ಕುಕನೂರು: ಸಮಾಜ ಸೇವೆಯೇ ಶಿರೂರು ವೀರಭದ್ರಪ್ಪನವರ ಕಾರ್ಯ ಆಗಿತ್ತು. ಪ್ರಾಮಾಣಿಕ ಸಾಮಾಜಿಕ ಸೇವೆಗೆ ನಿಸ್ವಾರ್ಥವಾಗಿ ಬದುಕಿದರು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಕುಕನೂರು ಪಟ್ಟಣದಲ್ಲಿ ವೀರಭದ್ರಪ್ಪ ವೃತ್ತದಲ್ಲಿ ಕಾನೂನಾತ್ಮಕವಾಗಿ ಮೂರ್ತಿ ನಿರ್ಮಾಣಕ್ಕೆ ಶ್ರಮಿಸುತ್ತೇನೆ ಎಂದರು.
ನಾನು ಸಹ 1985ರಿಂದ ರಾಜಕಾರಣದಲ್ಲಿದ್ದೇನೆ. ಕ್ಷೇತ್ರದ ಜನರ ಸೇವೆ ಮಾಡಿದ್ದೇನೆ. 1986ರಿಂದ ಹಾಲಪ್ಪ ಆಚಾರ್ ಸಹ ನಮ್ಮ ಜತೆ ಇದ್ದಾರೆ. ಅವರು ಸಹ ಪ್ರಾಮಾಣಿಕ ಸೇವೆ ಮಾಡಿದ್ದಾರೆ. ಅವರು ಕೆಟ್ಟ, ಭ್ರಷ್ಟ ರಾಜಕಾರಣಿಯಲ್ಲ ಎಂದರು.ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಮಾಜಿ ಶಾಸಕ ಶಿರೂರು ವೀರಭದ್ರಪ್ಪ ಅವರು ಮೌಲ್ಯಗಳಿಗೆ ಇನ್ನೊಂದು ಹೆಸರು. ಅವರ ಆದರ್ಶಮಯ ಜೀವನ ರಾಜಕಾರಣಿಗಳಿಗೆ ಮಾದರಿ. 1960ರ ದಶಕದಲ್ಲಿ ಬರಗಾಲ ಇದ್ದಾಗ ಯಲಬುರ್ಗಾದಲ್ಲಿ ಸಕ್ಕರೆ, ಗೋದಿ ಪಡಿತರ ಕೊಡುತ್ತಿದ್ದರು. ಆಗ ವೀರಭದ್ರಪ್ಪ ಅವರು ತಮ್ಮ ಆಪ್ತನನ್ನು ಕಳಿಸಿ ತಮ್ಮ ಪಡಿತರ ಕಾರ್ಡಿನಿಂದ ಪಡಿತರ ತಂದು ಜೀವನ ಸಾಗಿಸಿದರು. ಸಾಮಾನ್ಯರಂತೆ ಸಾಮಾನ್ಯರಾಗಿ ವೀರಭದ್ರಪ್ಪ ಅವರು ಬದುಕಿದರು. ಆರ್ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಬ್ಯಾಂಕ್ ಅಭಿವೃದ್ಧಿ ಪಡಿಸಿದರು ಎಂದರು. ಮಾಜಿ ಶಾಸಕ ಶಿರೂರು ವೀರಭದ್ರಪ್ಪ ಅವರ ಮಗ ಸಾಹಿತಿ ಬಿ.ವಿ. ಶಿರೂರು ಮಾತನಾಡಿ, ನಮ್ಮ ತಂದೆಯವರು ತಮ್ಮ ಮಕ್ಕಳು ರಾಜಕಾರಣಕ್ಕೆ ಬರಬಾರದು ಎಂದು ರಾಜಕಾರಣದಿಂದ ನಮ್ಮನ್ನು ದೂರ ಇರಿಸಿದರು. ನಮ್ಮ ಸಾವಿನ ಅಂತ್ಯದಲ್ಲಿಯೂ ಕಾಲು ಆಪರೇಷನ್ಗೆ ಹಣವಿಲ್ಲದ ಕಾರಣ ನೀರು, ಆಹಾರ ಬಿಟ್ಟು ಜೀವ ಬಿಟ್ಟರು. ಬರಗಾಲ ಸಂದರ್ಭದಲ್ಲಿ ತಾವೊಬ್ಬ ಶಾಸಕರಾಗಿದ್ದರೂ ಸರ್ಕಾರ ವಿರುದ್ದ ಪಡಿತರ ಧಾನ್ಯ ನೀಡಿ ಎಂದು ಸತ್ಯಾಗ್ರಹ ಮಾಡಿದ್ದರು ಎಂದು ಸ್ಮರಿಸಿದರು.
ಶ್ರೀ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ತುಂಗಭದ್ರಾ ಡ್ಯಾಂ ನಿರ್ಮಾಣಕ್ಕೆ ಹಾಗೂ ಅಲ್ಲಿನ ರೈತರಿಗೆ ಪರಿಹಾರ ಕೊಡಿಸಲು ಮಾಜಿ ಶಾಸಕ ವೀರಭದ್ರಪ್ಪ ಅವರು ಶ್ರಮಿಸಿದರು ಎಂದರು.ಅಖಿಲ ಗೋವಾ ಕನ್ನಡ ಮಹಾ ಸಂಘದ ಅಧ್ಯಕ್ಷ ಹನುಮಂತರೆಡ್ಡಿ ಶಿರೂರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ ಕೆ.ಬಿ. ಬ್ಯಾಳಿ ಮಾತನಾಡಿದರು. ಯಲಬುರ್ಗಾದ ಶ್ರೀಧರ ಮುರುಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ, ಜಿಗೇರಿ ಸ್ವಾಮೀಜಿ, ಪ್ರಮುಖರಾದ ಕೆರಿಬಪ್ಪ ನಿಡಗುಂದಿ, ವೀರೇಶ ನಾಗೋಜಿ, ದೇವಪ್ಪ ಶಿರೂರು, ಕೆ. ರವೀಂದ್ರನಾಥ, ಬಸವರಾಜ ಗೌರಾ, ಶಿವಕುಮಾರ ನಾಗಲಾಪುರಮಠ, ಶರಣಪ್ಪ ಹೊಸಮನಿ, ಭೀಮರಡ್ಡೆಪ್ಪ, ಗ್ರಾಪಂ ಅಧ್ಯಕ್ಷೆ ಮಂಜುಳಾ ಮಾಲಗಿತ್ತಿ, ಬಸವರಾಜ ಮುತ್ತಾಳ, ವೀರಣ್ಣ ಹುಬ್ಬಳ್ಳಿ, ಅಶೋಕ ಮುತ್ತಾಳ, ಶಿವರೆಡ್ಡಿ, ಎಸ್.ಎ. ನಿಂಗೋಜಿ, ಪ್ರಭುರಾಜ ಮುತ್ತಾಳ, ಮಲ್ಲನಗೌಡ ಕೋನನಗೌಡ್ರು, ಶಂಭು ಜೋಳದ ಇತರರಿದ್ದರು.