ತಂಬಾಕು ಸೇವನೆಯಿಂದ ದೂರವಿದ್ದರೆ ಭವಿಷ್ಯ ಉಜ್ವಲ: ನ್ಯಾಯಾಧೀಶರಾದ ಜಿ.ಕೆ. ದಾಕ್ಷಾಯಿಣಿ ಸಲಹೆ

KannadaprabhaNewsNetwork | Published : Jun 2, 2025 1:12 AM
ಬೀಡಿ ಮತ್ತು ಸಿಗರೇಟ್ ವಾಸನೆ ಆರೋಗ್ಯಕ್ಕೆ ಹಾನಿಕರ. ಈ ಬಗ್ಗೆ ಯುವ ಜನರು ಅರಿವು ಮೂಡಿಸಿ ನಿಯಂತ್ರಿಸಬೇಕು. ಸಾರ್ವಜನಿಕರ ಸ್ಥಳದಲ್ಲಿ ಧೂಮಪಾನ ಮಾಡುವಂತಿಲ್ಲ. ಇದಕ್ಕೆ ದಂಡ ಕೂಡ ವಿಧಿಸಲಾಗುತ್ತದೆ. ಈ ಧೂಮಪಾನ ಸೇವನೆ ಕೇವಲ ಗಂಡು ಮಕ್ಕಳಲ್ಲಿ ಮಾತ್ರವಲ್ಲ, ಹೆಣ್ಣು ಮಕ್ಕಳಲ್ಲಿಯೂ ಕೂಡ ಕಂಡುಬರುತ್ತಿದೆ.
Follow Us

ಕನ್ನಡಪ್ರಭ ವಾರ್ತೆ ಹಾಸನ

ಯುವ ಜನಾಂಗ ಎಚ್ಚೆತ್ತುಕೊಂಡು ತಂಬಾಕು ಸೇವನೆಯಿಂದ ದೂರವಿದ್ದರೆ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಕೆ. ದಾಕ್ಷಾಯಿಣಿ ಸಲಹೆ ನೀಡಿದರು.

ನಗರದ ಎಂ.ಜಿ. ರಸ್ತೆ ಬಳಿ ಇರುವ ಉನ್ನತ ಶಿಕ್ಷಣ ಸಂಸ್ಥೆ ಹಾಸನ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಸನ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಸನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ತಂಬಾಕು ಸೇವನೆ ಆರೋಗ್ಯಕ್ಕೆ ಕೆಟ್ಟದ್ದು ಎಂದು ಗೊತ್ತಿದ್ದರೂ ಸೇವನೆ ಮಾಡುತ್ತಾರೆ. ಯುವ ಜನಾಂಗ ಇದರಿಂದ ದೂರ ಇದ್ದು, ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾಗಿದೆ. ತಂಬಾಕು ಸೇವನೆಯಿಂದ ಆರೋಗ್ಯಕ್ಕೆ ಹಾನಿಕರ ಎಂದು ಯಾವುದೇ ಚಲನಚಿತ್ರ ಮಂದಿರದಲ್ಲಿ ಮೊದಲು ಪ್ರದರ್ಶಿಸಿ ನಂತರ ಸಿನಿಮಾ ಶುರುವಾಗುತ್ತದೆ. ಈ ಬಗ್ಗೆ ಎಷ್ಟು ಜನರು ಅರ್ಥ ಮಾಡಿಕೊಳ್ಳುತ್ತಿದೇವೆ ಎಂದರು.

ಬೀಡಿ ಮತ್ತು ಸಿಗರೇಟ್ ವಾಸನೆ ಆರೋಗ್ಯಕ್ಕೆ ಹಾನಿಕರ. ಈ ಬಗ್ಗೆ ಯುವ ಜನರು ಅರಿವು ಮೂಡಿಸಿ ನಿಯಂತ್ರಿಸಬೇಕು. ಸಾರ್ವಜನಿಕರ ಸ್ಥಳದಲ್ಲಿ ಧೂಮಪಾನ ಮಾಡುವಂತಿಲ್ಲ. ಇದಕ್ಕೆ ದಂಡ ಕೂಡ ವಿಧಿಸಲಾಗುತ್ತದೆ. ಈ ಧೂಮಪಾನ ಸೇವನೆ ಕೇವಲ ಗಂಡು ಮಕ್ಕಳಲ್ಲಿ ಮಾತ್ರವಲ್ಲ, ಹೆಣ್ಣು ಮಕ್ಕಳಲ್ಲಿಯೂ ಕೂಡ ಕಂಡುಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಯಾವ ತಂದೆ- ತಾಯಿಯಾಗಲಿ ತಮ್ಮ ಮಕ್ಕಳನ್ನು ಯಾವುದೇ ದುಶ್ಚಟಕ್ಕೆ ತಳ್ಳಲು ಬಯಸುವುದಿಲ್ಲ. ಮುಂದಿನ ಭವಿಷ್ಯ ಉಜ್ವಲವಾಗಬೇಕಾದರೆ ಯುವ ಜನಾಂಗ ಎಲ್ಲಾ ದುಶ್ಚಟಗಳಿಂದ ದೂರವಿರುವುದು ಉತ್ತಮ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹಾರನಹಳ್ಳಿ ರಾಮಸ್ವಾಮಿ, ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಡಿ.ಬಿ. ಹೇಮಂತ್ ಕುಮಾರ್, ಪ್ರಾಂಶುಪಾಲರಾದ ಬಿ. ಕುಮಾರ್, ನಿರ್ದೇಶಕ ಡಾ. ಪಾರ್ಥ, ಜಿಲ್ಲಾ ಏಡ್ಸ್ ರೋಗ ನಿಯಂತ್ರಣಾಧಿಕಾರಿ ಡಾ. ವಿಜಯ್ ಗೊರೂರು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಿ.ಪಿ. ಪ್ರದೀಪ್ ಇತರರು ಉಪಸ್ಥಿತರಿದ್ದರು.