ಮೆರವಣಿಗೆಯಲ್ಲಿ ಶ್ರೀವಾಸವಿ ಮಹಿಳಾ ಮಂಡಳಿ ಹಾಗೂ ವಾಸವಿ ಭಜನಾ ಮಂಡಳಿಯ ಸದಸ್ಯೆಯರಿಂದ ಕೋಲಾಟ ನೋಡುಗರ ಗಮನ ಸೆಳೆಯಿತು.
ಕಾರಟಗಿ: ಇಲ್ಲಿನ ಆರ್ಯವೈಶ್ಯ ಸಮಾಜ ಬಾಂಧವರು ಶ್ರೀವಾಸವಿ ಕನಿಕಾಪರಮೇಶ್ವರಿ ಜಯಂತಿಯನ್ನು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಪಟ್ಟಣದ ಐತಿಹಾಸಿಕ ಶ್ರೀಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಭಾನುವಾರ ಪೂಜೆ ಸಲ್ಲಿಸಿ ವಿವಿಧ ವಾದ್ಯಮೇಳ ಹಾಗೂ ಮಹಿಳೆಯರ ಪೂರ್ಣ ಕುಂಭ ಕಳಸದೊಂದಿಗೆ ಶ್ರೀ ವಾಸವಿ ಕನಿಕಾ ಪರಮೇಶ್ವರಿ ದೇವಿಯ ಭವ್ಯ ಮೆರವಣಿಗೆ ಪ್ರಾರಂಭವಾಯಿತು. ಮೆರವಣಿಗೆ ರಾಜ್ಯ ಹೆದ್ದಾರಿಯ ಮೂಲಕ ಸಾಗಿ ನವಲಿ ವೃತ್ತದ ಮೂಲಕ ನವಲಿ ರಸ್ತೆಯಲ್ಲಿ ಸಾಗಿ ವಾಸವಿನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನಕ್ಕೆ ಬಂದು ತಲುಪಿತು.
ಮೆರವಣಿಗೆಯಲ್ಲಿ ಶ್ರೀವಾಸವಿ ಮಹಿಳಾ ಮಂಡಳಿ ಹಾಗೂ ವಾಸವಿ ಭಜನಾ ಮಂಡಳಿಯ ಸದಸ್ಯೆಯರಿಂದ ಕೋಲಾಟ ನೋಡುಗರ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಯುವಕರು ವಿವಿಧ ವಾಧ್ಯಗಳ ನಾದಕ್ಕೆ ಹೆಜ್ಜೆ ಹಾಕುತ್ತಿದ್ದರು. ಇನ್ನು ಯುವಕರು ದೇವಿಯ ಜಯಘೋಷ ಹಾಕುತ್ತಾ ಮೆರವಣಿಯಲ್ಲಿ ಸಾಗಿದರು. ಮೆರಣಿಗೆಯಲ್ಲಿ ಪಾಲ್ಗೊಂಡ ಸಮಾಜ ಬಾಂಧವರಿಗೆ ಪಾನಕ ವಿತರಣೆ ಮಾಡಿದರು.
ಇದಕ್ಕೂ ಮುಂಚೆ ವಾಸವಿ ದೇವಸ್ಥಾನದಲ್ಲಿ ವಾಸವಿ ಅಮ್ಮನವರ ನಾಮಕರಣ ಸೇವೆಯೊಂದಿಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು, ದೇವಿಗೆ ಹಾಲಿನ ಅಭಿಷೇಕ, ಅಲಂಕಾರ, ಹೋಮ ಮತ್ತು ಹವನಗಳು ಜರುಗಿದವು. ನಂತರ ದೇವಿಯ ಸಹಸ್ರನಾಮ ಭಕ್ತಿಪರಾಯಣದೊಂದಿಗೆ ಹಲವಾರು ಧಾರ್ಮಿಕ ಕಾರ್ಯ ನಡೆಸಿ ದೇವಿಗೆ ಅಲಂಕಾರ ಮಾಡಿ ನೈವೇದ್ಯ ಸಮರ್ಪಿಸಿ ಮಹಾಮಂಗಳಾರತಿ ಅರ್ಚಕ ಪ್ರದೀಪ ಆಚಾರ ನೇತೃತ್ವದಲ್ಲಿ ನಡೆದವು. ನಂತರ ಭಕ್ತ ಸಮೂಹಕ್ಕೆ ತೀರ್ಥ ಪ್ರಸಾದ ವಿತರಿಸಿ ಅನ್ನ ಸಂತರ್ಪಣೆ ನಡೆಸಿದರು. ಸಂಜೆ ಸಕಲ ಸಮಾಜ ಬಾಂಧವರಿಂದ ಪಲ್ಲಕ್ಕಿ ಸೇವೆ, ಶ್ರೀವಾಸವಿ ಮಹಿಳಾ ಮಂಡಳಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಾಸವಿ ಜಯಂತಿ ಅಂಗವಾಗಿ ಆರ್ಯವೈಶ್ಯರು ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರು ಹಾಗೂ ಉದ್ಯಮಿ ಪಿ.ಗೋವಿಂದರಾಜ್, ಎಸ್.ಇ. ಪ್ರಹ್ಲಾದ ಶ್ರೇಷ್ಠಿ, ಎಸ್.ಇ. ಗೋಪಾಲ ಶ್ರೇಷ್ಠಿ, ಜೆ. ನಾಗರಾಜ ಶ್ರೇಷ್ಠಿ, ವೈ.ವಿರೇಶಪ್ಪ,ಪಿ. ಗುರುರಾಜ್, ವಾಸುದೇವ ಯಾಡ್ಕಿ, ಜನಾದ್ರಿ ವೆಂಕಟೇಶ ಶ್ರೇಷ್ಠಿ, ಜೆ. ನರಸಯ್ಯ, ಎಂ.ಸತ್ಯನಾರಾಯಣ, ಜೆ. ರಾಮಚಂದ್ರ, ನರಸಿಂಹ, ಹಂಚಿನಾಳ ಲಿಂಗಯ್ಯ, ವಾಸವಿ ಯುವಜನ ಸಂಘ, ಶ್ರೀವಾಸವಿ ಮಹಿಳಾ ಮಂಡಳಿ ಹಾಗೂ ವಾಸವಿ ಭಜನಾ ಮಂಡಳಿಯ ಸದಸ್ಯೆಯರು, ಆರ್ಯವೈಶ್ಯ ಸೇವಾ ಸಂಘದ ನಗರ ಘಟಕದ ಅಧ್ಯಕ್ಷ ರಾಘವೇಂದ್ರ ಶ್ರೇಷ್ಠಿ, ಉಪಾಧ್ಯಕ್ಷ ಜೆ. ಗುರುರಾಜ, ಕಾರ್ಯದರ್ಶಿ ವಿರೇಂದ್ರ ಕುಮಾರ ಮತ್ತು ಪದಾಧಿಕಾರಿಗಳು ಸೇರಿದಂತೆ ಆರ್ಯ ವೈಶ್ಯ ಸಮಾಜದ ಹಿರಿಯರು, ಯುವಕರು, ಸಮಾಜ ಬಾಂಧವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.