್ಬರನ್ನು ಕೆಲಸದಿಂದ ಬಿಡಿಸಿದಲ್ಲಿ ಅಂತಹ ಬಿಸಿ ಊಟ ತಯಾರಿಕರಿಗೆ ಇಡಿಗಂಟು ಹಣ ನೀಡಬೇಕು ಮತ್ತು ಪ್ರತ್ಯೇಕ ಕಲ್ಯಾಣ ಮಂಡಳಿಯನ್ನು ರಚಿಸಿ ಅದರ ಮೂಲಕ ಸರ್ಕಾರ ಅವರಿಗೆ ಸವಲತ್ತುಗಳನ್ನು ನೀಡಬೇಕು ಎಂದು ಹೇಳಿದರು.ಈ ಸಭೆಯಲ್ಲಿ ತಾಲೂಕು ಕಾರ್ಯದರ್ಶಿ ಕಂಚುಗಾರನಹಳ್ಳಿ ರೇಣುಕಾ, ಖಜಾಂಚಿ ಅಸ್ಮಬಾನು, ಉಪಾಧ್ಯಕ್ಷೆ ಕಣಿವೆಬಿಳಚಿ ಜಾನ್ಸಿ, ಸಹಕಾರ್ಯದರ್ಶಿ ಕರೇಕಟ್ಟೆ ಲಲಿತಾಬಾಯಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಸರೋಜ, ರುದ್ರಮ್ಮ, ಮಂಜುಳಾ, ಎ.ಐ.ಟಿ.ಯು.ಸಿಯ ಮುಖಂಡರಾದ ಜೈನುಲ್ಲಾಖಾನ್, ಗೌಸ್ ಪೀರ್, ಖಲಿಗಾರ್ ಶಪಿಉಲ್ಲಾ, ತಿಪ್ಪೇಶ್ ಹಾಜರಿದ್ದರು.