- ರವೀಂದ್ರನಾಥ-ರೇಣುಕಾಚಾರ್ಯ ಗುಂಪು ಆರಗ- ಪ್ರೀತಂ ನೇತೃತ್ವದ ಸಭೆಗೆ ಭಾಗಿ - ಸುದ್ದಿಗೋಷ್ಠಿ ಮಧ್ಯೆ ಸಿದ್ದೇಶ್ವರ ಭೇಟಿಗೆ ತೆರಳಿದ ಪ್ರೀತಂ, ರೇಣು ವಿರುದ್ಧ ಮತ್ತೆ ಕಿಡಿ
ನಾಗರಾಜ ಎಸ್. ಬಡದಾಳ್ ಕನ್ನಡಪ್ರಭ ವಾರ್ತೆ ದಾವಣಗೆರೆ ಮನೆಯೊಂದು ಮೂರು ಬಾಗಿಲು ಎಂಬಂತಾದ ದಾವಣಗೆರೆ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆ ಮಾಡಿ, ವಾತಾವರಣ ತಿಳಿಗೊಳಿಸುವ ಪ್ರಯತ್ನವು ಬಂದ ದಾರಿಗೆ ಸುಂಕ ಇಲ್ಲ ಎಂಬಂತಾಗಿದೆ!
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂ ಗೌಡ ವೀಕ್ಷಕರಾಗಿ ಆಗಮಿಸಿದ್ದರು. ಆದರೆ, ಎರಡೂ ಗುಂಪಿನವರ ಸಭೆಗೆ ಒಂದು ಬಣ ಮಾತ್ರವೇ ಬಂದರೆ, ಮತ್ತೊಂದು ಗುಂಪು ದೂರವೇ ಉಳಿಯುವ ಮೂಲಕ ಇಲ್ಲಿನ ಗಂಟನ್ನು ಬಿಚ್ಚಬೇಕಾದವರು ದೆಹಲಿ ನಾಯಕರೇ ಎಂಬ ಸಂದೇಶ ರವಾನಿಸಿದೆ. ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಮಾಜಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಎಂ.ಬಸವರಾಜ ನಾಯ್ಕ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ ಇತರರು ಕೋರ್ ಕಮಿಟಿ ಸಭೆಗೆ ಹಾಜರಾಗಿದ್ದರು. ಆದರೆ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ. ಹರೀಶ, ಚನ್ನಗಿರಿ ತುಮ್ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ, ಎಸ್.ಎಂ. ವೀರೇಶ ಹನಗವಾಡಿ, ಯಶವಂತ ರಾವ್ ಜಾಧವ್ ಇತರರು ಗೈರಾಗುವ ಮೂಲಕ ಕೋರ್ ಕಮಿಟಿ ಸಭೆ ಒಂದು ಗುಂಪಿನವರಿಗಷ್ಟೇ ಸೀಮಿತವಾಗುವಂತೆ ಮಾಡಿದ್ದಾರೆ.ದಾವಣಗೆರೆ ಬಿಜೆಪಿ ಬಣಗಳ ಆಟಕ್ಕೆ ಬ್ರೇಕ್ ಹಾಕಲು ಕೋರ್ ಕಮಿಟಿ ಸಭೆ ಕರೆಯಲು ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ ದಾಸ್ ಅಗರವಾಲ್ ಈಚೆಗೆ ಸೂಚನೆ ನೀಡಿದ್ದರು. ಅದರ ಬೆನ್ನಲ್ಲೇ ಗುರುವಾರ ಕರೆದಿದ್ದ ಕೋರ್ ಕಮಿಟಿ ಸಭೆಯೆ ರೇಣುಕಾಚಾರ್ಯ- ರವೀಂದ್ರನಾಥ ಗುಂಪು ಇಡಿಯಾಗಿ ಭಾಗವಹಿದ್ದರೆ, ಸಿದ್ದೇಶ್ವರ- ಹರೀಶ್ರ ಗುಂಪು ಮಾತ್ರ ದೂರವೇ ಉಳಿಯುವ ಮೂಲಕ ಇಲ್ಲಿನ ಗುಂಪುಗಳ ಹೊಯ್ದಾಟದ ಯಾವ ಮಟ್ಟಕ್ಕಿದೆಯೆಂಬ ಸಂದೇಶವನ್ನೂ ನೀಡಿದೆ.
