ಪುತ್ತೂರು ಜಾತ್ರೆ: ಇಂದು, ನಾಳೆ ಸಂಚಾರ ಮಾರ್ಗ ಬದಲಾವಣೆ

KannadaprabhaNewsNetwork |  
Published : Apr 16, 2025, 12:38 AM IST
೨೩ | Kannada Prabha

ಸಾರಾಂಶ

ಪುತ್ತೂರು ಜಾತ್ರೆ ಹಿನ್ನೆಲೆಯಲ್ಲಿ ಬುಧವಾರ ಹಾಗೂ ಗುರುವಾರ ವಾಹನಗಳ ಸುಗಮ ಸಂಚಾರ ದೃಷ್ಟಿಯಿಂದ ಪುತ್ತೂರು ನಗರ ವ್ಯಾಪ್ತಿಯಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಆದೇಶಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಪ್ರಯುಕ್ತ ಏಪ್ರಿಲ್ 16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರದ ಆಗಮನ ಮತ್ತು ಏ.17 ರಂದು ಬ್ರಹ್ಮರಥೋತ್ಸವ ನಡೆಯಲಿರುವುದರಿಂದ ಇವೆರಡು ದಿನ ವಾಹನಗಳ ಸುಗಮ ಸಂಚಾರ ದೃಷ್ಟಿಯಿಂದ ಪುತ್ತೂರು ನಗರ ವ್ಯಾಪ್ತಿಯಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಆದೇಶಿಸಿದ್ದಾರೆ.

ಏಪ್ರಿಲ್ 16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳು ಬಪ್ಪಳಿಗೆಯಲ್ಲಿ ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗುವ ಸಮಯದಲ್ಲಿ ಸುಗಮ ಸಂಚಾರಕ್ಕಾಗಿ ಈ ಸಮಯದಲ್ಲಿ ಸಂಪ್ಯ ಕಡೆಯಿಂದ ಮಂಗಳೂರು- ಕಬಕ ಕಡೆಗೆ ಹೋಗುವ ವಾಹನಗಳು ಅಶ್ವಿನಿ ಜಂಕ್ಷನ್ ದರ್ಬೆ ಜಂಕ್ಷನ್- ಬೆದ್ರಾಳ- ಸಾಲ್ಮರ- ಪಡೀಲ್ ಮೂಲಕ ಸಂಚರಿಸಬೇಕು.

ಮಂಗಳೂರು- ವಿಟ್ಲ- ಕಬಕ ಕಡೆಯಿಂದ ಬರುವ ವಾಹನಗಳು ಲಿನೆಟ್ ಜಂಕ್ಷನ್- ಬೊಳುವಾರು ಜಂಕ್ಷನ್- ಪಡೀಲ್ - ಕೊಟೇಚಾ ಹಾಲ್ ಕ್ರಾಸ್- ಸಾಲ್ಮರ- ಎಪಿಎಂಸಿ- ದರ್ಬೆ- ಅಶ್ವಿನಿ ಜಂಕ್ಷನ್ ಮೂಲಕ ಸಂಚರಿಸಬೇಕು.

ಸಾರಿಗೆ ಬಸ್ ಮಾರ್ಗ ಬದಲಾವಣೆ:

ಬಸ್ ನಿಲ್ದಾಣದಿಂದ ಹೊರಡುವ ಎಲ್ಲ ಸಾರಿಗೆ ಬಸ್‍ಗಳು ಎಂ.ಟಿ. ರಸ್ತೆಯ ಮೂಲಕ ತೆರಳಿ, ಮುಂದೆ ಎಡಕ್ಕೆ ತಿರುಗಿ ಪರ್ಲಡ್ಕ ಬೈಪಾಸ್ ಮೂಲಕ ತೆರಳಬೇಕು. ಕಬಕ- ಮಂಗಳೂರು ಕಡೆಯಿಂದ ಬರುವ ಎಲ್ಲ ಸಾರಿಗೆ ಬಸ್‍ಗಳು ಲಿನೆಟ್-ಬೊಳುವಾರು- ಪಡೀಲ್- ಕೊಟೆಚಾ ಹಾಲ್ ಕ್ರಾಸ್- ಸಾಲ್ಮರ- ಎಪಿಎಂಪಿ ಮೂಲಕ ಬಸ್ ನಿಲ್ದಾಣಕ್ಕೆ ಸಂಚರಿಸಬೇಕು. ಉಪ್ಪಿನಂಗಡಿ ಕಡೆಯಿಂದ ಬರುವ ಎಲ್ಲ ಸಾರಿಗೆ ಬಸ್‍ಗಳು ಪಡೀಲ್- ಕೊಟೆಚಾ ಹಾಲ್ ಕ್ರಾಸ್- ಸಾಲ್ಮರ- ಎಪಿಎಂಸಿ ಮೂಲಕ ಬಸ್ ನಿಲ್ದಾಣಕ್ಕೆ ಸಂಚರಿಸಬೇಕು. ಸುಳ್ಯ- ಸಂಪ್ಯ- ಮಡಿಕೇರಿ ಕಡೆಯಿಂದ ಬರುವ ಎಲ್ಲ ಸಾರಿಗೆ ಬಸ್‍ಗಳು ಅಶ್ವಿನಿ ಜಂಕ್ಷನ್- ದರ್ಬೆ- ಅರುಣಾ ಥಿಯೇಟರ್ ಮೂಲಕ ಬಸ್ ನಿಲ್ದಾಣಕ್ಕೆ ಸಂಚರಿಸಬೇಕು.

