ಮಂಡ್ಯ : ರಾಜ್ಯದಲ್ಲಿ ಕೈಗಾರಿಕೆಗಳು ಹಾಗೂ ದೊಡ್ಡ ದೊಡ್ಡ ಕಾರ್ಖಾನೆಗಳನ್ನು ತರಬೇಕೆಂಬ ನನ್ನ ಆಶಯಕ್ಕೆ ರಾಜ್ಯಸರ್ಕಾರ ಅಸಹಕಾರ ತೋರುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಶನಿವಾರ ನಗರದ ಮೈಷುಗರ್ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಮೈಷುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಕೈಗಾರಿಕೆಗಳನ್ನು ತರಬೇಕು. ನನ್ನ ಮೇಲೆ ಅಪಾರ ನಿರೀಕ್ಷೆಯಿಟ್ಟುಕೊಂಡಿರುವ ಮಂಡ್ಯ ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿಯಾಗುವಂತೆ ಕಾರ್ಖಾನೆಗಳನ್ನು ತರಬೇಕೆಂಬ ಹೆಬ್ಬಯಕೆ ನನ್ನದು. ಆದರೆ, ರಾಜ್ಯಸರ್ಕಾರ ಅದಕ್ಕೆ ಪೂರಕವಾಗಿ ಸಹಕಾರವನ್ನು ಕೊಡುತ್ತಿಲ್ಲ. ಬೃಹತ್ ಕೈಗಾರಿಕೆಗಳು, ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಸ್ಥಾಪಿಸುವುದಕ್ಕೆ ರಾಜ್ಯ ಸರ್ಕಾರದ ಸಹಕಾರವೂ ಅಗತ್ಯ. ಆ ನಿಟ್ಟಿನಲ್ಲಿ ಸರ್ಕಾರದ ಸಹಕಾರವನ್ನು ಪಡೆಯುವುದಕ್ಕೆ ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು.
ದೇಶದಲ್ಲಿ ಕಾರ್ಬನ್ ಡೈ ಆಕ್ಸೈಡ್ನ್ನು ಶೂನ್ಯಗೊಳಿಸುವ ಸಂಕಲ್ಪ ಮಾಡಿರುವ ಕೇಂದ್ರ ಸರ್ಕಾರ, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಿದೆ. ರಾಜ್ಯಕ್ಕೆ 14c ಸಾವಿರ ಎಲೆಕ್ಟ್ರಿಕ್ ಬಸ್ಗಳನ್ನು ಕೊಟ್ಟಿದ್ದೇನೆ. ದೇಶದ ಇತರೆ ರಾಜ್ಯಗಳಿಗೆ 2c ಸಾವಿರ ಎಲೆಕ್ಟ್ರಿಕ್ ಬಸ್ಗಳನ್ನು ಒದಗಿಸಿದ್ದು, ಬೆಂಗಳೂರು ಒಂದಕ್ಕೇ ೪೫೦೦ ಎಲೆಕ್ಟ್ರಿಕ್ ಬಸ್ಗಳನ್ನು ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಗೆ 20 ರಿಂದ 25c ಎಲೆಕ್ಟ್ರಿಕ್ ಬಸ್ಗಳನ್ನು ನೀಡುವ ಚಿಂತನೆಯನ್ನು ನಡೆಸಲಾಗಿದೆ. ಅವುಗಳನ್ನು ಶೀಘ್ರಗತಿಯಲ್ಲಿ ಒದಗಿಸುವ ಕೆಲಸ ಮಾಡುವುದಾಗಿ ಹೇಳಿದರು.
ಭದ್ರಾವತಿ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆಯನ್ನು ೧೮ ಸಾವಿರ ಕೊಟಿ ರು. ವೆಚ್ಚದಲ್ಲಿ ಪುನಶ್ಚೇತನಗೊಳಿಸುವುದಕ್ಕೆ ಸಂಕಲ್ಪ ಮಾಡಿದ್ದೇನೆ. ಅದರ ಡಿಪಿಆರ್ ಕೂಡ ತಯಾರಾಗುತ್ತಿದೆ. ಎಚ್ಎಂಟಿ ಕಾರ್ಖಾನೆಗೂ ಮರು ಜೀವ ನೀಡುವ ಉದ್ದೇಶದೊಂದಿಗೆ ಕಾರ್ಯೋನ್ಮುಖನಾಗಿದ್ದೇನೆ ಎಂದರು.
ನಗರದ ರೈತಸಭಾಂಗಣವನ್ನು ಪುನಶ್ಚೇತನಗಳಿಸಲು 4 ಕೋಟಿ ರು. ಹಣ ಬಿಡುಗಡೆ ಮಾಡಿಸಿದ್ದೇನೆ. ಆದರೆ, ಕಾಮಗಾರಿಯನ್ನು ಯಾರಿಗೆ ನೀಡಬೇಕು ಎನ್ನುವುದೇ ದೊಡ್ಡ ಸಮಸ್ಯೆಯಾಗಿದೆ. ಮಿಮ್ಸ್ ಆಸ್ಪತ್ರೆ ಅಭಿವೃದ್ಧಿಗೆ ಸಿಎಸ್ಆರ್ ಅನುದಾನದಿಂದ ೨.೫೦ ಕೋಟಿ ರು. ನೀಡಿರುವುದಾಗಿ ಹೇಳಿದರು.
