ಬಳ್ಳಾರಿ: ಶಿಕ್ಷಣ ಕ್ಷೇತ್ರವನ್ನು ಸೇವಾ ವಲಯ ಎಂದು ಭಾವಿಸಿಕೊಂಡಿರುವ ನಾವು ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಆಶಯ ಹೊಂದಿದ್ದೇವೆ ಎಂದು ಎಸ್.ಬಿ.ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಸಂಸ್ಥಾಪಕಿ ಹಾಗೂ ಸಿಇಒ ಡಾ.ಭವ್ಯಾಶೇಖರ್ ತಿಳಿಸಿದರು.ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದ ಎಸ್.ಬಿ.ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ವಾರ್ಷಿಕೋತ್ಸವ ಹಾಗೂ ನೂತನ ಕಟ್ಟಡಗಳ ಉದ್ಘಾಟನೆ ಸಮಾರಂಭದಲ್ಲಿ ಪ್ರಾಸ್ತಾವಿಕ ಅವರು ಮಾತನಾಡಿದರು.
ಜನಾರ್ದನ ರೆಡ್ಡಿ ಹಾಗೂ ಲಕ್ಷ್ಮಿ ಅರುಣಾ ನಮ್ಮ ಸಂಸ್ಥೆಯ ಪ್ರೇರಕ ಶಿಕ್ತಿ. ಅವರ ಮಾರ್ಗದರ್ಶನ ಹಾಗೂ ಸಲಹೆಗಳಂತೆಯೇ ನಾವು ಶಿಕ್ಷಣ ಸಂಸ್ಥೆಯನ್ನು ಬೆಳೆಸುತ್ತಾ ಬಂದಿದ್ದೇವೆ. ಶಿಕ್ಷಣದ ಬಗೆಗಿನ ಅವರಿಗಿರುವ ಕಾಳಜಿಯ ಫಲದಿಂದಾಗಿಯೇ ಎಸ್.ಬಿ. ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಶಿಕ್ಷಣ ಸಂಸ್ಥೆಗಳು ಈ ಮಟ್ಟಿಗೆ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭಕ್ಕೆ ರಾಜ್ಯಪಾಲರು ಆಗಮಿಸಿರುವುದು ಅತ್ಯಂತ ಸಂತಸ ತಂದಿದೆ. ಶಿಕ್ಷಣ ಬಗೆಗಿನ ನಮ್ಮ ಬದ್ಧತೆ ಹಾಗೂ ಕಾಳಜಿಯ ದ್ಯೋತಕವಾಗಿಯೇ ಈ ಎಲ್ಲ ಮಹನೀಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ ಎಂದುಕೊಂಡಿರುವೆ ಎಂದರಲ್ಲದೆ, ಎಲ್ಲರ ಆಶೀರ್ವಾದ ಹಾಗೂ ಹಾರೈಕೆಗಳು ನಮ್ಮ ಸಂಸ್ಥೆಯ ಮೇಲೆ ಸದಾ ಇರಲಿ ಎಂದು ಮನವಿ ಮಾಡಿಕೊಂಡರು. ಸಂಸ್ಥೆಯ ಅಧ್ಯಕ್ಷ ದಮ್ಮೂರು ಶೇಖರ್ ಉಪಸ್ಥಿತರಿದ್ದರು.ಭಾರೀ ಜನಸ್ತೋಮ, ಯಶಸ್ವಿಗೊಂಡ ಕಾರ್ಯಕ್ರಮ: ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದ ಎಸ್.ಬಿ. ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ವಾರ್ಷಿಕೋತ್ಸವ ಹಾಗೂ ನೂತನ ಕಟ್ಟಡಗಳ ಉದ್ಘಾಟನೆ ಸಮಾರಂಭಕ್ಕೆ ಸಾವಿರಾರು ಜನರು ಸಾಕ್ಷಿಯಾದರು.
ದಮ್ಮೂರು, ಡಿ.ಕಗ್ಗಲ್, ಚಾನಾಳ್, ಬೈಲೂರು, ಸಿಂದಿಗೇರಿ, ಶಾನವಾಸಪುರ, ಶಿರಿಗೇರಿ, ಕರೂರು, ದರೂರು ಸೇರಿದಂತೆ ಹತ್ತಾರು ಗ್ರಾಮಗಳಿಂದ ಜನರು ವಾರ್ಷಿಕೋತ್ಸವ ಹಾಗೂ ರಾಜ್ಯಪಾಲರು ಉಪಸ್ಥಿತಿಯ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಬಳ್ಳಾರಿಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು ಹಾಗೂ ಶಿಕ್ಷಣ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.