ಕುಕನೂರು: ಸಮಾಜದ ಕೊನೆ ವ್ಯಕ್ತಿಯ ಸಬಲೀಕರಣ ಆಗಬೇಕು ಎಂದು ದೀನ ದಯಾಳ್ ಉಪಾಧ್ಯಾಯರು ಶ್ರಮಿಸಿದರು. ಅವರ ಆಸೆಯಂತೆ ಬಿಜೆಪಿ ದೇಶದ ಪ್ರತಿ ವ್ಯಕ್ತಿಯ ಸಬಲೀಕರಣಕ್ಕೆ ಪಣತೊಟ್ಟು ಕಾರ್ಯ ಮಾಡುತ್ತಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಪಂಡಿತ್ ದೀನದಯಾಳ್ ಉಪಾಧ್ಯಾಯ ಪುಣ್ಯಸ್ಮರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಉಪಾಧ್ಯಾಯರು ಸಮಾಜ ಸೇವೆಗೆ ಮುಂದಾದರು. ಮುಂದೆ ಬಿಜೆಪಿ ಸ್ಥಾಪಿತ ಸದಸ್ಯರಲ್ಲಿ ಒಬ್ಬರಾಗಿ ನಂತರ ಅಧ್ಯಕ್ಷರಾಗಿ ಸಹ ಪಕ್ಷ ಕಟ್ಟಿದ ಹಿರಿಮೆ ಅವರದು. ಅತ್ಯಂತ ಬಡವನ ಉದಯ ತತ್ವದಡಿ, ಸಮಾಜದ ಕೊನೆಯ ವ್ಯಕ್ತಿಯ ಸಬಲೀಕರಣಕ್ಕಾಗಿ ಶ್ರಮಿಸಿದರು. ಅವರು ಅಂದು ಹಾಕಿಕೊಟ್ಟ ಹಾದಿಯಲ್ಲಿ ಬಿಜೆಪಿ ಇಂದಿನ ದಿನಗಳಲ್ಲಿ ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಯೋಜನೆ ಮನೆ ಬಾಗಿಲಿಗೆ ತಲುಪಿಸಿದೆ. ಅಂದು ಅವರು ಬಯಸಿದ ಕೊನೆಯ ವ್ಯಕ್ತಿಯ ಉದಯ ಎಂಬ ಮಹಾನ್ ದೂರದೃಷ್ಟಿ ನಿಜಕ್ಕೂ ಮೆಚ್ಚುವಂತದ್ದು. ಭಾರತ ಇಂದು ವಿಶ್ವಗುರು ಸ್ಥಾನ ಅಲಂಕರಿಸಲು ಅವರ ಅಂದಿನ ಚಿಂತನೆ ಸಹ ಸಾಕಾರ ನೀಡುತ್ತಿದೆ ಎಂದರು.ಬಿಜೆಪಿಯಲ್ಲಿ ಪ್ರತಿ ಒಬ್ಬ ಕಾರ್ಯಕರ್ತನಿಗೆ ತನ್ನದೆ ಆದ ಸ್ಥಾನ ಇದೆ. ಬಿಜೆಪಿಯಲ್ಲಿ ರಾಷ್ಟ್ರೀಯ ಸೇವೆ ಧ್ಯೇಯದೊಂದಿಗೆ ಪ್ರತಿಯೊಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಷ್ಟ್ರಸೇವೆ ಹಾಗೂ ಜನ ಸಾಮಾನ್ಯರ ಸೇವೆ ರಾಜಕಾರಣಿಗಳ ಧ್ಯೇಯವಾದರೆ ರಾಜಕಾರಣದಲ್ಲಿ ಸೇವಾಮನೋಭಾವ ಬೆಳೆಯುತ್ತದೆ. ಅಂತಹ ಧ್ಯೇಯದೊಂದಿಗೆ ಉಪಾಧ್ಯಯರು ಕಾರ್ಯ ನಿರ್ವಹಿಸಿದರು. ಅವರ ತತ್ವ ಹಾಗೂ ಜೀವನ ಮಾರ್ಗದಲ್ಲಿ ಬಿಜೆಪಿಯ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.
ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಹೊಸಮನಿ ಮಾತನಾಡಿ, ಪ್ರಾಮಾಣಿಕತೆ ಹಾಗೂ ಸಂಯಮ, ಕೆಲಸದ ಶಿಸ್ತು ಜೀವನದಲ್ಲಿ ಮುಖ್ಯ. ಅಂತಹ ಕಾಯಕಯೋಗಿತ್ವ ಬಿಜೆಪಿ ಪಕ್ಷದಲ್ಲಿ ಸಿಗುತ್ತದೆ. ಅಂತಹ ಶಿಸ್ತನ್ನು ಬಿಜೆಪಿಯ ಹಿರಿಯರು ಪಕ್ಷಕ್ಕೆ ನೀಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಶಿವಕುಮಾರ ನಾಗಲಾಪುರಮಠ, ಬಸವರಾಜ ಹಾಳಕೇರಿ, ವಿರೇಶ ಸಬರದ, ಜಗದೀಶ ಸೂಡಿ, ಮಂಜುನಾಥ ಮಾಲಗಿತ್ತಿ, ರಾಮನಗೌಡ, ಪಪಂ ಸದಸ್ಯರಾದ ಸಿದ್ಲಿಂಗಯ್ಯ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಚೌದ್ರಿ, ಶಿವರಾಜಗೌಡ ಯಲ್ಲಪ್ಪಗೌಡ್ರು ಇತರರಿದ್ದರು.