ಶಿರಹಟ್ಟಿ: ಜಗತ್ತಿನ ಎಲ್ಲ ತತ್ವ, ಸಿದ್ಧಾಂತಗಳು ಕರ್ಮದ ಬಗೆಗೆ ಹೇಳುತ್ತವೆ. ಆದರೆ, ಬಸವಾದಿ ಶರಣರ ವಚನಗಳು ಬದುಕಿನಲ್ಲಿ ಹತಾಶರಾದವರಿಗೆ ಬದುಕಲು ಪ್ರೇರಣೆ ನೀಡುತ್ತವೆ ಎಂದು ಉಪನ್ಯಾಸಕಿ ಡಾ. ಸವಿತಾ ಸಿದ್ದನೂರ ತಿಳಿಸಿದರು.ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕದಳಿ ಮಹಿಳಾ ವೇದಿಕೆ ಮತ್ತು ಜಗದ್ಗುರು ಫಕೀರೇಶ್ವರ ಪ್ರಥಮದರ್ಜೆ ಕಾಲೇಜಿನ ಆಶ್ರಯದಲ್ಲಿ ಜರುಗಿದ ಲಿಂ. ನೀಲಾವತಿ ಮಹಾಲಿಂಗಪ್ಪ ಲಮಾಣಿ ಮತ್ತು ಸಂಗಮ್ಮ ಅವರಪ್ಪ ಬಳಿಗೇರ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಶರಣರ ತತ್ವಗಳೇ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ. ೧೨ನೇ ಶತಮಾನದಲ್ಲಿ ಶರಣರು ಬರೆದ ವಚನಗಳು ಜೀವನದ ಅನುಭವದಿಂದ ಕೂಡಿವೆ ಎಂದರು.ಶರಣರು ಕಾಯಕವನ್ನು ಮಾಡುವ ಮೂಲಕ ಬದುಕು ಕಟ್ಟಿಕೊಂಡಿದ್ದರು. ಆ ಮೂಲಕ ಅವರು ಸರ್ವ ಜನಾಂಗದವರನ್ನು ಪ್ರೀತಿಸುವ ಮೂಲಕ ತತ್ವಗಳನ್ನು ಅಳವಡಿಸಿಕೊಂಡಿದ್ದರು. ಯುವ ಜನತೆಯಲ್ಲಿ ಶರಣ ಸಂದೇಶಗಳು ಮರೆಯಾಗುತ್ತಿವೆ. ಬಸವ ತತ್ವಗಳಿಂದ ದೂರ ಸರಿಯುತ್ತಿದ್ದಾರೆ. ಆದರೆ ಯಾರು ಈ ತತ್ವಗಳನ್ನು ಪಾಲಿಸುತ್ತಾರೋ ಅವರು ಜೀವನದಲ್ಲಿ ಯಶಸ್ಸಿಯಾಗುತ್ತಾರೆಂದರು.ಸಂಗಮ್ಮ ಅವರಪ್ಪ ಬಳಿಗೇರ ದತ್ತಿದಾನಿಗಳು ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ವಚನ ಸಾಹಿತ್ಯವು ಕನ್ನಡ ನುಡಿಯನ್ನು ಶ್ರೀಮಂತಗೊಳಿಸಿತು. ಭಕ್ತ, ಭಕ್ತಿ ಮತ್ತು ಪ್ರಸಾದದ ಮಹತ್ವವನ್ನು ಹಲವಾರು ವಚನಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು. ಲಿಂ. ನೀಲಾವತಿ ಮ ಲಮಾಣಿ ದತ್ತಿ ದಾನಿಗಳು ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿ, ಬದುಕಿನಲ್ಲಿ ತಂದೆ- ತಾಯಿ ಮಹತ್ವ ತಿಳಿಸಿಕೊಟ್ಟ ಅವರು, ಅವರ ತ್ಯಾಗದಿಂದಾಗಿ ನಾವೆಲ್ಲರೂ ಇಂದಿನ ಈ ಸ್ಥಿತಿಯಲ್ಲಿದ್ದೇವೆ. ಅವರನ್ನೆಂದೂ ನೋಯಿಸುವ ಕೆಲಸ ಯಾರಿಂದಲೂ ಆಗಬಾರದು. ನಮಗೆ ಯರ್ಯಾರೋ ಮಾದರಿಯಾಗಬಾರದು. ನಮಗೆ ನಮ್ಮ ತಂದೆ- ತಾಯಿಗಳೇ ಮಾದರಿಯಾಗಬೇಕು ಎಂದರು.