ಕುಮಟಾ: ಧರ್ಮ ಹಾಗೂ ದೇಶಕ್ಕಾಗಿ ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ ಮುಖರ್ಜಿಯವರ ಜೀವ ಬಲಿದಾನ ವ್ಯರ್ಥವಾಗಲಿಲ್ಲ. ಅವರ ಸಂಘಟನೆ ಹಾಗೂ ಹೋರಾಟ ಸದಾ ಮಾರ್ಗದರ್ಶಕವಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ ತಿಳಿಸಿದರು.
ಸ್ವಾತಂತ್ರ್ಯೋತ್ತರ ಭಾರತದಲ್ಲಿಯೂ ಹಿಂದುಗಳ ಶೋಷಣೆ, ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ ೩೭೦ ಘೋಷಣೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಚಿವ ಸ್ಥಾನ ತ್ಯಜಿಸಿ ಹೊರಗೆ ಬಂದ ಶ್ಯಾಮ ಪ್ರಸಾದ ಮುಖರ್ಜಿ ೧೯೫೧ರಲ್ಲಿ ಜನಸಂಘವನ್ನು ಕಟ್ಟಿದರು. ಸಹಸ್ರಾರು ಸ್ವಯಂಸೇವಕರ ಬಲದಲ್ಲಿ ಹೋರಾಟ ಮತ್ತು ಪಕ್ಷ ಸಂಘಟನೆ ಬೆಳೆಯಿತು. ಶ್ಯಾಮಪ್ರಸಾದ ಮುಖರ್ಜಿ ಅವರ ಕಾರ್ಯನಿಷ್ಠೆ, ದೇಶಭಕ್ತಿ, ಚೈತನ್ಯ ನಮ್ಮೆಲ್ಲ ಕಾರ್ಯಕರ್ತರಲ್ಲಿ ಮೂಡಲಿ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಮಂಡಲಾಧ್ಯಕ್ಷ ಜಿ.ಐ. ಹೆಗಡೆ ನೇತೃತ್ವದಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳಾದ ಜಿ.ಎಸ್. ಗುನಗಾ, ಗಣೇಶ ಪಂಡಿತ, ಜಯಾ ಶೇಟ, ವಿಶ್ವನಾಥ ನಾಯ್ಕ, ತಿಮ್ಮಪ್ಪ ಮುಕ್ರಿ ಇತರರು ಕಾರ್ಯಕರ್ತರು ಇದ್ದರು.