ಮೂಲ ಸಿದ್ಧಾಂತದಡಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹನೂರು ತಾಲೂಕು ಅಧ್ಯಕ್ಷರಾಗಿ ಅಜ್ಜಿಪುರ ಗ್ರಾಮದ ರಾಜಣ್ಣರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಹನೂರು ಭಾಗದಲ್ಲಿ ಸರಿಯಾಗಿ ಮಳೆಯಾಗದೆ ರೈತರು ಸಂಕಷ್ಟದಲ್ಲಿದ್ದು, ಪರಿಹಾರಕ್ಕೆ ಬದ್ಧ: ರಾಜಣ್ಣ
ಕನ್ನಡಪ್ರಭ ವಾರ್ತೆ ಹನೂರು ಮೂಲ ಸಿದ್ಧಾಂತದಡಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹನೂರು ತಾಲೂಕು ಅಧ್ಯಕ್ಷರಾಗಿ ಅಜ್ಜಿಪುರ ಗ್ರಾಮದ ರಾಜಣ್ಣರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಹಿರಿಯ ರೈತ ಮುಖಂಡ ಲೋಕೇಶ್ ಗೌಡ ಅಧ್ಯಕ್ಷತೆಯಲ್ಲಿ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ದೊಡ್ಡಲತ್ತೂರು ಗ್ರಾಮದ ಚಿನ್ನಸ್ವಾಮಿ ಗೌರವ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಆಲಂಬಾಡಿ ರತ್ನವೇನು ಗಂಗನ ದೊಡ್ಡಿ ರವಿ ಪೆದ್ದನಪಾಳ್ಯ ಈರಣ್ಣ ದಾಸನದೊಡ್ಡಿ ಮಹದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಕಾಂಚಳ್ಳಿ ಸೂರ್ಯ ಸಹ ಕಾರ್ಯದರ್ಶಿಯಾಗಿ ಕೂಡ್ಲೂರು ವೆಂಕಟೇಶ್, ಖಜಾಂಚಿಯಾಗಿ ಚಿಕ್ಕಲತೂರು ಗ್ರಾಮದ ವಿಜಿ, ಸಂಘಟನಾ ಕಾರ್ಯದರ್ಶಿಗಳಾಗಿ ಅಜ್ಜೀಪುರ ಶಿವಮೂರ್ತಿ, ಜಿ ಆರ್ ನಗರ ವರದರಾಜು, ಜಡೆ ಸ್ವಾಮಿ ರಾಮೇಗೌಡ ಸಹ ಕಾರ್ಯದರ್ಶಿಗಳಾಗಿ ಅಜ್ಜೀಪುರ ಶಿವಣ್ಣ ನಾಗರಾಜುರನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷ ರಾಜಣ್ಣ ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ಆಭಾರಿಯಾಗಿದ್ದೇನೆ. ಗೌರವಾಧ್ಯಕ್ಷನಾಗಿ ಕಳೆದ 3 ವರ್ಷಗಳಿಂದ ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ.
ಹಲವು ವರ್ಷಗಳಿಂದ ಹನೂರು ತಾಲೂಕು ವ್ಯಾಪ್ತಿಯಲ್ಲಿ ಸಮರ್ಪಕ ಮಳೆಯಾಗದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ವರ್ಷವೂ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರೈತರು ಬಿತ್ತನೆ ಮಾಡಲು ಜಮೀನು ಹದ ಮಾಡಿಕೊಂಡು ಆಕಾಶ ನೋಡುತ್ತಿದ್ದಾರೆ. ಆದರೆ ಮಳೆರಾಯ ಏಕೋ ಮುನಿಸಿಕೊಂಡಿದ್ದಾನೆ. ದೇವರ ದಯೆಯಿಂದ ಉತ್ತಮ ಮಳೆಯಾದರೆ ಬೆಳೆ ಬೆಳೆಯಬಹುದು. ಇಲ್ಲದಿದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಹಲವು ವರ್ಷಗಳಿಂದ ಸಮರ್ಪಕ ಮಳೆಯಾಗದೇ, ಇರುವುದರಿಂದ ಹಲವು ರೈತರು ಸಾಲ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇದೀಗ ಇರುವ ಅಲ್ಪ ನೀರಿನಲ್ಲಿ ಬೆಳೆ ಬೆಳೆದಿದ್ದಾರೆ. ಅಂತರ್ಜಲ ಮಟ್ಟ ಕುಸಿದು ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಬೆಳೆಗಳೆಲ್ಲ ಒಣಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ತುರ್ತುಪರಿಸ್ಥಿತಿಯನ್ನು ಅರಿತು ಹನೂರು ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು. ಜನಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಅವರು ಮನವಿ ಮಾಡಿದರು.
ಇದೆ ವೇಳೆ ರೈತ ಮುಖಂಡರಾದ ರಾಜೇಂದ್ರ, ರಾಮೇಗೌಡ, ರತ್ನಮ್ಮ ಶಿವಣ್ಣ ಉಮೇಶ್, ನಾಗೇಗೌಡ ಮಹದೇವ, ರಾಜಮಣಿ ಹಾಜರಿದ್ದರು.
ಮಹಿಳಾ ಘಟಕದ ಗೌರವ ಅಧ್ಯಕ್ಷರಾಗಿ ಮಾಟಳ್ಳಿ ಗ್ರಾಮದ ಪ್ರಿಯಾ, ಅಧ್ಯಕ್ಷರಾಗಿ ಪಳನಿಮೇಡು ಗ್ರಾಮದ ಮುತ್ತುಲಕ್ಷ್ಮಿ, ಉಪಾಧ್ಯಕ್ಷರಾಗಿ ಪಳನಿ ಮೇಲು ಶಾಂತ, ಗುಂಡಾಪುರ ಸುಧಾಮಣಿ ದೊಡ್ಡದತ್ತೂರು ಮೈನಾ ಪ್ರಧಾನ ಕಾರ್ಯದರ್ಶಿಯಾಗಿ ಬೇಬಿ ಸಂಘಟನಾ ಕಾರ್ಯದರ್ಶಿಯಾಗಿ ಕಲಾವತಿ ಶಾಂತಿ ಅವಿರೋಧ ಆಯ್ಕೆಯಾದರು.
ಹಸಿರು ಸೇನೆಯ ಅಧ್ಯಕ್ಷರಾಗಿ ಪ್ರದೀಪ್, ಉಪಾಧ್ಯಕ್ಷರಾಗಿ ತಂಗರಾಸು ಗೋವಿಂದರಾಜು ಪ್ರಧಾನ ಕಾರ್ಯದರ್ಶಿಯಾಗಿ ಚಂದನ್ ಸಂಘಟನೆ ಕಾರ್ಯದರ್ಶಿಯಾಗಿ ರಿಜ್ವಾನ್ರನ್ನು ಆಯ್ಕೆ ಮಾಡಲಾಯಿತು.
ಇದುವರೆಗೂ ಬಡಗಲಪುರ ನಾಗೇಂದ್ರರವರ ಬಳಗದಲ್ಲಿ ಗುರುತಿಸಿಕೊಂಡಿದ್ದ ರೈತ ಮುಖಂಡರು ಇವರ ಧೋರಣೆಯಿಂದ ಹೊರಬಂದು ನೂತನ ಸಂಘ ರಚನೆ ಮಾಡಿದ್ದಾರೆ.
---
15ಸಿಎಚ್ಎನ್53
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನೂತನ ಹನೂರು ತಾಲೂಕು ಘಟಕ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.