- ಗೊಲ್ಲರಹಳ್ಳಿಯಲ್ಲಿ ದುರ್ಗಮ್ಮ, ಮರಿಯಮ್ಮ ದೇವಸ್ಥಾನ ಗೃಹಪ್ರವೇಶ, ಧರ್ಮಸಭೆ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಶಾಸಕನಾಗಿ 30 ತಿಂಗಳ ಅವಧಿಯಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಕೆಲ ಗ್ರಾಮಗಳ ದೇವಸ್ಥಾನ ನಿರ್ಮಾಣ ಮತ್ತು ಗೋಪುರಗಳ ನಿರ್ಮಾಣ, ಕಳಸಾರೋಹಣಕ್ಕೆ ಸರ್ಕಾರದಿಂದ ₹10 ಕೋಟಿ ಅನುದಾನ ನೀಡಿದ್ದೇನೆ. ಕ್ಷೇತ್ರದ ಜನರಲ್ಲಿ ದೇವರ ಮೇಲೆ ನಂಬಿಕೆ ಹೆಚ್ಚಿರುವ ಕಾರಣ ಇದು ಭಕ್ತಿಯ ನಾಡಾಗಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.ತಾಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ಶನಿವಾರ ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಶ್ರೀ ದುರ್ಗಮ್ಮ, ಮರಿಯಮ್ಮ ದೇವಸ್ಥಾನ ಗೃಹಪ್ರವೇಶ ಮೂರ್ತಿ ಪುನರ್ ಪ್ರಾಣ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರ ಕಳಸಾರೋಹಣ ಧರ್ಮಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆನಕನಹಳ್ಳಿಯಲ್ಲಿ ಹುಟ್ಟಿ 25 ವರ್ಷಗಳಿಂದ ಗೊಲ್ಲರಹಳ್ಳಿಯಲ್ಲಿ ಜೀವನ ಮಾಡುತ್ತಿದ್ದೇನೆ. ಗೊಲ್ಲರಹಳ್ಳಿ, ಹೊಸ ಗೊಲ್ಲರಹಳ್ಳಿ ಗ್ರಾಮಗಳಿಗೆ ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ರೈತರು, ಶಿಕ್ಷಕರು, ಅಧಿಕಾರಿಗಳು ಕರ್ತವ್ಯದಲ್ಲಿ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ರೂಢಿಸಿಕೊಂಡರೆ ಕೆಲಸದಲ್ಲಿ ಸುಖದ ಮೂಲವಿರುತ್ತದೆ. ಧಾರಾವಾಹಿಗಳಲ್ಲಿ ಕಾಲ್ಪಿನಿಕ ಪಾತ್ರಗಳು ಹೆಚ್ಚಾಗಿರುತ್ತವೆ. ಇತ್ತೀಚೆಗೆ ಮಹಿಳೆಯರು ಹೆಚ್ಚು ಧಾರಾವಾಹಿಗಳನ್ನು ನೋಡುತ್ತಿದ್ದಾರೆ. ಮಕ್ಕಳಿಗೆ ಮೊಬೈಲ್ ನೋಡುತ್ತ ಊಟ ಮಾಡಿಸುವ ಪರಿಪಾಠ ಬೆಳೆದಿದೆ. ಇವೆಲ್ಲಕ್ಕಿಂತ ಉತ್ತಮ ಸಂಸ್ಕಾರ ಕಲಿಸುವ ಸಮಯಪ್ರಜ್ಞೆ ಪೋಷಕರಲ್ಲಿ ಮೂಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಸುರೇಂದ್ರ ನಾಯ್ಕ, ಮಾಜಿ ತಾಪಂ ಸದಸ್ಯ ರಮೇಶ್ ದಾಸರಹಳ್ಳಿ, ಗ್ರಾ.ಪಂ. ಸದಸ್ಯ ನಟರಾಜ, ಗೋವಿಂದ ಸ್ವಾಮಿ, ಸುಲೋಚನಮ್ಮ, ನಿವೃತ್ತ ಆಹಾರ ಅಧಿಕಾರಿ ಕೆ.ಸಿ. ನರಸಿಂಹಪ್ಪ, ಶ್ರೀ ದುರ್ಗಮ್ಮ ಶ್ರೀ ಮರಿಯಮ್ಮ ದೇವಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಜೆ.ಪಿ. ಸತೀಶ್ ಮಾತನಾಡಿದರು.
- - -
ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ನಡೆದ ಧರ್ಮಸಭೆಯಲ್ಲಿ ಹಿರೇಕಲ್ಮಠದ ಶ್ರೀಗಳು ಮಾತನಾಡಿದರು. ಶಾಸಕ ಡಿ.ಜಿ.ಶಾಂತನಗೌಡ ಮತ್ತಿತರ ಗಣ್ಯರು ಇದ್ದರು.