ಸಂಪುಟ ಸಭೆಗೆ ವಿಕಾಸ ಭವನದ ಅಂಗಳ ಮಿರಮಿರ!

KannadaprabhaNewsNetwork | Published : Sep 15, 2024 1:52 AM

ಸಾರಾಂಶ

ಸೆ. 17 ರಂದು ಸಚಿವ ಸಂಪುಟ ನಡೆಯಲಿರುವ ಕಲಬುರಗಿಯಲ್ಲಿರುವ ವಿಕಾಸ ಭವನದ ಮುಖ್ಯದ್ವಾರ ದೀಪಾಲಂಕಾರದಿಂದ ಝಗಮಗಿಸುತ್ತಿರುವ ನೋಟ

ಕನ್ನಡಪ್ರಭ ವಾರ್ತೆ ಕಲಬುರಗಿ

ಇದೇ ಸೆ.17ರಂದು ಸಿದ್ದರಾಮಯ್ಯ ಸರಕಾರದ 2024 ನೇ ಸಾಲಿನ 19ನೇ ಸಚಿವ ಸಂಪುಟ ಸಭೆ ನಿಗದಿಯಾಗಿರೋ ಹಿನ್ನೆಲೆಯಲ್ಲಿ ಕಲಬುರಗಿ ತನ್ನ ದಶಕದ ಕೊಳೆ ತೊಳೆದುಕೊಂಡು ಮಿರಮಿರ ಮಿಂಚುತ್ತಿದೆ.

2014 ನ.28 ರಂದು ಸಂಪುಟ ಸಭೆ ಇಲ್ಲಿ ನಡೆದಿತ್ತು. ದಶಕದ ನಂತರ ಇದೀಗ ಮತ್ತೆ ಸಭೆ ನೆಡೆಯುತ್ತಿರೋದರಿಂದಾಗಿ ಪ್ರಮುಖ ರಸ್ತೆ, ವೃತ್ತಗಳು, ಸಭೆ ನಡೆಯುತ್ತಿರುವ ವಿಕಾಸ ಭವನದ ಸುತ್ತಮುತ್ತ ಹಾಗೂ ಸಚಿವರು ಸಂಚರಿಸುವ ರಸ್ತೆಗಳ ಇಕ್ಕೆಲಗಳಲ್ಲಿ ಭರದಿಂದ ಸ್ವಚ್ಚತೆ ಕೆಲಸ ಸಾಗಿದೆ.

ಕಳೆದೊಂದು ದಶಕದಿಂದ ಡಾಂಬಾರ ಕಾಣದ ಇಲ್ಲಿನ ವಿಕಾಸ ಭವನದ ಅಂಗಳದಲ್ಲಿ ರಾತ್ರಿ ಬೆಳಗಾಗೋದ್ರೊಳಗೇ ಟಾರ್‌ ಸುರಿದು ರಸ್ತೆ ನಿರ್ಮಿಸಲಾಗಿದೆ. ಹೀಗಾಗಿ ಇಡೀ ವಿಕಾಸ ಸೌಧದ ಪ್ರಾಂಗಣ ಮಿರ ಮಿರ ಮಿಂಚುತ್ತಿದೆ.

ಮಂತ್ರಿ ಮಹೋದಯರೆಲ್ಲರ ವಾಹನಗಳು, ವಿವಿಧ ಇಲಾಖೆಗಳ ಮುಖ್ಯ, ಹೆಚ್ಚುವರಿ ಕಾರ್ಯದರ್ಶಿಗಳು, ಅವರ ಆಪ್ತ ಸಲಹೆಗಾರ ಅಧಿಕಾರಿಗಳು, ವಿಶೇಷ ಕರ್ತವ್ಯಾಧಿಕಾರಿಗಳು ಸೇರಿದಂತೆ 300 ಕ್ಕೂ ಹೆಚ್ಚು ವಿಐಪಿ ವಾಹನಗಳು ಅಂದು ಕಲಬುರಗಿಯ ವಿಕಾಸ ಭವನದಲ್ಲಿ ನಿಲುಗಡೆಯಾಗೋದರಿಂದ ಭವನದ ಸುತ್ತಲು ಬೆಳೆದಿದ್ದ ಪೋದೆಗಳನ್ನೆಲ್ಲ ತುಂಡರಿಸಿ ಇಡೀ ಪ್ರಾಂಗಣ ಲಕಲಕ ಮಾಡಲಾಗುತ್ತಿದೆ.

