ಜಮೀನಿಗೆ ಮೇಯಲು ಬಂದ ಹಸುವಿನ ಕೆಚ್ಚಲು ಕೊಯ್ದರು

Sujatha NRPublished : Jun 22, 2025 9:18 AM

ಜಮೀನಿಗೆ ಮೇಯಲು ಬಂದ ಹಸುವಿನ ಕೆಚ್ಚಲನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಯ್ದು ವಿಕೃತಿ ಮೆರೆದಿರುವ ಘಟನೆ ಶನಿವಾರ ಬೆಂಗಳೂರು ದಕ್ಷಿಣ ತಾಲೂಕಿನ ಸೂಲಿವಾರ ಗ್ರಾಮದಲ್ಲಿ ನಡೆದಿದ್ದು, ತೀವ್ರ ರಕ್ತಸ್ರಾವವಾಗಿ ಹಸು ಮೃತಪಟ್ಟಿದೆ.

 ರಾಮನಗರ :  ಜಮೀನಿಗೆ ಮೇಯಲು ಬಂದ ಹಸುವಿನ ಕೆಚ್ಚಲನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಯ್ದು ವಿಕೃತಿ ಮೆರೆದಿರುವ ಘಟನೆ ಶನಿವಾರ ಬೆಂಗಳೂರು ದಕ್ಷಿಣ ತಾಲೂಕಿನ ಸೂಲಿವಾರ ಗ್ರಾಮದಲ್ಲಿ ನಡೆದಿದ್ದು, ತೀವ್ರ ರಕ್ತಸ್ರಾವವಾಗಿ ಹಸು ಮೃತಪಟ್ಟಿದೆ.

ಸೂಲಿವಾರ ಗ್ರಾಮದ ಹಾಲಿನ ಡೇರಿ ಅಧ್ಯಕ್ಷ ಮರಿಬಸವಯ್ಯ ಎಂಬುವರ ಹಸು ಅದೇ ಗ್ರಾಮದ ಗುರುಸಿದ್ದಪ್ಪ ಎಂಬುವವರ ಜಮೀನಿನಲ್ಲಿ ಮೇಯುತ್ತಿದ್ದಾಗ ಕಿಡಿಗೇಡಿಗಳು ಮಚ್ಚಿನಿಂದ ಹಸುವಿನ ಕೆಚ್ಚಲನ್ನು ಕೊಯ್ದಿದ್ದಾರೆ. ಹಸು ರಕ್ತಸ್ರಾವವಾಗಿ ಮೃತಪಟ್ಟಿದೆ. ಕೆಲ ದಿನಗಳ ಹಿಂದೆ ಗ್ರಾಮದಲ್ಲಿ ನಡೆದ ಡೇರಿ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮರಿಬಸವಯ್ಯ ಮತ್ತು ಗುರುಸಿದ್ದಪ್ಪ ನಡುವೆ ವೈಮನಸ್ಸು ಏರ್ಪಟ್ಟಿತು. ಹೀಗಾಗಿ ಗುರುಸಿದ್ದಪ್ಪ ವಿರುದ್ಧ ಮರಿಬಸವಯ್ಯ ಅವರು ಹಸುವಿನ ‌ಕೆಚ್ಚಲು ಕೊಯ್ದಿರುವ ಆರೋಪವನ್ನು ಮಾಡಿದ್ದಾರೆ ಎನ್ನಲಾಗಿದೆ.

ಮೃತಪಟ್ಟ ಹಸುವಿನ ಮರಣೋತ್ತರ ಪರೀಕ್ಷೆಯನ್ನು ತಾವರೆಕೆರೆ ಪಶು ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ತಿಂಗಳ ಹಿಂದೆ ಇಂತಹದ್ದೆ ಒಂದು ಪ್ರಕರಣ ಬೆಂಗಳೂರಿನ ಚಾಮರಾಜಪೇಟೆಯಲ್ಲೂ ನಡೆದಿತ್ತು.

Read more Articles on