ರಾಮಮೂರ್ತಿ ನವಲಿ
35 ಸದಸ್ಯರನ್ನು ಒಳಗೊಂಡಿರುವ ಇಲ್ಲಿಯ ನಗರಸಭೆಯಲ್ಲಿ ಬಿಜೆಪಿ ಆಡಳಿತವಿದ್ದು ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಶುರುವಾಗಿದೆ.
ಪ್ರಸ್ತುತ ಅಧ್ಯಕ್ಷರಾಗಿದ್ದ ರಮೇಶ ಚೌಡ್ಕಿ ತಮ್ಮ ವೈಯಕ್ತಿಕ ಕಾರಣಗಳಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಈ ಗಾದಿಗೆ ಬರಲು ಮೂವರು ತೆರೆಮರೆಯ ಕಸರತ್ತು ನಡೆಸಿದ್ದಾರೆ.ಈ ಹಿಂದೆ ಕೇವಲ ಹಣಕಾಸು ಸ್ಥಾಯಿ ಸಮಿತಿ ಮಾತ್ರ ಇತ್ತು. ಇದೀಗ ಸರ್ಕಾರ ಹಣಕಾಸು ಸ್ಥಾಯಿ ಸಮಿತಿಯೊಂದಿಗೆ ಮೂರು ಸಮಿತಿ ರಚಿಸಲು ಆದೇಶಿಸಿದೆ. ಹೀಗಾಗಿ ಪೌರಾಡಳಿತ ಇಲಾಖೆ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ, ಪಟ್ಟಣ ಯೋಜನೆ ಮತ್ತು ಪುರೋಭಿವೃದ್ಧಿ ಸಮಿತಿ ಮತ್ತು ಲೆಕ್ಕ ಪತ್ರಗಳ ಸಮಿತಿ ರಚಿಸುವಂತೆ ಜೂ.6ರಂದು ನಗರಸಭೆಗಳಿಗೆ ಆದೇಶಿಸಿದೆ.
ಮೂರು ತಿಂಗಳ ಅವಧಿ:
ಇಲ್ಲಿನ ನಗರಸಭೆಯ ಆಡಳಿತ ಮಂಡಳಿಯ ಅವಧಿ ಮೂರು ತಿಂಗಳು ಮಾತ್ರ ಬಾಕಿ ಇದೆ. ಈ ಅವಧಿಗೆ ಹಣಕಾಸು ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಲು ಉಸ್ಮಾನ್, ವಾಸುದೇವ ನವಲಿ, ಜಯಶ್ರೀ ರೇಸ್ನಲ್ಲಿದ್ದಾರೆ. ಈಗಾಗಲೇ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರನ್ನು ಭೇಟಿಯಾಗಿ ತಮಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.ಹಣಕಾಸು ಸ್ಥಾಯಿ ಸಮಿತಿಗೆ ಚುನಾವಣೆ ದಿನಾಂಕ ಘೋಷಣೆ ಆಗದೇ ಇದ್ದರೂ ಅಧ್ಯಕ್ಷ ಸ್ಥಾನಕ್ಕೇರಲು ಆಕಾಂಕ್ಷಿಗಳು ನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರೆ.ಈ ಹಿಂದೆ ನಗರಸಭೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ರಮೇಶ ಚೌಡ್ಕಿ ಅವರು ರಾಜೀನಾಮೆ ನೀಡಿದ್ದು ಸ್ವೀಕೃತಗೊಂಡಿದೆ. ಶೀಘ್ರದಲ್ಲಿಯೇ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಪೌರಾಯುಕ್ತ ವಿರೂಪಾಕ್ಷಮೂರ್ತಿ ಹೇಳಿದರು. ವೈಯಕ್ತಿಕ ಕಾರಣಗಳಿಂದ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಸರ್ಕಾರ 4 ಸಮಿತಿ ರಚಿಸುವಂತೆ ಆದೇಶಿಸಿದ್ದು ಈ ಸಮಿತಿಗಳ ಅಧ್ಯಕ್ಷರ ಆಯ್ಕೆ ನಡೆಯುತ್ತಿದೆ ಎಂದು ಹಣಕಾಸು ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಮೇಶ ಚೌಡ್ಕಿ ಹೇಳಿದರು.