ವಿಕಾಸ ಭವನದಲ್ಲಿ ಉಪ ನೋಂದಣಿ ಅಧಿಕಾರಿ ಕಚೇರಿ ಹಾಗೂ ಸಂಚಾರ ಪೊಲೀಸ್‌ ಕಚೇರಿ ಇರುವ ಭಾಗದಲ್ಲಂತೂ ಭಾರಿ ಎತ್ತರಕ್ಕೆ ಪೋದೆಗಳು, ಕಸ ಕಂಟಿ ಬೆಳೆದಿತ್ತು. ಸಂಪುಟ ಸಭೆ ನೆಪದಿಂದಲಾದರೂ ಈ ಕಸ, ಕೊಚ್ಚೆ ಶುದ್ಧಿಯಾಗುತ್ತಿದೆ ಎಂದು ಕಲಬುರಗಿ ಮಂದಿ ಹೇಳುತ್ತಿದ್ದಾರೆ.

2014ರಲ್ಲೇ ಸುಣ್ಣ ಬಣ್ಣ ಕಂಡಿದ್ದ ವಿಕಾಸ ಭವನಕ್ಕೆ ಮತ್ತೆ ಬಣ್ಣ ಬಳಿಯಲಾಗುತ್ತಿದೆ. ಸಂಪುಟ ಸಭೆ ನಡೆಯುವ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿಯೂ ಆಸನ ವ್ಯವಸ್ಥೆ ಆಧುನೀಕರಣಗೊಳಿಸಲಾಗುತ್ತಿದೆ. 2014 ರ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯ ನಂತರ ಹೇಗಿತ್ತೋ ಹಾಗೆಯೇ ದಶಕ ಕಳೆದಿದ್ದ ಕಲಬುರಗಿ ವಿಕಾಸ ಭವನ ಇದೀಗ ಮತ್ತೊಂದು ಸಂಪುಟ ಸಭೆಗೆ ಸಿಂಗಾರಗೊಳ್ಳುತ್ತಿರೋದು ಇಲ್ಲಿಗೆ ಬಂದು ಹೋಗುವ ಸಾರ್ವಜನಿಕರಿಗಂತೂ ಖುಷಿ ತಂದಿದೆ.

ವಿಕಾಸ ಭವನ, ಐವಾನ್‌ ಏ ಷಾಹಿ ಪ್ರದೇಶ, ಶಹಾಬಾದ್‌ ಕಾಸ್‌, ಧ್ವಜಾರೋಣ ನಡೆಯಲಿರುವ ಪಟೇಲ್‌ ವೃತ್ತ, ಪೊಲೀಸ್‌ ಪರೇಡ್‌ ಮೈದಾನ ಸೇರಿದಂತೆ ಹಲವು ರಸ್ತೆಗಳಲ್ಲಿ ಕುಳಿಗಳನ್ನು ತುಂಬುವ ಕೆಲಸ ಪಾಲಿಕೆ ಯುದ್ದೋಪಾದಿಯಲ್ಲಿ ಕೈಗೊಂಡಿದೆ. ಮಳೆಯಿಂದಾಗಿ ರಸ್ತೆಗಳು ಹದಗೆಟ್ಟಿವೆ, ಹೊಂಡದಿಂದ ತುಂಬಿ ಹೋಗಿವೆ. ದುರಸ್ಥಿ ಮಾಡಿರೆಂದು ಗೋಳಾಡಿದರೂ ಕ್ಯಾರೆ ಎನ್ನದ ಪಾಲಿಕೆಯವರು ಈಗ ಹೇಗೆ ರಿಪೇರಿಗೆ ನಿಂತಿದ್ದಾರೆ ನೋಡಿ ಎಂದು ಪಾಲಿಕೆಯ ಜಾಣ ಧೋರಣೆಗೆ ಜನರೇ ಬೆಚ್ಚಿದ್ದಾರೆ.

ಸಂಪುಟ ಸಭೆ, ಸಚಿವರ ಸಂಚಾರ ದಾರಿಗಳಷ್ಟೇ ಲಕಲಕ!

