ಶಿಮುಲ್‌ ರಿಯಾಯಿತಿ ದರ ಸೌಲಭ್ಯ ಸದ್ಬಳಕೆ ಅಗತ್ಯ: ಶ್ರೀಪಾದ ಹೆಗಡೆ

KannadaprabhaNewsNetwork | Published : Nov 6, 2023 12:46 AM

ಸಾರಾಂಶ

ಮಿಶ್ರತಳಿ ಹಸು, ಮಣಕಗಳ ಪ್ರದರ್ಶನ, ಬರಡು ಜಾನುವಾರುಗಳ ಚಿಕಿತ್ಸಾ ಶಿಬಿರ

ಸಾಗರ: ರೈತರು ಒಕ್ಕೂಟದಿಂದ ರಿಯಾಯಿತಿ ದರದಲ್ಲಿ ದೊರೆಯುವ ಹೈನುಗಾರಿಕಾ ಪರಿಕರಗಳನ್ನು ಪಡೆದು ಹೆಚ್ಚು ಹಾಲು ಉತ್ಪಾದನೆಯತ್ತ ಗಮನ ಹರಿಸಬೇಕು ಎಂದು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ನಿಸ್ರಾಣಿ ಶ್ರೀಪಾದ ಹೆಗಡೆ ಹೇಳಿದರು.

ತಾಲೂಕಿನ ಮಾಲ್ವೆಯಲ್ಲಿ ಹಂದಿಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ಶಿವಮೊಗ್ಗ ಹಾಲು ಒಕ್ಕೂಟ ಮತ್ತು ಪಶುಪಾಲನಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಿಶ್ರತಳಿ ಹಸು, ಮಣಕಗಳ ಪ್ರದರ್ಶನ, ಬರಡು ಜಾನುವಾರುಗಳ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೈನುಗಾರಿಕೆ ಅತ್ಯಂತ ಲಾಭದಾಯಕ ಉಪಕಸುಬುಗಳಲ್ಲಿ ಒಂದು ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಗೆ ಪೂರಕವಾದ ವಾತಾವರಣವಿದೆ. ಸರ್ಕಾರ ಹಾಗೂ ಹಾಲು ಒಕ್ಕೂಟದಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಇಂತಹ ಪ್ರದರ್ಶನಗಳ ಮೂಲಕ ವೈವಿಧ್ಯಮಯ ಜಾನುವಾರು ನೋಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ. ಶೇಖರ್ ಮಾತನಾಡಿ, ಪ್ರಸ್ತುತ ಒಕ್ಕೂಟದಲ್ಲಿ ಲಾಭಾಂಶ ಕಡಿಮೆ ಇದ್ದರೂ ರೈತರಿಂದ ಖರೀದಿಸುವ ಹಾಲಿಗೆ ಉತ್ತಮ ಬೆಲೆ ನೀಡಲಾಗುತ್ತಿದೆ. ರೈತರು ಸದುಪಯೋಗ ಪಡೆದುಕೊಳ್ಳುವ ಮೂಲಕ ಮಾದರಿ ಹೈನುಗಾರಿಕೆ ನಡೆಸಲು ಕರೆ ನೀಡಿದರು.

ಪಶುಪಾಲನಾ ಇಲಾಖೆ ಮುಖ್ಯ ವೈದ್ಯಾಧಿಕಾರಿ ಡಾ.ಉಮಾದೇವಿ ಮಾತನಾಡಿದರು. ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸುಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಧರ, ಡಾ.ಮುರಳಿಧರ, ಡಾ.ಶರತ್ ಕೆ.ಬಿ., ಡಾ.ರಚಿತ್ ಇನ್ನಿತರರು ಹಾಜರಿದ್ದರು.

- - - (** ಈ ಪೋಟೋ ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಿ)-5ಕೆ.ಎಸ್.ಎ.ಜಿ.1:

ಸಾಗರ ತಾಲೂಕಿನ ಮಾಲ್ವೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಿಶ್ರತಳಿ ಹಸು, ಮಣಕಗಳ ಪ್ರದರ್ಶನ, ಬರಡು ಜಾನುವಾರುಗಳ ಚಿಕಿತ್ಸಾ ಶಿಬಿರವನ್ನು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ನಿಸ್ರಾಣಿ ಶ್ರೀಪಾದ ಹೆಗಡೆ ಉದ್ಘಾಟಿಸಿ ಮಾತನಾಡಿದರು. ಎಸ್.ಜಿ. ಶೇಖರ್, ಡಾ.ಉಮಾದೇವಿ, ಸುಶೀಲಮ್ಮ ಮತ್ತಿತರರು ಇದ್ದರು.

Share this article