ಶ್ರೀ ಮಾರಿಕಾಂಬೆಯ ಉತ್ಸವ ವಿಧ್ಯುಕ್ತ ಆರಂಭ

KannadaprabhaNewsNetwork |  
Published : Feb 04, 2026, 01:30 AM IST
ತವರುಮನೆ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀಮಾರಿಕಾಂಬೆ | Kannada Prabha

ಸಾರಾಂಶ

ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಪಟ್ಟಣದ ಆರಾಧ್ಯ ದೈವ ಶ್ರೀಮಾರಿಕಾಂಬಾ ದೇವಿಯ ಜಾತ್ರೋತ್ಸವವು ದೇವಿಯ ತವರುಮನೆ ದೇವಸ್ಥಾನದಲ್ಲಿ ಉತ್ಸವಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಮಂಗಳವಾರ ವಿಧ್ಯುಕ್ತವಾಗಿ ಆರಂಭಗೊಂಡಿತು.

ಕನ್ನಡಪ್ರಭ ವಾರ್ತೆ ಸಾಗರ

ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಪಟ್ಟಣದ ಆರಾಧ್ಯ ದೈವ ಶ್ರೀಮಾರಿಕಾಂಬಾ ದೇವಿಯ ಜಾತ್ರೋತ್ಸವವು ದೇವಿಯ ತವರುಮನೆ ದೇವಸ್ಥಾನದಲ್ಲಿ ಉತ್ಸವಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಮಂಗಳವಾರ ವಿಧ್ಯುಕ್ತವಾಗಿ ಆರಂಭಗೊಂಡಿತು.

ಬೆಳಿಗ್ಗೆ ಶ್ರೀ ದೇವಿಗೆ ವಿಶೇಷ ಪೂಜೆ ಜತೆಗೆ ಮಾಂಗಲ್ಯಧಾರಣೆ ಶಾಸ್ತ್ರ ನಡೆಯಿತು. ದೇವಸ್ಥಾನದ ಅರ್ಚಕ ವೃಂದ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ನಂತರ ಭಕ್ತರಿಗೆ ಉಡಿತುಂಬಲು ಅವಕಾಶ ನೀಡಲಾಯಿತು. ಸರತಿ ಸಾಲಿನಲ್ಲಿ ನಿಂತು ಭಕ್ತರು ಅಮ್ಮನ ದರ್ಶನ ಪಡೆದು ಉಡಿ ತುಂಬಿದರು. ಅಮ್ಮನವರು ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲು ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳದಲ್ಲಿಯೆ ಹಾಜರಿದ್ದರು. ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ಎಎಸ್ಪಿ ಡಾ.ಬೆನಕ ಪ್ರಸಾದ್ ಇತರರು ಉಪಸ್ಥಿತರಿದ್ದರು. ಫೆ.11ರವರೆಗೆ ಜಾತ್ರೆ ನಡೆಯಲಿದೆ.

ಅಮ್ಮನವರ ದರ್ಶನಕ್ಕೆ ಕಿ.ಮೀ.ಗಟ್ಟಲೆ ಸಾಲು:

ಶ್ರೀ ಮಾರಿಕಾಂಬೆ ದರ್ಶನಕ್ಕೆ ಭಕ್ತರು ನೂಗುನುಗ್ಗಲು ಮಾಡಿದ್ದು ಕಂಡು ಬಂದಿದೆ. ರಾತ್ರಿ ೯ ಗಂಟೆಯಿಂದಲೇ ಮಾರಿಕಾಂಬಾ ದೇವಿ ಪೂಜೆಗೆ ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ರಾತ್ರಿ ನಿಂತವರಿಗೆ ಬೆಳಿಗ್ಗೆ ೫ ಗಂಟೆಗೆ ಅಮ್ಮನ ದರ್ಶನವಾದರೆ ಬೆಳಿಗ್ಗೆ ೫ರ ನಂತರ ಅಮ್ಮನ ದರ್ಶನಕ್ಕೆ ಬಂದವರಿಗೆ ಮಧ್ಯಾಹ್ನವಾದರೂ ದರ್ಶನ ಭಾಗ್ಯ ಸಿಗಲಿಲ್ಲ. ಅಮ್ಮನವರ ದರ್ಶನಕ್ಕೆ ೨ - ೫ ಕಿ.ಮೀ.ವರೆಗೂ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು.

