ರೈತರಿಗೆ ಕೃಷಿಯ ಮಹತ್ವ ತಿಳಿಸುವ ಸುತ್ತೂರು ಮಠ

KannadaprabhaNewsNetwork | Published : Jan 31, 2025 12:47 AM

ದೇಶದಲ್ಲಿ ಜನಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಕೃಷಿ ಭೂಮಿ ಹೆಚ್ಚಾಗುತ್ತಿಲ್ಲ

ಕನ್ನಡಪ್ರಭ ವಾರ್ತೆ ನಂಜನಗೂಡುಕೃಷಿ ಲಾಭದಾಯಕವಲ್ಲ ಎಂದು ಕೃಷಿಯಿಂದ ವಿಮುಖವಾಗುತ್ತಿರುವ ಸಂದರ್ಭದಲ್ಲಿ ಸುತ್ತೂರು ಮಠದವರು ಜಾತ್ರೆಯ ಮೂಲಕ ರೈತರಿಗೆ ವೈಜ್ಞಾನಿಕ ಆವಿಷ್ಕಾರಗಳನ್ನು ಪರಿಚಯಿಸುವ ಮೂಲಕ ಪ್ರೋತ್ಸಾಹ ನೀಡಿ ಕೃಷಿಯ ಮಹತ್ವವನ್ನು ತಿಳಿಸುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಕೃಷಿ ಮೇಳ ಮತ್ತು ದನಗಳ ಜಾತ್ರೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ದೇಶದಲ್ಲಿ ಜನಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಕೃಷಿ ಭೂಮಿ ಹೆಚ್ಚಾಗುತ್ತಿಲ್ಲ, ಬದಲಾಗಿ ನಗರೀಕರಣ, ಉದ್ಯಮ ಬೆಳವಣಿಗೆ, ರಸ್ತೆ, ರೇಲ್ವೆ ಮಾರ್ಗಗಳಿಗಾಗಿ ಕೃಷಿ ಭೂಮಿ ದಿನ ದಿನ ಕಡಿಮೆಯಾಗುತ್ತಿದೆ, ಇರುವ ಭೂಮಿ ಎಲ್ಲವೂ ಕೃಷಿಗೆ ಯೋಗವಾದುದಲ್ಲ, ಆದ್ದರಿಂದ ದೇಶ ಗಂಭೀರ ಸವಾಲನ್ನು ಎದುರಿಸುತ್ತಿದೆ, ದೇಶದ ಶೇ. 50ರಷ್ಟು ಜನರು ಕೃಷಿ ಮತ್ತು ಕೃಷಿ ಸಂಬಂಧಿತ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ, ಆದರೆ ದೇಶದ ಜಿಡಿಪಿ ಪ್ರಮಾಣದಲ್ಲಿ ಅವರ ಪಾಲು 20ರಷ್ಟು ಮಾತ್ರ, ಆದರೆ ಶೇ. 80ರಷ್ಟು ಪಾಲನ್ನು ಉಳಿಕೆ ಉದ್ಯಮಗಳ ಮೂಲಕ ನೀಡುತ್ತಿರುವುದರಿಂದಾಗಿ ಕೃಷಿಯನ್ನ ಅವಲಂಭಿಸಿರುವ ರೈತರು ಸಹಾ ಕೃಷಿಯಿಂದ ವಿಮುಖರಾಗುತ್ತಿದ್ದು, ತಮ್ಮ ಮಕ್ಕಳನ್ನು ಇತರೆ ವೃತ್ತಿಗೆ ಕಳುಹಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ನಮಗೆ ಕಂಪ್ಯೂಟರ್ ನಿಂದ ಅನ್ನ ಸಿಗುವುದಿಲ್ಲನಮಗೆ ಕಂಪ್ಯೂಟರ್ ನಿಂದ ಅನ್ನ ಸಿಗುವುದಿಲ್ಲ, ಆದ್ದರಿಂದ ವ್ಯವಸಾಯ ಯೋಗ್ಯವಾದ ಜಮೀನನ್ನು ಸದ್ಭಳಕೆ ಮಾಡಿಕೊಳ್ಳಬೇಕಿದೆ, ಇದಕ್ಕೆ ಪೂರಕವಾಗಿ ಸುತ್ತೂರು ಮಠದವರು ಜಾತ್ರೆಯಲ್ಲಿ ಪೂರಕ ಮಾಹಿತಿ ನೀಡುವುದಲ್ಲದೆ, ಪ್ರಗತಿಪರ ರೈತರನ್ನು ಸನ್ಮಾನಿಸುವ ಮೂಲಕ ಅವರ ಅನುಭವವನ್ನು ಜಾತ್ರೆಯಲ್ಲಿ ಇತರ ರೈತರಿಗೆ ಹಂಚುವ ಮೂಲಕ ಕೃಷಿಗೆ ಉತ್ತೇಜನ ನೀಡುತ್ತಿದೆ ಎಂದರು.ವಿಧಾನ ಪರಿಷತ್ ಸದಸ್ಯ ಚಿತ್ರದುರ್ಗ ಕೆ.ಎಸ್. ನವೀನ್ ಮಾತನಾಡಿ, ಕಳೆದ 20 ವರ್ಷಗಳ ಅವಧಿಯಲ್ಲಿ ಕೃಷಿಯನ್ನು ಅವಲಂಭಿಸಿರುವ ರೈತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದು, ಕೃಷಿಕರ ಮಕ್ಕಳು ಸಣ್ಣಪುಟ್ಟ ಉದ್ಯೋಗವನ್ನರಸಿ ಮಹಾನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಕೃಷಿಯನ್ನು ಅವಲಂಭಿಸಿರುವ ಜನರಿಗೆ ಸೂಕ್ತ ಬೆಂಬಲ ಮತ್ತು ನೆರವಿನ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಕೃಷಿಗೆ ನೆರವಾಗುವಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಗುರು ಸಿದ್ದೇಶ್ವರ ಬೃಹನ್ಮಠದ ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಪುಷ್ಪ ಅಮರನಾಥ್, ಶಿವನಗೌಡ ಆರ್. ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಎಚ್.ಕೆ. ಸುರೇಶ್ ಇದ್ದರು.