ಬಡಗಬೈಲು ಗ್ರಾಮದಲ್ಲಿ ಒಂಟಿ ಸಲಗದ ಕಾಟ

KannadaprabhaNewsNetwork | Published : Jun 29, 2025 1:33 AM

ನರಸಿಂಹರಾಜಪುರ, ತಾಲೂಕಿನ ಮೆಣಸೂರು ಗ್ರಾಮ ಪಂಚಾಯಿತಿಯ ದ್ವಾರಮಕ್ಕಿ, ಕೋಟೆ ಬೈಲು,ಗುಡ್ಡದಮನೆಯಲ್ಲಿ ಕಳೆದ 3 ತಿಂಗಳಿಂದ ಒಂಟಿ ಸಲಗ ಬೀಡು ಬಿಟ್ಟಿದ್ದು ರಾತ್ರಿಯಾಗುತ್ತಲೇ ಅಡಕೆ, ತೋಟ, ಬಾಳೆ ತೋಟ,ತೆಂಗಿನಗಿಡ, ಕಾಫಿ ಗಿಡಗಳನ್ನು ಹಾಳು ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಮೆಣಸೂರು ಗ್ರಾಮ ಪಂಚಾಯಿತಿಯ ದ್ವಾರಮಕ್ಕಿ, ಕೋಟೆ ಬೈಲು,ಗುಡ್ಡದಮನೆಯಲ್ಲಿ ಕಳೆದ 3 ತಿಂಗಳಿಂದ ಒಂಟಿ ಸಲಗ ಬೀಡು ಬಿಟ್ಟಿದ್ದು ರಾತ್ರಿಯಾಗುತ್ತಲೇ ಅಡಕೆ, ತೋಟ, ಬಾಳೆ ತೋಟ,ತೆಂಗಿನಗಿಡ, ಕಾಫಿ ಗಿಡಗಳನ್ನು ಹಾಳು ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಳೆದ 1 ವಾರದಿಂದ ಕೋಟೆಬೈಲು ಸೀತಾರಾಮ, ಕೆ.ಪಿ.ಬಾಬು, ಗುಡ್ಡದಮನೆಯ ಶೇಖರ, ಕೃಷ್ಣಮೂರ್ತಿ, ದ್ವಾರಮಕ್ಕಿಯ ಡಿ.ಎಲ್.ವೆಂಕಟೇಶ, ಭವಾನಿ ಶಂಕರ, ಎಲ್.ಎಂ.ಸತೀಶ್, ಎಲ್.ಸಿ.ಶ್ರೀಧರ, ಜಿ.ಆರ್.ದಿವಾಕರ್, ಡಿ.ಗುರುರಾಜ, ಸುಶೀಲಮ್ಮ ಮುಂತಾದವರು ತೋಟಗಳಿಗೆ ನುಗ್ಗಿ ಅಡಕೆ, ಬಾಳೆ ಹಾಳು ಮಾಡಿದೆ. ಕೆಲವು ತೋಟಗಳಲ್ಲಿ ನೀರಿನ ಪೈಪ್ ಗಳು ಒಡೆದಿವೆ.

ಒಂಟಿ ಆನೆಯನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಈಗಾಗಲೇ ಗ್ರಾಮಸ್ಥರು ವಲಯ ಅರಣ್ಯಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ತೆರಳಿ ಕಾಡಾನೆ ಓಡಿಸಲು ಪಟಾಕಿ ಸಿಡಿಸಿ ಕಾರ್ಯಾಚರಣೆ ಮಾಡಿದ್ದಾರೆ. ಆದರೆ, ಒಂದು ಕಡೆ ಕಾಡಾನೆ ಓಡಿಸಿದರೆ ಮತ್ತೊಂದು ಭಾಗದ ಗ್ರಾಮಕ್ಕೆ ಹೋಗಿ ಅಲ್ಲಿನ ಕಾಡಿಗೆ ಸೇರಿ ಕೊಳ್ಳುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.

ಮೆಣಸೂರು ಗ್ರಾಮ ಪಂಚಾಯಿತಿಗೆ ಹೊಂದಿಕೊಂಡಿರುವ ಆಲಂದೂರು, ಮಳಲಿ, ನೇರ್ಲೆಕೊಪ್ಪದ ಕಡೆಗೂ ಕೆಲವು ದಿನ ಈ ಒಂಟಿ ಸಲಗ ಹೋಗುತ್ತಿದೆ. ಆ ಭಾಗದಲ್ಲೂ ಅಡಕೆ, ಬಾಳೆಗಳನ್ನು ನಾಶ ಮಾಡಿ ನಂತರ ಮೆಣಸೂರು ಗ್ರಾಮ ಪಂಚಾಯಿತಿ ದ್ವಾರಮಕ್ಕಿ, ಕೋಟೆ ಬೈಲು, ಗುಡ್ಡದಮನೆಗೆ ಬರುತ್ತಿದೆ. ರಾತ್ರಿಯಾಗುತ್ತಲೇ ಗ್ರಾಮಗಳ ಅಡಕೆ ತೋಟಕ್ಕೆ ನುಗ್ಗುವ ಈ ಒಂಟಿ ಸಲಗ ಬೆಳಗಾಗುತ್ತಲೇ ಹತ್ತಿರದ ಮಲ್ಲಂದೂರು ಗುಡ್ಡಕ್ಕೆ ಸೇರುತ್ತಿದೆ. ಕಳೆದ 2 ವರ್ಷದಿಂದಲೂ ಈ ಒಂಟಿ ಸಲಗ ಮೆಣಸೂರು ಗ್ರಾಮಕ್ಕೆ ಬರುತ್ತಿದ್ದರೂ ಕೆಲವು ದಿನ ಇದ್ದು ಮತ್ತೆ ವಾಪಾಸು ಹೋಗುತ್ತಿತ್ತು.ಆದರೆ, ಈ ಬಾರಿ ಕಳೆದ 3 ತಿಂಗಳಿಂದಲೂ ಇದೇ ಗ್ರಾಮಗಳಲ್ಲಿ ಸುತ್ತಾಡುತ್ತಿರುವುದು ಇಲ್ಲಿನ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

-- ಬಾಕ್ಸ್ --

ಆನೆ ಕಾರ್ಯಾಚರಣೆಗೆ ಆಗ್ರಹ

ಬಡಗ ಬೈಲು ಗ್ರಾಮದ ಕೋಟೆ ಬೈಲಿನಲ್ಲಿ ಸಂಜೆ ಹೊತ್ತಿಗೆ ಒಂಟಿ ಆನೆ ಓಡಾಡುತ್ತಿದೆ. ರಸ್ತೆಯಲ್ಲಿ ಓಡಾಡುವ ಗ್ರಾಮಸ್ಥರು ಒಂಟಿ ಸಲಗದ ಓಡಾಟ ಕಂಡು ಭಯಪಡುತ್ತಿದ್ದಾರೆ. ರೈತರು ಅಡಕೆ ತೋಟಕ್ಕೆ ಹೋಗಲು ಭಯ ಪಡುವಂತಾಗಿದೆ. ಆದ್ದರಿಂದ ಎಲಿಫಂಟ್ ಟಾಸ್ಕ್ ಪೋರ್ಸ್ ನವರು ಈ ಒಂಟಿ ಆನೆಯನ್ನು ಕಾರ್ಯಾಚರಣೆ ಮಾಡಿ ಮೂಲ ಸ್ಥಳಕ್ಕೆ ಕಳಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.