ಸಂಘಟನೆ ವತಿಯಿಂದ ಅಂತಾರಾಷ್ಟ್ರೀಯ ಕಾರ್ಮಿಕ ದಿನ ಆಚರಣೆ
ಇಡೀ ಮಾನವ ಜಗತ್ತು ನಡೆಯುತ್ತಿರುವುದು ಶ್ರಮಿಕರಿಂದ ಹಾಗೂ ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದರಿಂದ ಸಮಾಜ ಆರೋಗ್ಯವಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಸಿಐಟಿಯು ಜಂಟಿಯಾಗಿ ಬುಧವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನವಾದ ‘ಮೇ ದಿನ’ ಆಚರಣೆಯಲ್ಲಿ ಉದ್ಘಾಟನೆ ಭಾಷಣದಲ್ಲಿ ಮಾತನಾಡಿ, ‘ಮೇ ದಿನಾಚರಣೆಯನ್ನು ಎಲ್ಲಾ ದೇಶಗಳಲ್ಲಿ ಎಲ್ಲಾ ಕಾರ್ಮಿಕರು ಈ ದಿನವನ್ನು ಆಚರಣೆಯನ್ನು ಮಾಡುತ್ತಾರೆ. ನಮ್ಮ ಕೆಲಸ ಕೇವಲ ೮ ಗಂಟೆ ಮಾತ್ರ ಮಾಡಬೇಕು. ಕಾರ್ಮಿಕರನ್ನು ಯಂತ್ರಗಳಂತೆ ದುಡಿಸಿಕೊಳ್ಳಲಾಗುತ್ತಿದೆ. ಮಾಲೀಕರು, ಅಧಿಕಾರಿಗಳಿಗೆ ಯಾವುದೇ ರೀತಿಯಾಗಿ ಮಾತನಾಡಬಾರದು, ಕಾರ್ಮಿಕರು ಸಮಸ್ಯೆಗಳನ್ನು ಹೇಳಿಕೊಳ್ಳದೆ ದುಡಿಯಬೇಕು ಹಾಗೂ ಪ್ರಶ್ನೆ ಮಾಡಬಾರದು. ಇದರಿಂದ ಸರ್ಕಾರ ಏನು ಬಯಸುತ್ತದೆ ಅಂದರೆ ಕಾರ್ಮಿಕರು ಹೆಚ್ಚು ಸಂಬಳ ಕೇಳಬಾರದು? ಎಷ್ಟು ಹಣವನ್ನು ಕೊಡುತ್ತಾರೊ ಅದಕ್ಕೆ ಕಾರ್ಮಿಕರು ದುಡಿಯಬೇಕು ಎಂದು ಅರ್ಥ’ ಎಂದು ಬೇಸರ ವ್ಯಕ್ತಪಡಿಸಿದರು.‘ಅಧಿಕಾರಿಗಳು ಮತ್ತು ಬಂಡವಾಳದಾರರು ಹೇಳಿದ ಹಾಗೆ ಕಾರ್ಮಿಕರು ದುಡಿಯಬೇಕು. ಈಗ ಭಾರತದಲ್ಲಿ ಸರ್ವಾಧಿಕಾರಿ ಆಡಳಿತಕ್ಕೆ ಒಳಪಡುವ ಹಂತಕ್ಕೆ ಈ ದೇಶ ಬಂದಿದೆ. ಮೇ ದಿನ ಆಚರಣೆಗೆ ಬರುವ ಮೊದಲು ಕಾರ್ಮಿಕರು ದಿನವಿಡೀ, ರಾಯ್ರಿಯಿಡೀ ದುಡಿಯುತ್ತಿದ್ದರು. ಆಗ ಕಾರ್ಮಿಕರು ಸಣ್ಣ ಸಣ್ಣ ಸಭೆಯನ್ನು ಸೇರಿ ಅಂದರೆ ಗುಂಪುಗಳಾಗಿ ಸಂಘಟನೆಯನ್ನು ಕಟ್ಟುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ಸಂಘಟನೆಗಳು ವಿಸ್ತಾರವಾಗಿ ಬೆಳದಿವೆ. ೧೯೮೬ ರಲ್ಲಿ ಅಮೆರಿಕಾದಲ್ಲಿ ದಿನದಲ್ಲಿ ೮ ಗಂಟೆಯ ಕೆಲಸಕ್ಕೆ ಆಗ್ರಹಿಸಿ ಕಾರ್ಮಿಕರ ಹೋರಾಟ ನಡೆದು, ಆ ಹೋರಾಟದಲ್ಲಿ ನೂರಾರು ಕಾರ್ಮಿಕರು ಹುತಾತ್ಮರಾದರು. ಈ ಹೋರಾಟದ ಸ್ಮರಣೆಗಾಗಿ ೧ ರಂದು ವಿಶ್ವ ಕಾರ್ಮಿಕ ದಿನಾಚರಣೆಯನ್ನು ಜಗತ್ತಿನಾದ್ಯಂತ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
‘೨೦೧೪ ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕಾರ್ಮಿಕರ ಶ್ರಮ ಶಕ್ತಿಯನ್ನು ಲೂಟಿ ಮಾಡುತ್ತಿದೆ. ಬಂಡವಾಳಶಾಹಿಗಳ ಪರವಾಗಿ ನೀತಿಯನ್ನು ಜಾರಿ ಮಾಡುತ್ತಿದೆ. ಹೀಗಾಗಿ ಕಾರ್ಮಿಕರಿಗೆ ಕನಿಷ್ಠ ವೇತನ ಕೊಡದೇ ಸಮಗ್ರ ಭವಿಷ್ಯ ನಿಧಿ ಯೋಜನೆಯನ್ನು ಜಾರಿ ಮಾಡದೇ ನೌಕರರನ್ನು ಶೋಷಣೆ ಮಾಡಲಾಗುತ್ತಿದೆ. ನಮ್ಮ ಸಂಘಟನೆಯನ್ನು ಗಟ್ಟಿ ಮಾಡುವುದರ ಜೊತೆಗೆ ನಮ್ಮ ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಹೇಳಿದರು.
ಮೇ ದಿನಾಚರಣೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ವಹಿಸಿದ್ದರು.ಹಿರಿಯ ದಲಿತ ಮುಖಂಡರಾದ ಎಚ್.ಕೆ.ಸಂದೇಶ್, ಎಂ.ಜಿ. ಪೃಥ್ವಿ, ಸಂಚಾಲಕರು ದಲಿತ ಹಕ್ಕುಗಳ ಸಮಿತಿ ಹಾಸನ, ವಿಜಯಕುಮಾರ್ ಅಧ್ಯಕ್ಷ, ಮಾದಿಗದಂಡೋರ ಹೋರಾಟ ಸಮಿತಿ, ಜಯಪ್ರಕಾಶ್, ಕಾರ್ಯದರ್ಶಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ, ಕಾಂತರಾಜು, ಸಿಐಟಿಯು ಜಿಲ್ಲಾ ಕಾರ್ಯದರ್ಶಿ, ಎಂ.ಮಂಜುಳಾ, ಪ್ರಧಾನ ಕಾರ್ಯದರ್ಶಿ ಅಂಗನವಾಡಿ ನೌಕರರ ಸಂಘ, ಮುಬಷೀರ ಅಹಮದ್, ಬ್ಯಾಂಕ್ ನೌಕರರ ಸಂಘಟನೆಯ ಸುಬ್ರಮಣ್ಯ, ಸೌಮ್ಯ, ತೋಟ ಕಾರ್ಮಿಕರ ಸಂಘ, ಕೆ.ಟಿ. ಹೊನ್ನೇಗೌಡ ಪ್ರಧಾನ ಕಾರ್ಯದರ್ಶಿ ಗ್ರಾ.ಪಂ. ನೌಕರರ ಸಂಘ, ಗ್ಯಾರಂಟಿ ರಾಮಣ್ಣ ಇದ್ದರು.
ಹಾಸನದಲ್ಲಿ ನಡೆದ ಕಾರ್ಮಿಕ ದಿನ ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿದರು.