ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ಗಮನ ನೀಡಬೇಕು

KannadaprabhaNewsNetwork | Published : Nov 11, 2024 1:04 AM

ಸಾರಾಂಶ

ಕ್ರೀಡೆಗಳಲ್ಲಿ ಭಾಗವಹಿಸಿ ಪದಕ ಪಡೆದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲೂ ಮೀಸಲಾತಿ ಇದೆ. ಸರ್ಕಾರಿ ಉದ್ಯೋಗಗಳು ಹೇರಳವಾಗಿ ಸಿಗುತ್ತಿವೆ. ರೈಲ್ವೆ, ಬ್ಯಾಂಕ್ ಮುಂತಾದ ಇಲಾಖೆಗಳಲ್ಲಿ ಹಲವಾರು ಕ್ರೀಡಾಪಟುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ವ್ಯಾಸಂಗದ ಜೊತೆಗೆ ಕ್ರೀಡೆಯಲ್ಲೂ ಭಾಗವಹಿಸಿ, ಭವಿಷ್ಯ ಉಜ್ವಲ ಮಾಡಿಕೊಳ್ಳಬಹದು.

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳು ಓದಿನ ಜೊತೆಗೊ ಕ್ರೀಡಾ ಚಟುವಟಿಕೆಗಳಿಗೂ ಗಮನ ನೀಡಬೇಕೇಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಸಲಹೆ ನೀಡಿದರು.

ಮೈಸೂರಿನ ಲಲಿತಾದ್ರಿಪುರದ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ 4 ವರ್ಷದಿಂದ 15 ವರ್ಷದ ಒಳಗಿನ ಮಕ್ಕಳಿಗಾಗಿ ಭಾನುವಾರ ಆಯೋಜಿಸಿದ್ದ ಸಿಲಿಕಾಥನ್ 2024- ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನೂ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಗಳಲ್ಲಿ ಭಾಗವಹಿಸಿ ಪದಕ ಪಡೆದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲೂ ಮೀಸಲಾತಿ ಇದೆ. ಸರ್ಕಾರಿ ಉದ್ಯೋಗಗಳು ಹೇರಳವಾಗಿ ಸಿಗುತ್ತಿವೆ. ರೈಲ್ವೆ, ಬ್ಯಾಂಕ್ ಮುಂತಾದ ಇಲಾಖೆಗಳಲ್ಲಿ ಹಲವಾರು ಕ್ರೀಡಾಪಟುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ವ್ಯಾಸಂಗದ ಜೊತೆಗೆ ಕ್ರೀಡೆಯಲ್ಲೂ ಭಾಗವಹಿಸಿ, ಭವಿಷ್ಯ ಉಜ್ವಲ ಮಾಡಿಕೊಳ್ಳಬಹುದು ಎಂದರು.

ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯವೂ ವೃದ್ದಿಯಾಗುತ್ತದೆ. ಹಾಗಾಗಿ ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಕೇವಲ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸುಗಳಿಗೆ ಸೇರುವಂತೆ ಒತ್ತಡ ಹೇರದೆ ಕ್ರೀಡಾ ಚಟುವಟಿಕೆಗಳ ಜೊತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ಪ್ರೊತ್ಸಾಹಿಸಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ಮಾತನಾಡಿ, ಗ್ರೀಕ್, ಈಜಿಪ್ಟ್, ಭಾರತವೂ ಸೇರಿದಂತೆ ಕ್ರೀಡಾ ಚಟುವಟಿಕೆಗಳಿಗೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ. ಭಾರತದಲ್ಲಿ ದೇಸಿ ಆಟಗಳಾದ ಕಬಡ್ಡಿ, ಖೋ ಖೋ, ಹಾಕಿ ಮುಂತಾದ ಕ್ರೀಡೆಗಳು ಪ್ರಸಿದ್ದಿ ಪಡೆದಿವೆ. ಕ್ರೀಡೆಗಳು ಜೀವನದಲ್ಲಿ ಶಿಸ್ತು ತರತ್ತವೆ. ಇದು ಖಂಡಿತವಾಗಿಯೂ ಸಮರ್ಪಣೆ ಮತ್ತು ತಾಳ್ಮೆಯ ಮೌಲ್ಯಗಳನ್ನು ಕಲಿಸುತ್ತದೆ. ಸೋಲುಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಕ್ರೀಡೆಗಳು ಜನರಿಗೆ ಕಲಿಸುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ, ಕ್ರೀಡೆಯು ವ್ಯಕ್ತಿಗಳ ಆಲೋಚನಾ ಸಾಮರ್ಥ್ಯವನ್ನು ಸುಧಾರಿಸುತ್ತವೆ. ಕ್ರೀಡೆಗಳು ಖಂಡಿತವಾಗಿಯೂ ಮನಸ್ಸನ್ನು ಚುರುಕುಗೊಳಿಸುತ್ತವೆ ಎಂದರು.