ಪಾಸ್‌ಗಿಲ್ಲ ಕಿಮ್ಮತ್ತು:

ಆರಂಭದಲ್ಲಿ ಪಾಸ್ ವ್ಯವಸ್ಥೆ ಇಲ್ಲ ಎಂದು ಹೇಳಿದ್ದ ಸಮಿತಿ ಭಕ್ತರ ಒತ್ತಾಯಕ್ಕೆ ಮಣಿದು ಪಾಸ್ ವ್ಯವಸ್ಥೆ ಕಲ್ಪಿಸಿತ್ತು. ಪಾಸ್ ವ್ಯವಸ್ಥೆ ಸಮಿತಿಗೆ ಮುಳುವಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ೧೨೦೦ ರು. ಕೊಟ್ಟು ದೇವಿ ದರ್ಶನಕ್ಕೆ ವಿಶೇಷ ಪಾಸ್ ಪಡೆದವರಿಗೆ ಮಧ್ಯಾಹ್ನ ೨ ಗಂಟೆಯಾದರೂ ಅಮ್ಮನವರ ದರ್ಶನ ಭಾಗ್ಯ ಸಿಗಲಿಲ್ಲ. ದೇವಸ್ಥಾನದಿಂದ ಕೈನಲ್ಲಿ ಪಾಸ್ ಹಿಡಿದು ನಿಂತ ಭಕ್ತರ ಸರದಿ ನೆಹರೂ ಮೈದಾನ ದಾಟಿ ಹೋಗಿತ್ತು. ಅನ್ನದಾಸೋಹ ಮತ್ತು ದೇವಿ ದರ್ಶನಕ್ಕೆ ೨೦೦೦ ರೂ. ಪಾಸ್ ಮಾಡಲಾಗಿತ್ತು. ಈ ಪಾಸ್ ಪಡೆದವರಿಗೆ ಸಹ ಅಮ್ಮನ ದರ್ಶನ ಸುಲಭವಾಗಿ ಸಿಗಲಿಲ್ಲ. ದೇವಸ್ಥಾನದಿಂದ ಸೊರಬ ರಸ್ತೆಯವರೆಗೂ ಬಿಸಿಲಿನಲ್ಲಿ ಪಾಸ್ ಇದ್ದರೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪೊಲೀಸರ ಕ್ರಮಕ್ಕೆ ಅಸಮಾಧಾನ:

ಮಾರಿಕಾಂಬಾ ದೇವಿ ದರ್ಶನ ಜನರಿಗೆ ಸುಲಭವಾಗಿ ಸಿಗಬೇಕು ಎಂದು ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು. ಇದಕ್ಕಾಗಿ ಸುಮಾರು ೫೦೦ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು. ಅತಿಹೆಚ್ಚಿನ ಪೊಲೀಸ್ ವ್ಯವಸ್ಥೆಯೆ ಭಕ್ತರ ಅಸಮಾಧಾನಕ್ಕೆ ಕಾರಣವಾಯಿತು.

ಬಿಜೆಪಿ ಪ್ರತಿಭಟನೆ:

ದೇವಿಯ ದರ್ಶನಕ್ಕೆ ಅಡ್ಡಿಪಡಿಸುತ್ತಿರುವ ಪೊಲೀಸ್ ಇಲಾಖೆ ಕ್ರಮವನ್ನು ಖಂಡಿಸಿ ಬಿಜೆಪಿ ಪ್ರಮುಖರು ಸ್ಥಳದಲ್ಲಿಯೆ ಪ್ರತಿಭಟನೆ ನಡೆಸಿ, ಪೊಲೀಸರಿಗೆ ದಿಕ್ಕಾರ ಕೂಗಿದರು. ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಟಿ.ಡಿ.ಮೇಘರಾಜ್, ನಗರಸಭೆ ಮಾಜಿ ಸದಸ್ಯ ಆರ್. ಶ್ರೀನಿವಾಸ್ ಇತರರು ಪೊಲೀಸರು ಭಕ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅಮ್ಮನವರ ದರ್ಶನಕ್ಕೂ ಅವಕಾಶ ಕೊಡದಂತೆ ಅವರನ್ನು ತಡೆಯುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ತಕ್ಷಣ ಭಕ್ತರಿಗೆ ಅಮ್ಮನವರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ಎಎಸ್ಪಿ ಡಾ. ಬೆನಕ ಪ್ರಸಾದ್ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ದೇವಸ್ಥಾನ ಸಂಚಾಲಕರ ಪ್ರತಿಭಟನೆ:

