ಗೋಕರ್ಣ: ಇಲ್ಲಿನ ಕೆನರಾ ಶಿಕ್ಷಣ ಪ್ರಸಾರಕ ಮಂಡಳದ ಭದ್ರಕಾಳಿ ಪದವಿಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನವನ್ನು ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಸಾಂಸ್ಕೃತಿಕ ಸಮಿತಿಯ ಸಹಯೋಗದಲ್ಲಿ ಮಂಗಳವಾರ ಆಚರಿಸಲಾಯಿತು.ಹಿರಿಯ ಉಪನ್ಯಾಸಕ ರಾಮಮೂರ್ತಿ ನಾಯಕ ಮಾತನಾಡಿ, ದೇಶದ ಸಂವಿಧಾನವು ಲಿಖಿತವಾಗಿದ್ದು, ಉಳಿದೆಲ್ಲ ರಾಷ್ಟ್ರಗಳ ಸಂವಿಧಾನಕ್ಕಿಂತ ಮಹತ್ತರವಾಗಿದೆ. ಸಂವಿಧಾನವನ್ನು ಗೌರವಿಸಿ ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಸಿ. ನಾಯ್ಕ ಮಾತನಾಡಿ, ಸಮಾನತೆಯ ಹರಿಕಾರರಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಸಾಧನೆ ದೇಶಕ್ಕೆ ಅವರು ಕೊಟ್ಟ ಕೊಡುಗೆಗಳನ್ನು ಸ್ಮರಿಸಿದರು. ಉಪನ್ಯಾಸಕರಾದ ಸತ್ಯನಾರಾಯಣ ಎಂ., ಸಂದೀಪ ನಾಯಕ, ಸಾವಿತ್ರಿ ಗೌಡ ಉಪಸ್ಥಿತರಿದ್ದರು. ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಲಾಯಿತು. ಉಪನ್ಯಾಸಕ ಎನ್.ಎಸ್. ಲಮಾಣಿ ಸ್ವಾಗತಿಸಿದರು. ರಾಜಶೇಖರ ಬಾಗೇವಾಡಿ ವಂದಿಸಿದರು. ಉಪನ್ಯಾಸಕಿ ಪಲ್ಲವಿ ಹೆಗಡೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಧನ್ಯಾ ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು.
ಯಲ್ಲಾಪುರ: ನಾಗರಿಕ ಹಕ್ಕು ಮತ್ತು ಕರ್ತವ್ಯವನ್ನು ಅರಿತಾಗ ಮಾತ್ರ ಸಾಮಾಜಿಕವಾಗಿ ಗೌರವದಿಂದ ಬದುಕಬಹುದು. ಕಾನೂನು ತಿಳಿವಳಿಕೆಯಿಂದ ಅಪಾಯಗಳು ಕಡಿಮೆಯಾಗುತ್ತದೆ. ಸಂವಿಧಾನದ ಆಶಯಗಳನ್ನು ಈಡೇರಿಸಲು ಸಫಲರಾಗಬೇಕು ಎಂದು ವಿವೇಕಾನಂದ ಸಾಹಿತ್ಯ ಬಳಗದ ಉಪಾಧ್ಯಕ್ಷ ಜಿ.ಎನ್. ಕೋಮಾರ ತಿಳಿಸಿದರು.ನ. ೨೬ರಂದು ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಸಂವಿಧಾನ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ನಂತರ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿಗಳ ಪ್ರತಿನಿಧಿಗಳು ಸಂವಿಧಾನ ದಿನಾಚರಣೆ ಅಂಗವಾಗಿ ಅಣಕು ಸಂಸತ್ತಿನ ಅಧಿವೇಶನದ ಕಾರ್ಯ ಕಲಾಪಗಳನ್ನು ನಡೆಸಿಕೊಟ್ಟರು.