ಬಣ ರಾಜಕೀಯ । ಕೈ ಮುಖಂಡರ ಪದಗ್ರಹಣ ಕಾರ್ಯಕ್ರಮದಲ್ಲಿ ನೂಕಾಟ । ಮಾಜಿ, ಹಾಲಿ ಪದಾಧಿಕಾರಿಗಳು, ಸದಸ್ಯರ ನಡುವೆ ವಾಗ್ವಾದ
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆಯಲ್ಲಿ ನಡೆದ ಯುವ ಕಾಂಗ್ರೆಸ್ ಪದಗ್ರಹಣ ಸಮಾರಂಭ ಬಣ ರಾಜಕೀಯಕ್ಕೆ ಕಾರಣವಾಯಿತು.
ಅಂತಿಮ ಹಂತದಲ್ಲಿ ಎರಡು ಬಣಗಳ ವಾಗ್ಯುದ್ದ ಮತ್ತು ತಳ್ಳಾಟಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು. ನಿರ್ಗಮಿತ ಅಧ್ಯಕ್ಷ, ಪದಾಧಿಕಾರಿಗಳು ಮತ್ತು ನೂತನ ಅಧ್ಯಕ್ಷರ ಬಣಗಳ ನಡುವೆ ಅಧಿಕಾರ ಹಸ್ತಾಂತರ ಕಾರ್ಯಕ್ರಮಕ್ಕೆ ಹಿಂದಿನ ಪದಾಧಿಕಾರಿಗಳು, ಅಧ್ಯಕ್ಷರಿಗೆ ಆಹ್ವಾನ ನೀಡದಕ್ಕೆ ನೂಕಾಟ, ವಾಗ್ಯುದ್ಧ ನಡೆಯಿತು.ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಬಾಪೂಜಿ ಎಂಬಿಎ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಜರುಗಿತು. ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಬಣ ರಾಜಕೀಯ ಮತ್ತು ಪದಾಧಿಕಾರಿಗಳ ಮಧ್ಯದಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ಮತ್ತು ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಿಗೆ ಮುಂದಕ್ಕೆ ಸಾಗುವ ಬಗ್ಗೆ ತಿಳಿ ಹೇಳಿ ಸಲಹೆ ನೀಡಿದರೂ, ಅಂತಿಮವಾಗಿ ಮತ್ತೆ ಬಣ ರಾಜಕೀಯ ಮೇಳೈಸಿತು.
ಇತ್ತೀಚಿಗೆ ತಾನೇ ಯುವ ಕಾಂಗ್ರೆಸ್ ಚುನಾವಣೆ ನಡೆದು ಯುವ ಕಾಂಗ್ರೆಸ್ನಲ್ಲಿ ನೂತನ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಬ್ಲಾಕ್ ಪದಾಧಿಕಾರಿಗಳ ಆಯ್ಕೆಯಾಗಿತ್ತು. ಅವರ ಪ್ರದಗ್ರಹಣ ಸಮಾರಂಭ ಶುಕ್ರವಾರ ನಿಗದಿಯಾಗಿತ್ತು. ನಿಗದಿಯಂತೆ ನಡೆದ ಸಮಾರಂಭದಲ್ಲಿ ‘ಅಧ್ಯಕ್ಷರು ಮತ್ತು ಅವರ ಪದಗ್ರಹಣ ಸಮಾರಂಭಕ್ಕೆ ನಿರ್ಗಮಿತ ಅಧ್ಯಕ್ಷರಿಂದ ಅಧಿಕಾರ ಹಸ್ತಾಂತರವಾಗಬೇಕು. ಆದರೆ ಅವರನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ’ ಎಂದು ತಕರಾರು ಕೇಳಿ ಬಂದಿತು.ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷರಿಗೆ ಮಾತನಾಡಲು ಅವಕಾಶ ನೀಡಬೇಕು. ನಮ್ಮ ಅಹವಾಲುಗಳನ್ನು ಕೇಳಿಸಿಕೊಳ್ಳಬೇಕು. ಇದಕ್ಕೆ ಯುವ ಕಾಂಗ್ರೆಸ್ ಅಧ್ಯಕ್ಷರು, ರಾಜ್ಯಮಟ್ಟದ ಕಾರ್ಯದರ್ಶಿಗಳು, ಪದಾಧಿಕಾರಿಗಳು ಭಿನ್ನಾಭಿಪ್ರಾಯವನ್ನು ಸರಿಪಡಿಸಬೇಕು ಎಂದು ಪದೇ ಪದೇ ಮನವಿ ಮಾಡಿ ಕಾರ್ಯಕ್ರಮದಲ್ಲಿ ತಕರಾರು ತೆಗೆದ ಪ್ರಸಂಗ ನಡೆಯಿತು.
ಅಂತಿಮವಾಗಿ ಅಧ್ಯಕ್ಷರು ಮತ್ತು ರಾಜ್ಯ ಉಸ್ತುವಾರಿಗಳು ಕಾರ್ಯಕ್ರಮ ಮುಗಿದ ನಂತರ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸುವುದಕ್ಕಾಗಿ ತಿಳಿಸಿದರು. ಆದರೆ ಅಂತಿಮವಾಗಿ ಪದಾಧಿಕಾರಿಗಳು ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರದ ವೇಳೆ ನಿರ್ಗಮನ ಅಧ್ಯಕ್ಷರಿಂದಲೇ ಅಧಿಕಾರ ಹಸ್ತಾಂತರ ನಡೆಯಬೇಕು ಎಂದು ಆಗ್ರಹಿಸಿ ವೇದಿಕೆ ಮುಂಭಾಗದಲ್ಲಿ ಜೋರು ದನಿಯಲ್ಲಿ ಆಗ್ರಹಿಸಿದ ಘಟನೆ ನಡೆಯಿತು.ಈ ವೇಳೆ ರಾಜ್ಯದ ಪದಾಧಿಕಾರಿಗಳು ಸೇರಿ ಅಸಮಧಾನಿತರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಯಿತು. ಆದರೂ ಇದರ ನಡುವೆ ಅಧಿಕಾರ ಹಸ್ತಾಂತರ ನಡೆದು ಪರಸ್ಪರ ವಾಗ್ವಾದ ಮತ್ತು ಕೂಗಾಟಕ್ಕೆ ಕಾರಣವಾಯಿತು.
ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಮಂಜುನಾಥಗೌಡ, ಉಪಾಧ್ಯಕ್ಷೆ ದೀಪಿಕಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಪದಾಧಿಕಾರಿಗಳಾದ ಬಾಹುಬಲಿ ಜೈನ್ , ರಾಜ್ಯ ಉಸ್ತುವಾರಿ ನಿಗಮ್ ಬಂಡಾರಿ, ಜಿಲ್ಲಾಧ್ಯಕ್ಷ ವರುಣ್ ಬೆಣ್ಣಿಹಳ್ಳಿ, ನಿತಿನ್ ಕೊಂಡಜ್ಜಿ, ದೀಪಿಕ್ ಶೆಟ್ಟಿ, ಮೈನುದ್ದೀನ್, ತಾಹಿರ್ ಇತರರು ಇದ್ದರು.