ಮೈಷುಗರ್ ಕಾರ್ಖಾನೆಯನ್ನು ೪೦೦ ಕೋಟಿ ರು. ವೆಚ್ಚದಲ್ಲಿ ಹೊಸ ಕಾರ್ಖಾನೆಯ ರೂಪ ನೀಡುವುದಕ್ಕೆ ಮುಂದಾಗಿ 100 ಕೋಟಿ ರು.ಗಳನ್ನು ಮೊದಲ ಹಂತದಲ್ಲಿ ಎತ್ತಿಟ್ಟಿದ್ದೆ. ಅಷ್ಟರಲ್ಲೇ ಸರ್ಕಾರ ಪತನಗೊಂಡಿತು. ನಂತರ ಬಂದವರು ನನ್ನ ಆಶಯಕ್ಕೆ ಪೂರಕವಾಗಿ ಸ್ಪಂದಿಸಲಿಲ್ಲ. ಹಾಗಾಗಿ ಕಾರ್ಖಾನೆ ಪ್ರಗತಿಯತ್ತ ಮುನ್ನಡೆಯುವುದಕ್ಕೆ ಇದುವರೆಗೂ ಸಾಧ್ಯವಾಗಿಲ್ಲ ಎಂದರು.
ಮೈಷುಗರ್ ಪ್ರೌಢಶಾಲೆ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ಕೇವಲ 30 ಮಕ್ಕಳಿರುವ ಶಾಲೆಯ ಭವಿಷ್ಯ ಉತ್ತಮವಾಗಬೇಕು. ಇಲ್ಲಿ ಪಿಯು ತರಗತಿಗಳನ್ನು ಆರಂಭಿಸಿ. ಶಿಕ್ಷಕರನ್ನು ನೇಮಿಸಿಕೊಳ್ಳಿ. ಪ್ರೌಢಶಾಲೆ- ಪದವಿಪೂರ್ವ ಕಾಲೇಜಿನ ಅಭಿವೃದ್ಧಿಗೆ ಪೂರಕ ಕಾಮಗಾರಿಗಳ ಅಂದಾಜುಪಟ್ಟಿ, ನೀಲಿ ನಕಾಶೆಯೊಂದಿಗೆ ನನ್ನ ಬಳಿ ಬಂದರೆ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು.
ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರತಿ ಗ್ರಾಪಂನಲ್ಲಿ ಎಲ್ಕೆಜಿಯಿಂದ ಪಿಯುಸಿವರೆಗೆ ಕನ್ನಡ- ಆಂಗ್ಲ ಮಾಧ್ಯಮ ಶಿಕ್ಷಣ ನೀಡುವ ಯೋಜನೆ ರೂಪಿಸಿದ್ದೆ. ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿ ಅದನ್ನು ಮಾಡಿ ತೋರಿಸಿದೆ. ಸಾಲ ಮನ್ನಾಗಾಗಿ ನಾನು ಜನಸಾಮಾನ್ಯರ ಮೇಲೆ ಹೊರೆ ಹಾಕಲಿಲ್ಲವೆಂದು ಹೇಳಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಕುಟುಕಿದರು.
ಚಿಂತಕ ಪ್ರೊ.ಕೃಷ್ಣೇಗೌಡ ಮಾತನಾಡಿ, ಜಾಗತಿಕ ಯುಗದಲ್ಲಿ ಬದಲಾವಣೆಗೆ ತಕ್ಕಂತೆ ಹೊಂದಿಕೊಂಡಾಗ ಮಾತ್ರ ಉಳಿಯಲು ಸಾಧ್ಯ. ದುರ್ಬಲವಾಗಿದ್ದರೆ ಯಾರೂ ಸಹಾಯ ಮಾಡುವುದಿಲ್ಲ. ಅದೇ ರೀತಿ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಭೂತಕಾಲ ಆಗಿಹೋಗಿದೆ, ವರ್ತಮಾನ ಉತ್ತಮವಾಗಿಲ್ಲ, ಭವಿಷ್ಯವನ್ನು ನಿರೀಕ್ಷಿಸಿಕೊಳ್ಳುವಂತಿಲ್ಲ ಎಂದು ನುಡಿದರು.