ಜಾತ್ರೆ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಿದ್ದು, ಇವರು ಕಾರ್ಯನಿಮಿತ್ತ ದೇವಸ್ಥಾನಕ್ಕೆ ಹೋಗಲು ಸಹ ಪೊಲೀಸರು ಅವಕಾಶ ನೀಡಲಿಲ್ಲ. ತಮ್ಮ ಬಳಿ ಇರುವ ಪಾಸ್ ತೋರಿಸಿದರೂ ಬಂದೋಬಸ್ತಿನಲ್ಲಿದ್ದ ಪೊಲೀಸರು ಬಿಡಲು ಒಪ್ಪದೆ ಇದ್ದಾಗ ಸಂಚಾಲಕರು ತಮಗೆ ನೀಡಿದ ಬ್ಯಾಡ್ಜ್ ಮತ್ತು ಬ್ಯಾಗ್ ಎಸೆದು ಪೊಲೀಸರಿಗೆ ಧಿಕ್ಕಾರ ಕೂಗುವ ಜತೆಗೆ ತಾವು ಸಮಿತಿ ವಹಿಸಿದ ಕೆಲಸ ಮಾಡುವುದಿಲ್ಲವೆಂದು ಹಠ ಹಿಡಿದ ಘಟನೆ ನಡೆಯಿತು. ಜತೆಗೆ ಭಕ್ತರ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲವೆಂದು ಸರದಿ ಸಾಲಿನಲ್ಲಿ ನಿಂತ ಭಕ್ತರೂ ಧಿಕ್ಕಾರ ಕೂಗಿದರು.

ಹಿಂದಿನ ಎಲ್ಲ ಜಾತ್ರೆಗಳಿಗಿಂತ ಈ ಬಾರಿ ಅತಿಹೆಚ್ಚು ಭಕ್ತರು ಅಮ್ಮನವರ ದರ್ಶನಕ್ಕೆ ಬಂದಿರುವುದು, ಹೆಜ್ಜೆಹೆಜ್ಜೆಗೂ ಪೊಲೀಸರು ಬಂದೋಬಸ್ತ್‌ ಹೆಸರಿನಲ್ಲಿ ಜನರನ್ನು ತಡೆಯುತ್ತಿದ್ದದ್ದು ಭಕ್ತರ ಅಸಮಾಧಾನಕ್ಕೆ ಕಾರಣವಾಯಿತು.

ಕಾಗೋಡು ತಿಮ್ಮಪ್ಪ ಅಸ್ವಸ್ಥ

ಮಂಗಳವಾರ ಬೆಳಿಗ್ಗೆ ೧೧ ಗಂಟೆಯ ಸುಮಾರಿಗೆ ಅಮ್ಮನವರ ದರ್ಶನಕ್ಕೆ ಬಂದಿದ್ದ ವಿಧಾನಸಭೆ ಮಾಜಿ ಅಧ್ಯಕ್ಷ ಕಾಗೋಡು ತಿಮ್ಮಪ್ಪ ನೂಕುನುಗ್ಗಲು ಹಾಗೂ ಜನದಟ್ಟಣೆಯಿಂದ ತೀವ್ರ ಅಸ್ವಸ್ತಗೊಂಡು ಕುಸಿದು ಬಿದ್ದ ಘಟನೆ ನಡೆಯಿತು. ಎಲ್ಲ ಕಡೆ ಬ್ಯಾರಿಕೇಡ್ ಹಾಕಿದ್ದರಿಂದ ಆ್ಯಂಬುಲೆನ್ಸ್ ಸಹ ಒಳಗೆ ಬರಲು ಸಾಧ್ಯವಾಗದೆ ಇರುವುದರಿಂದ ಕಾರ್ಯಕರ್ತರು ಅವರನ್ನು ಕಷ್ಟಪಟ್ಟು ವಾಹನದ ಮೂಲಕ ಉಪ ವಿಭಾಗೀಯ ಆಸ್ಪತ್ರೆಗೆ ಕರೆದುಕೊಂಡು ಬಂದರು. ವೈದ್ಯ ಡಾ.ವಿಕ್ರಮ್ ತಕ್ಷಣ ಚಿಕಿತ್ಸೆ ನೀಡಿದ ನಂತರ ಕಾಗೋಡು ಸುಧಾರಿಸಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