ಸಂಪುಟ ಸಭೆಗೇ ಇಡೀ ಕಲಬುರಗಿ 55 ವಾರ್ಡ್‌ಗಳಲ್ಲಿಯೂ ಸ್ವಚ್ಛತೆ ಸಾಗಿದೆ ಅಂತೇನಾದ್ರೂ ತಿಳಿದರೆ ಅದು ತಪ್ಪು. ವಿಕಾಸ ಭವನ, ಸಂಪುಟ ಸಭೆಗೆ ಸಚಿವರು ಬಂದು ಹೋಗುವ ದಾರಿ, ಸಿಎಂ ಸಂಚಾರದ ರಸ್ತೆಗಳನ್ನು ಮೊದಲೇ ಗುರುತಿಸಲಾಗಿದ್ದು ಇಲ್ಲಷ್ಟೇ ಸ್ವಚ್ಛತೆ ಕೆಲಸ ಸಾಗಿದೆ. ಉಳಿದಂತೆ ಶೇ.90 ಕಲಬುರಗಿ ಎಲ್ಲಿತ್ತೋ ಅಲ್ಲೇ ಇದೆ. ಕಸ - ಕೊಚ್ಚೆ ಹಾಗೇ ರಾಶಿಯಾಗಿದ್ದರೂ ಕಳೆದ 4 ದಿನದಿಂದ ವಿಕಾಸ ಭವನದ ಸುತ್ತಲಷ್ಟೇ ಪೌರ ಕಾರ್ಮಿಕರು, ಪಾಲಿಕೆ ಪರಿಸರ ವಿಭಾಗದ ಸಿಬ್ಬಂದಿ ಗಿರಕಿ ಹೊಡೆಯುತ್ತಿರೋದರಿಂದ ನಗರದ ಉಳಿದ ಭಾಗದಲ್ಲಿ ಗಲೀಜು ಹೆಚ್ಚುತ್ತಿದೆ.

ನಾವು ರಸ್ತೆ ದುರಸ್ತಿ ಮಾಡಂದ್ರೆ ದುಡ್ಡಿಲ್ಲ ಅಂತಾರೆ, ಈಗೆಲ್ಲಿಂದ ಬಂತ ಹಣ? ಸಂಪುಟ ಸಭೆಗೆ ಬಂದು 1 ದಿನದಲ್ಲಿ 2 ಅಥವಾ 3 ಗಂಟೆಗೆ ಬಂದು ಹೋಗುವವರಿಗೇ ಈ ಪರಿ ವೆಚ್ಚ ಮಾಡುತ್ತಾರೆ. ಜನ ಕೇಳಿದರೆ ಹಣವಿಲ್ಲ ಅನ್ನೋರು ಮಂತ್ರಿಗಳು ಬರ್ತಾರೆ ಅಂದ್ರೆ ರಸ್ತೆ ಸ್ವಚ್ಛ ಮಾಡ್ತಾರೆ, ಇದೇ ಪ್ರಜಾಪ್ರಭುತ್ವ, ಪ್ರಜೆಗಳಿಗಿಲ್ಲ ಕಿಮ್ಮತ್ತೆ ಇಲ್ಲ. ಅವರ ಬೇಡಿಕೆಗಳಿಗೆ ಮಾನ್ಯತೆಯೇ ಇಲ್ಲ.

ಶರಣು ವಸ್ತ್ರದ, ಶಹಾಬಾದ್‌

2 ರಿಂದ 3 ಗಂಟೆ ಸಂಪುಟ ಸಭೆಯಲ್ಲಿ ಸಚಿವರು, ಅಧಿಕಾರಿಗಳೆಲ್ಲರೂ ವಿಕಾಸ ಭವನದ 3 ನೇ ಮಹಡಿ ಹತ್ತಿ ಇಳಿಯಲಿಕ್ಕೇ 2 ಗಂಟೆ ಬೇಕು. ಇನ್ನು ಸಭಾಂಗಣದಲ್ಲಿ 1 ಗಂಟೆ ಕುಳಿತು ಅದೇನು ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ ಪ್ರಗತಿ ಚಿಂತನೆ ನಡೆಸುತ್ತಾರೋ? ದಶಕದ ನಂತರ ವಿಕಾಸ ಭವನ, ಕೆಲವು ರಸ್ತೆಗಳ ಸ್ವಚ್ಚತೆಯೇ ಸಂಪುಟ ಸಭೆಯ ಲಾಭ, ಅದು ಬಿಟ್ಟರೆ ಉಳಿದೆಲ್ಲವೂ ಶೂನ್ಯ.

ನರಸಿಂಹ ಮೆಂಡನ್‌, ಮುಖಂಡರು, ಹೋಟಲ್‌ ಮಾಲೀಕರ ಸಂಘ, ಕಲಬುರಗಿ.

Share this article