ಅಟೋರಿಕ್ಷಾ ಸಂಚಾರ:

ನೆಹರೂನಗರ - ಬೊಳುವಾರು ಕಡೆಯಿಂದ ಬರುವ ಆಟೋಗಳು ಮಯೂರ ಇನ್ ಲ್ಯಾಂಡ್ ಬಳಿ ಪ್ರಯಾಣಿಕರನ್ನು ಇಳಿಸಿ, ಉರ್ಲಾಂಡಿ ಕ್ರಾಸ್ ಮೂಲಕ ವಾಪಸ್‌ ಸಂಚರಿಸಬೇಕು. ದರ್ಬೆ ಕಡೆಯಿಂದ ಬರುವ ರಿಕ್ಷಾಗಳು ಎಪಿಎಂಸಿ ರಸ್ತೆಯ ಮುಖಾಂತರ ನೆಲ್ಲಿಕಟ್ಟೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಿಂದ ಗಾಂಧಿಕಟ್ಟೆ ಕಡೆಗೆ ಬಂದು ಪ್ರಯಾಣಿಕರನ್ನು ಇಳಿಸಿ, ವಾಪಸ್‌ ಮುಖ್ಯ ರಸ್ತೆಯಾಗಿ ದರ್ಬೆ ಕಡೆಗೆ ಸಂಚರಿಸಬೇಕು. ಪರ್ಲಡ್ಕ- ಬಪ್ಪಳಿಗೆ ಕಡೆಯಿಂದ ಬರುವ ರಿಕ್ಷಾಗಳು ಕಿಲ್ಲೆ ಮೈದಾನದ ಬಳಿ ಪ್ರಯಾಣಿಕರನ್ನು ಇಳಿಸಿ ವಾಪಸ್‌ ಸಂಚರಿಸಬೇಕು.

ವಾಹನದ ಪಾರ್ಕಿಂಗ್:

ಉಪ್ಪಿನಂಗಡಿ, ಕೋಡಿಂಬಾಡಿ, ಬನ್ನೂರು ಮಾರ್ಗವಾಗಿ ಬರುವ ವಾಹನಗಳು ಎಪಿಎಂಸಿ ಆವರಣ, ಕೊಂಬೆಟ್ಟು ಬೋರ್ಡ್ ಹೈಸ್ಕೂಲ್ ಮೈದಾನ, ಬಂಟರ ಭವನ, ನೆಲ್ಲಿಕಟ್ಟೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು. ಸಂಪ್ಯ, ಸುಳ್ಯ, ಬೆಟ್ಟಂಪಾಡಿ, ಪಾಣಾಜೆ, ಪರ್ಲಡ್ಕ, ಪುರುಷರಕಟ್ಟೆ ಮಾರ್ಗವಾಗಿ ಬರುವ ವಾಹನಗಳು ತೆಂಕಿಲ ಗೌಡ ಸಮುದಾಯ ಭವನ, ತೆಂಕಿಲ ವಿವೇಕಾನಂದ ಶಾಲಾ ಮೈದಾನ, ಕಿಲ್ಲೆ ಮೈದಾನ, ತೆಂಕಿಲ ಗೌಡ ಸಮುದಾಯ ಭವನದ ಎದುರುಗಡೆ ಇರುವ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು. ವಿಟ್ಲ, ಕಬಕ, ನೆಹರೂ ನಗರ ಮಾರ್ಗವಾಗಿ ಬರುವ ವಾಹನಗಳು ಜೈನ ಭವನದ ಪಾರ್ಕಿಂಗ್ ಜಾಗ, ಅಸ್ಮಿ ಲಾಡ್ಜ್ ಬಳಿ ಇರುವ ಖಾಲಿ ಜಾಗ, ತೆಂಕಿಲ ದರ್ಶನ್ ಹಾಲ್ ಪಕ್ಕದ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