ಸಭೆ ನಂತರ ಸುದ್ದಿಗೋಷ್ಠಿ ಮಧ್ಯೆ ಕೇಂದ್ರದ ಮಾಜಿ ಜಿ.ಎಂ. ಸಿದ್ದೇಶ್ವರ ಭೇಟಿ ಮಾಡಲು ವೀಕ್ಷಕರಾಗಿದ್ದ ಪ್ರೀತಂ ಗೌಡ ತೆರಳಿದ್ದರು. ಅಲ್ಲಿ ಸಿದ್ದೇಶ್ವರ ಗುಂಪಿನವರಿಂದ ಅಹವಾಲು ಆಲಿಸಿದ್ದಲ್ಲದೇ, ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ಸಿನವರ ಜೊತೆಗೆ ಎದುರಾಳಿ ಬಣದವರು ಹೇಗೆಲ್ಲಾ ಹೊಂದಾಣಿಕೆ ಮಾಡಿಕೊಂಡಿದ್ದರು ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ರೇಣುಕಾಚಾರ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ, ಅಲ್ಲಿಯವರೆಗೆ ಯಾವುದೇ ಸಭೆಗೂ ಬರುವುದಿಲ್ಲವೆಂದು ಸಿದ್ದೇಶ್ವರ ಪಟ್ಟುಹಿಡಿದಿದ್ದಾರೆ. ಅಲ್ಲದೇ, ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆನ್ನಲಾಗಿದೆ.
ಮತ್ತೊಂದು ಕಡೆ ಪಕ್ಷ ಸೂಚಿಸಿದ ಎಲ್ಲ ಹೋರಾಟ ಮಾಡಿದ್ದೇವೆಂದು ರೇಣುಕಾಚಾರ್ಯ ವಾದ ಮಾಡಿದ್ದಾರೆ. ಜಿಲ್ಲಾಡಳಿತದ ವಿರುದ್ಧ ಅತಿ ಹೆಚ್ಚು ಹೋರಾಟ ನಡೆಸಿದ್ದೇವೆ. ಜಿಲ್ಲಾಡಳಿತದ ವಿರುದ್ಧ ಹೋರಾಟ ನಡೆಸಿದರೆ ಸಚಿವರ ವಿರುದ್ಧವೇ ಹೋರಾಡಿದಂತೆ ಎಂಬುದಾಗಿ ರೇಣುಕಾಚಾರ್ಯ ಸಮರ್ಥನೆ ಮಾಡಿಕೊಂಡಿದ್ದಾರೆನ್ನಲಾಗಿದೆ.
- - -
* ಗುಂಪುಗಾರಿಕೆ, ಹೈರಾಣಾದ ಜಿಲ್ಲಾಧ್ಯಕ್ಷ!
ಅತ್ತ ದರಿ, ಇತ್ತ ಪುಲಿ ಎಂಬಂತೆ ಅಸಹಾಯಕ ಸ್ಥಿತಿಯಲ್ಲಿ ಏನು ಮಾಡಬೇಕು, ಏನು ಮಾಡಬಾರದೆಂಬುದೇ ತೋಚದೇ ಜಿಲ್ಲಾಧ್ಯಕ್ಷರು ತೊಳಲಾಡುವ ಸ್ಥಿತಿಯಲ್ಲಿದ್ದಾರೆ. ಆದರೆ, ರಾಜ್ಯ ಉಸ್ತುವಾರಿಗಳ ಸೂಚನೆಯಂತೆ ನಾನು ಸಭೆ ನಡೆಸಿ, ಸಂಘನಾತ್ಮಕ ವಿಚಾರದ ಬಗ್ಗೆ ಚರ್ಚಿಸಿದ್ದು, ನಾನು ಅಧ್ಯಕ್ಷನಾಗಲು ಯಾವ ಬಣದವರೂ ನನ್ನ ಹೆಸರನ್ನು ಶಿಫಾರಸು ಮಾಡಿರಲಿಲ್ಲ. ಸಭೆ ಹಾಗೂ ಸಂಘಟನಾತ್ಮಕ ಜವಾಬ್ಧಾರಿ ಕಾರ್ಯಪಾಲನಾ ವರದಿಯನ್ನು ವರಿಷ್ಠರಿಗೆ ಸಲ್ಲಿಸುವೆ ಎಂಬುದಾಗಿ ಮಾಧ್ಯಮದವರಿಗೆ ಜಿಲ್ಲಾಧ್ಯಕ್ಷ ಪ್ರತಿಕ್ರಿಯಿಸಿದ್ದಾರೆ.
-30ಕೆಡಿವಿಜಿ8:
ದಾವಣಗೆರೆ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ವೀಕ್ಷಕರಾದ ಆರಗ ಜ್ಞಾನೇಂದ್ರ, ಪ್ರೀತಂ ಗೌಡ ನೇತೃತ್ವದಲ್ಲಿ ಜಿಲ್ಲಾ ಕೋರ್ ಕಮಿಟಿ ಸಭೆ ನಡೆದಿದ್ದು, ಎಸ್.ಎ.ರವೀಂದ್ರನಾಥ- ಎಂ.ಪಿ.ರೇಣುಕಾಚಾರ್ಯ ಗುಂಪು ಭಾಗಿಯಾದರೆ, ಜಿ.ಎಂ.ಸಿದ್ದೇಶ್ವರ- ಬಿ.ಪಿ.ಹರೀಶ ಗುಂಪು ಸಭೆಯಿಂದ ದೂರವೇ ಉಳಿಯಿತು.