)
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಕುಮಾರ್ ಸಮಾಧಿಗೆ ನೀಡಿದ 2.5 ಎಕರೆ ಜಾಗವನ್ನು ಸಾರ್ವಜನಿಕರ ಉಪಯೋಗಕ್ಕೆ ತಕ್ಕಂತೆ ಹಂಚಬೇಕು, ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದಲ್ಲ ಎಂದು ನಟ ಚೇತನ್ ಫೋಸ್ಟ್ ಮಾಡಿದ್ದರು. ಇದರಿಂದ ಕೆರಳಿದ ಡಾ.ರಾಜ್ ಅಭಿಮಾನಿಗಳು, ಕನ್ನಡ ಹೋರಾಟಗಾರರು ಶನಿವಾರ ಶೇಷಾದ್ರಿಪುರದಲ್ಲಿರುವ ನಟ ಚೇತನ್ ಮನೆಗೆ ಮುತ್ತಿಗೆ ಹಾಕಿದರು.
ಚೇತನ್ ಮನೆಗೆ ಆಗಮಿಸಿದ ಸಾ.ರಾ.ಗೋವಿಂದು ಸೇರಿ ಹಲವು ಹೋರಾಟಗಾರರು ತೀವ್ರ ಪ್ರತಿಭಟನೆ ನಡೆಸಿದರು. ಚೇತನ್ ಹೊರ ಬಂದು ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಬೇಕು ಅಂತ ಆಗ್ರಹಿಸಿದರು.ಬಹಿರಂಗವಾಗಿ ಕ್ಷಮೆಯಾಚನೆ:ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಮನೆಯಿಂದ ಹೊರಬಂದ ನಟ ಚೇತನ್ ಸಮರ್ಥನೆ ನೀಡುವ ಪ್ರಯತ್ನ ಮಾಡಿದರು. ಹೀಗಾಗಿ ಸಾ.ರಾ.ಗೋವಿಂದ್ ಹಾಗೂ ನಟ ಚೇತನ್ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಹೋರಾಟಗಾರರು ಮನೆಗೆ ನುಗ್ಗಲು ಯತ್ನಿಸಿದರು. ಹೋರಾಟಗಾರರ ಒತ್ತಾಯಕ್ಕೆ ಮಣಿದ ಚೇತನ್ ಅಂತಿಮವಾಗಿ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದು, ಬಳಿಕ ಸಾಮಾಜಿಕ ಕಾಳಜಿಯಿಂದ ಹಾಗೆ ಹೇಳಿದೆ ಎಂದು ತಿಳಿಸಿದರು.ನಿರ್ಮಾಪಕರ ಸಂಘ ಖಂಡನೆ:
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಸಂಘದ ಅಧ್ಯಕ್ಷ ಎಂ.ಜಿ.ರಾಮಮೂರ್ತಿ, ‘ ಏ.24ರಂದು ಕರ್ನಾಟಕದ ಮೆಚ್ಚಿನ ನಾಯಕ ಡಾ.ರಾಜ್ಕುಮಾರ್ ಅವರ ಹುಟ್ಟುಹಬ್ಬ. ಅದೇ ದಿನ ನಟ ಚೇತನ್ ಅಹಿಂಸ ಅವರು ಡಾ.ರಾಜ್ಕುಮಾರ್ ಅವರ ಸಮಾಧಿಗೆ ಸರ್ಕಾರ ಜಾಗ ನೀಡಿರುವ ಬಗ್ಗೆ ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ವರನಟ ರಾಜ್ಕುಮಾರ್ ಅವರಿಗೆ ಚೇತನ್ ಅಹಿಂಸ ಅವರು ಅಗೌರವ ತೋರಿದ್ದಾರೆ. ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದಿದ್ದಾರೆ.ಏ.24ರಂದು ನಟ ಚೇತನ್ ಅಹಿಂಸ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ‘ನಾವು ರಾಜ್ಕುಮಾರ್ ಅವರನ್ನು ಒಬ್ಬ ಮಹಾನ್ ಕಲಾವಿದರಾಗಿ ಗೌರವಿಸುತ್ತೇವೆ. ಆದರೆ, ಬೆಂಗಳೂರು ನಗರ ಮಧ್ಯದಲ್ಲಿ 2006ರಲ್ಲಿ ಒಬ್ಬ ನಟನ ‘ಸಮಾಧಿ ಕಾಂಪ್ಲೆಕ್ಸ್’ಗಾಗಿ 2.5 ಎಕರೆ ಭೂಮಿ ನೀಡುವುದು ತಿಳುವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ. 21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರವು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕ ಉಪಯೋಗಕ್ಕೆ ತಕ್ಕಂತೆ ಭೂಮಿ ಹಂಚಬೇಕು. ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದ ಅಲ್ಲ’ ಎಂದು ಬರೆದುಕೊಂಡಿದ್ದರು.