ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮರ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಹೊರವಲಯದ ದೂದಗಂಗಾ ನದಿ ಹಿನ್ನೀರಿನ ದಡದ ಮಣ್ಣಿನಲ್ಲಿ ಹುದುಗಿ ಹೋಗಿದ್ದ ಪ್ರಾಚಿನ ಕಾಲದ ಶ್ರೀ ಸೀತಾರಾಮ (ಶ್ರೀಪಾದವಲ್ಲಭ) ಮಂದಿರ ಜಿರ್ನೋದ್ಧಾರಕ್ಕೆ ಮುಂದಾಗಿದ್ದಾರೆ.ಸುಮಾರು 10 ಅಡಿ ಉದ್ದ ಹಾಗೂ ಅಗಲವಿರುವ ಹಳೆಯ ದೇವಸ್ಥಾನದ ಸುತ್ತವಿರುವ ಕೆಸರು ತೆಗೆದಾಗ ಒಳಗಡೆ ಪಾದುಕೆಗಳು ಪತ್ತೆ
ಯಾಗಿವೆ. ಅತಿವೃಷ್ಟಿ ಆದಂತಹ ಸಂದರ್ಭದಲ್ಲಿ ಪ್ರಭು ಶ್ರೀರಾಮರ ಮಂದಿರ ನೆಲದಾಳದಲ್ಲಿ ಮುಚ್ಚಿ ಹೋಗಿದ್ದು, ಸದ್ಯ ಜೆಸಿಬಿ ಯಂತ್ರ ಬಳಸಿ ದೇವಸ್ಥಾನದವಿದ್ದ ಸ್ಥಳದ ಸುತ್ತಲೂ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ಪುರಾತನ ಸೀತಾರಾಮ ಮಂದಿರ ಪತ್ತೆ ಹಿನ್ನೆಲೆ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಸ್ಥಳಕ್ಕೆ ಭೇಟಿ ನೀಡಿದರು. ಹಿಂದು ಸಮಾಜದ ಮುಖಂಡರು ಹಾಗೂ ಶಾಸಕರು ಮಂದಿರದ ಎದುರು ಆರತಿ ಪದವನ್ನು ಹಾಡಿ ಶ್ರೀರಾಮನ ಮೇಲಿನ ಭಕ್ತಿ ಸಮರ್ಪಿಸಿದರು.ಈ ಸಂದರ್ಭದಲ್ಲಿ ಚಿಕ್ಕೋಡಿ ಸದಲಗಾ-ಮಂಡಲ ಅಧ್ಯಕ್ಷ ಸಂಜು ಪಾಟೀಲ, ಡಾ.ಜ್ಯೋತಿ ಚಿಂಚಣಿಕರ, ಡಾ.ರವಿ ಚಿಂಚಣಿಕರ, ಪುರಸಭೆ ಸದಸ್ಯರಾದ ಬಸವರಾಜ ಹಣಬರ, ಆನಂದ ಪಾಟೀಲ, ಹೇಮಂತ ಶಿಂಗೆ, ಅಭಿನಂದನ ಪಾಟೀಲ, ಅನಿರುದ್ಧ ಪಾಟೀಲ, ರಾಜು ಅಮೃತಸಮ್ಮನ್ನವರ, ಅತಿಕ್ರಾಂತ ಪಾಟೀಲ, ಸುನೀಲ ಮುತ್ನಾಳೆ, ಸ್ಥಳೀಯ ಮುಖಂಡರು, ಭಜರಂಗದಳ ಯುವಕರು ಹಾಗೂ ರಾಮನ ಭಕ್ತರು ಉಪಸ್ಥಿತರಿದ್ದರು.ರಾಮಮಂದಿರ ಭವ್ಯ ಸ್ವಾಗತಕ್ಕಾಗಿ ಸ್ವಚ್ಛ ತೀರ್ಥ ಅಭಿಯಾನದ ಅಂಗವಾಗಿ ಸದಲಗಾ ಪಟ್ಟಣದಲ್ಲಿ ಸುಮಾರು ವರ್ಷಗಳಿಂದ ಮಣ್ಣಲ್ಲಿ ಹುದುಗಿದ್ದ ಪ್ರಾಚೀನ ಕಾಲದ ಶ್ರೀ ಸೀತಾರಾಮ (ಶ್ರೀಪಾದವಲ್ಲಭ) ಮಂದಿರವನ್ನು ವಿಶ್ವ ಹಿಂದು ಪರಿಷತ್, ಭಜರಂಗದಳ, ಆರ್ಎಸ್ಎಸ್, ಬಿಜೆಪಿ ಕಾರ್ಯಕರ್ತರು ಹಾಗೂ ಊರಿನ ಹಿರಿಯರು ಮಂದಿರ ಉತ್ಖನ ಮಾಡಿದ ನಿಮಿತ್ತ ನನ್ನನ್ನು ಸ್ಥಳಕ್ಕೆ ಆಹ್ವಾನಿಸಿದ ಪ್ರಯುಕ್ತ ಭೇಟಿ ನೀಡಿ, ಪೂಜೆ ಸಲ್ಲಿಸಲಾಯಿತು. ಶೀಘ್ರದಲ್ಲಿ ಪುರಾತತ್ವ ಇಲಾಖೆಯ ಗಮನಕ್ಕೆ ತಂದು ಇಲಾಖೆ ಹಾಗೂ ಜೊಲ್ಲೆ ಗ್ರುಪ್ ವತಿಯಿಂದ ದೇವಸ್ಥಾನ ಜೀರ್ಣೋದ್ಧಾರ ಮಾಡಲಾಗುವುದು.
-ಶಶಿಕಲಾ ಜೊಲ್ಲೆ, ಮಾಜಿ ಸಚಿವೆ, ಶಾಸಕಿ.