ಕ್ರೀಡೆಗಳನ್ನು ಭಾಗವಹಿಸುವ ಮಕ್ಕಳು ಪರೀಕ್ಷೆಯಲ್ಲಿ ಇತರರಿಗಿಂತ ಉತ್ತಮವಾಗಿ ಅಂಕಗಳನ್ನು ತೆಗೆದು ಕೊಳ್ಳುತ್ತೀದ್ದಾರೆ.

ಕ್ರೀಡೆಯು ಪ್ರತಿಯೊಬ್ಬರ ಜೀವನದಲ್ಲಿ ವಿಶೇಷ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಕ್ರೀಡೆಗಳು ಯಾವಗಲೂ ಒಬ್ಬ ವ್ಯಕ್ತಿಯನ್ನು ಆರೋಗ್ಯಕರವಾಗಿ, ಸಮೃದ್ಧವಾಗಿ ಮತ್ತು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ. ಆರೋಗ್ಯವಂತ ದೇಹದಿಂದ ಮಾತ್ರ ಮನಸ್ಸು ಆರೋಗ್ಯವಾಗಿರಲು ಸಾಧ್ಯ. ನಾವು ಎಲ್ಲಾ ಸಮಯದಲ್ಲೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನೂ ಕಾಪಾಡಿಕೊಂಡಾಗ ಮಾತ್ರ ನಾವು ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದರು.

ಕ್ರೀಡೆಗಳು ಮನರಂಜನೆ ಮತ್ತು ದೈಹಿಕ ಚಟುವಟಿಕೆಯ ಅತ್ಯಂತ ಉಪಯುಕ್ತ ಸಾಧನವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಂದು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲೇಬೇಕು. ಆದ್ದರಿಂದ ಜೀವನದಲ್ಲಿ ಕ್ರೀಡೆಗಳು ಮತ್ತು ಈ ರೀತಿಯ ಕ್ರೀಡಾಕೂಟಗಳು ಅತ್ಯವಶ್ಯಕ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೋಬಳಿ ಮಟ್ಟದಿಂದ ರಾಜ್ಯದವರಿಗೆ ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಆಸಕ್ತಿಯಿರುವ ಕ್ರೀಡಾ ಚಟುವಟಿಕೆಗಳನ್ನೂ ಗುರುತಿಸಿ ಅವರ ವಿದ್ಯಾಭಾಸದ ಜೊತೆಗೆ ಕ್ರೀಡಾ ತರಬೇತಿಯನ್ನೂ ನೀಡುವ ವ್ಯವಸ್ಥೆ ಮಾಡಿದ್ದಾರೆ. ಆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ, ಕ್ರೀಡಾ ತರಬೇತಿಯನ್ನೂ ಉಚಿತವಾಗಿ ಇರುತ್ತದೆ.. ಅವರೆಲ್ಲರೂ ಖೇಲೋ ಇಂಡಿಯಾ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತೀದ್ದಾರೆ. ಕ್ರೀಡೆಗಳು ಸಾಮಾಜಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತವೆ. ವಿವಿಧತೆಯಲ್ಲಿ ಏಕತೆಯನ್ನು ಮತ್ತು ರಾಷ್ಟ್ರೀಯತೆಯನ್ನು ಪಡೆಯಲು ಸಹಾಯ ಮಾಡುತ್ತವೆ ಎಂದರು.

ಭಾರತ ಸರ್ಕಾರವೂ 2036 ರಲ್ಲಿ ನಡೆಯುವ ಒಲಂಪಿಕ್ಸ್ ಸ್ಪರ್ಧೆಯನ್ನೂ ಆಯೋಜಿಸಲೂ ಮುಂದಿನ ವರ್ಷ ನಡೆಯಲಿರುವ ಬಿಡ್ ನಲ್ಲಿ ಭಾಗವಹಿಸುತ್ತಿದೆ. ಭಾರತದಲ್ಲಿ ಒಲಂಪಿಕ್ಸ್ ಗೇಮ್ ಆಯೋಜನೆಗೊಂಡರೆ ದೇಶದ ಆರ್ಥಿಕತೆ ಮತ್ತು ವಿಶ್ದದಲ್ಲಿ ಭಾರತದ ಹೆಸರು ಪ್ರಸಿದ್ಧಿಯಾಗಲಿದೆ.. ಸಿಲಿಕಾನ್ ಸಿಟಿ ಸ್ಕೂಲ್ ಆಯೋಜಿಸಿರುವ ಈ ರೀತಿಯ ಕ್ರೀಡಾಕೂಟಗಳಲ್ಲಿ ಮಕ್ಕಳು ಭಾಹವಹಿಸುತ್ತಾ ತಮ್ಮ ಪ್ರತಿಭೆಯನ್ನೂ ಉನ್ನತಿಕರಿಸಿಕೊಳ್ಳಬೇಕು.. ರಾಷ್ಟ್ರೀಯ, ಏಷ್ಯನ್, ಒಲಂಪಿಕ್ಸ್ ಕ್ರೀಡಾಕೂಟಗಳಲ್ಲೂ ಪದಕಗಳನ್ನೂ ಗೆಲ್ಲುವುದರ ಮೂಲಕ ಮೈಸೂರಿಗೆ, ಭಾರತಕ್ಕೆ ಹೆಸರು ತರುವಂತಾಗಲಿ ಎಂದು ಡಾ. ಈ.ಸಿ.ನಿಂಗರಾಜ್ ಗೌಡ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಎಲ್. ರವಿ ಮಾತನಾಡಿ, ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ಸಂಸ್ಥೆಯು ಕಳೆದ 19 ವರ್ಷಗಳಿಂದ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. 2500 ವಿದ್ಯಾರ್ಥಿಗಳು ಇದ್ದಾರೆ. ನಮ್ಮ ವಿದ್ಯಾರ್ಥಿಗಳು ಈಜು, ಟೆನ್ನಿಸ್, ಟೇಬಲ್ ಟೆನ್ನಿಸ್, ವಾಲಿಬಾಲ್, ಥ್ರೊಬಾಲ್, ಚೆಸ್, ಕರಾಟೆ ಸ್ಪರ್ಧೆಗಳಲ್ಲಿ ರಾಷ್ಟೀಯ ಮಟ್ಟದಲ್ಲಿ ಭಾಗವಹಿಸಿ ಪದಕಗಳನ್ನೂ ಗೆದ್ದಿದ್ದಾರೆ. ಅವರೆಲ್ಲರಿಗೂ ನಮ್ಮ ಸಂಸ್ಥೆಯಲ್ಲಿ ಉಚಿತ ಶಿಕ್ಷಣವನ್ನೂ ನೀಡುತ್ತಿದ್ದೇವೆ. ಅದೇ ರೀತಿ ಮೈಸೂರಿನ ಈ ಸಂಸ್ಥೆಯಲ್ಲೂ ಶಿಕ್ಷಣದ ಜೊತೆಗೆ ಸಂಗೀತ, ಯೋಗ, ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡಾ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡುತ್ತೀದ್ದೇವೆ. ಸುಸಜ್ಜಿತ ಕಟ್ಟಡದ ಜೊತೆಗೆ 8 ಎಕರೆ ಹಸಿರು ಕ್ಯಾಂಪಸ್ ಅನ್ನೂ ಹೊಂದಿದ್ದು , ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಉತ್ಕೃಷ್ಟವಾದ ಗುಣಮಟ್ಟದ ಶಿಕ್ಷಣವನ್ನೂ ಹಲವಾರು ಶಿಕ್ಷಣತಜ್ಞರ ನೆರವಿನಿಂದ ನೀಡುತ್ತೀದ್ದೇವೆ. ಮೈಸೂರಿನ ವಿದ್ಯಾರ್ಥಿಗಳ ಪೋಷಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಶಾಲೆಯ ಪ್ರಾಂಶುಪಾಲರಾದ ಡಾ.ದೀಪ್ತಿ ಚರ್ತುವೇದಿ, ಕೆ.ಎನ್.ಸಂತೋಷ್, ರೋಟರಿಯನ್ ಎಂ.ಮೋಹನ್, ಅಧ್ಯಾಪಕಿಯರು, ಕ್ರೀಡಾ ಸ್ಪರ್ಧೆಗಳ ತೀರ್ಪುಗಾರರು, ಮೈಸೂರಿನ ಎಲ್ಲಾ ಶಾಲೆಯ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು 12 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

Share this article