ಶಾಲೆ ಭವಿಷ್ಯಕ್ಕೆ ಉಳಿದುಕೊಳ್ಳಬೇಕಾದರೆ ಈಗಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳಬೇಕು. ಈ ಶಾಲೆಯ ಶಿಕ್ಷಕರು ತಾವುಗಳು ಉಳಿದುಕೊಂಡು ಶಾಲೆಯನ್ನು ಉಳಿಸಲು ಪಣತೊಡಬೇಕು. ಈ ಶಾಲೆಯಲ್ಲಿ ಓದಿ ಉನ್ನತ ಸ್ಥಾನದಲ್ಲಿರುವವರು, ಹಿರಿಯರು, ಶಿಕ್ಷಕರು ಉತ್ತಮ ಪ್ರಸ್ತಾವನೆಯೊಂದಿಗೆ ಸರ್ಕಾರಕ್ಕೆ ಸಲ್ಲಿಸಿ, ಅಭ್ಯುದಯಕ್ಕೆ ನೆರವಾದರೆ ನಾಳೆಗೂ ಅಮೃತ ಮಹೋತ್ಸವ ಉಳಿಯಲಿದೆ. ಇಲ್ಲದಿದ್ದರೆ ಇದು ಒಂದು ದಿನದ ಉತ್ಸವವಾಗುತ್ತದೆ. ಇತಿಹಾಸವಿರುವ ಶಾಲಾ ಕಟ್ಟಡಗಳು ಉಳಿಯಬೇಕು. ಇತಿಹಾಸ ಪ್ರಜ್ಞೆ ಇರುವ ಸರ್ಕಾರಗಳು ಅವುಗಳನ್ನು ಉಳಿಸಲು ನೆರವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಅಮೃತಧಾರೆ ಸ್ಮರಣಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪದ್ಮಶ್ರೀ ಪುರಸ್ಕೃತ ಕೆ.ಎಸ್.ರಾಜಣ್ಣ, ಶಾಸಕ ಎಚ್.ಟಿ.ಮಂಜು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಕೃಷಿ ವಿಜ್ಞಾನಿ ಗುಬ್ಬಯ್ಯ, ಕೆಎಎಸ್ ಅಧಿಕಾರಿಗಳಾದ ಸಿ.ರಾಜು, ಕೆ.ಎಂ.ನಾಗೇಶ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಶಿವಲಿಂಗಯ್ಯ, ಚಿಕ್ಕಲಿಂಗಯ್ಯ, ಮನ್ನಾರ್ ಕೃಷ್ಣರಾವ್, ಶಿವಲಿಂಗಯ್ಯ, ಟಿ.ರಮೇಶ್, ಸುರೇಶ್ ಇತರರಿದ್ದರು.
ಕಾಲಘಟ್ಟಕ್ಕೆ ಹೊಂದಿಕೊಂಡಾಗ ಉಳಿವು: ಆದಿಶ್ರೀ:
ಇದು ವಿಜ್ಞಾನ- ತಂತ್ರಜ್ಞಾನ ಯುಗ. ಬದಲಾಗುವ ಕಾಲಘಟ್ಟಕ್ಕೆ ಹೊಂದಿಕೊಂಡು ಯಾವುದು ತನ್ನನ್ನು ತಾನು ಬದಲಾವಣೆ ಮಾಡಿಕೊಳ್ಳುವುದೋ ಅದು ಮಾತ್ರ ಉಳಿಯಲು ಸಾಧ್ಯ ಎಂದು ಆದಿ ಚುಂಚನಗಿರಿ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಮೈಷುಗರ್ ಪ್ರೌಢಶಾಲೆ ಅಮೃತ ಮಹೋತ್ಸವ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿ, ಕೃತಕ ಬುದ್ಧಿಮತ್ತೆ, ಕ್ಲೌಡ್, ಸೆಮಿಕಂಡಕ್ಟರ್ ಕೈಗಾರಿಕೆಗಳ ಜಾರಿಗೆ ಚಿಂತನೆ ನಡೆದಿದೆ. ಅದೇ ರೀತಿ ಹೆರಿಟೇಜ್ ಶಾಲೆಯಾಗಿರುವ ಮೈಷುಗರ್ ಪ್ರೌಢಶಾಲೆ ಸಮಗ್ರ ಬದಲಾವಣೆಯೊಂದಿಗೆ ಭವಿಷ್ಯದ ದೃಷ್ಟಿಯಿಂದ ಬೆಳವಣಿಗೆ ಕಾಣಬೇಕು. ಅಂತಹದೊಂದು ಬದಲಾವಣೆಯನ್ನು ಶಾಲೆಯ ಶಿಕ್ಷಣ ವ್ಯವಸ್ಥೆಯಲ್ಲಿ ತಂದಾಗ ಬೆಳವಣಿಗೆಯ ಹಾದಿ ಸುಗಮವಾಗುತ್ತದೆ ಎಂದು ತಿಳಿಸಿದರು.
ಆ ನಿಟ್ಟಿನಲ್ಲಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ಶಾಲೆಯಲ್ಲಿ ಓದಿ ಉನ್ನತ ಸ್ಥಾನದಲ್ಲಿರುವವವರು ಪ್ರಯತ್ನಿಸಲಿ. ಕೇಂದ್ರ ಸಚಿವ ಕುಮಾರಸ್ವಾಮಿ ಅವರೂ ಸಹಾಯಹಸ್ತ ನೀಡುವ ಭರವಸೆ ನೀಡಿದ್ದು, ಅವರ ನೆರವನ್ನೂ ಪಡೆದುಕೊಂಡು ಮುನ್ನಡೆಯಲಿ ಎಂದು ಆಶಿಸಿದರು.