ಜನರಲ್ಲಿ ಸಂಚಲನ ಸೃಷ್ಟಿಸಿದ ಕಾಳಿ ಹುಲಿ ಪರಿಸರ ಸೂಕ್ಷ್ಮ ಕರಡು

KannadaprabhaNewsNetwork |  
Published : Apr 09, 2026, 02:15 AM IST
ಕಾಳಿ ಹುಲಿ ರಕ್ಷಿತ ಪ್ರದೇಶ | Kannada Prabha

ಸಾರಾಂಶ

ಕಾಳಿ ಹುಲಿ ರಕ್ಷಿತ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಕರಡು ಅಧಿಸೂಚನೆ ಹೊರಡಿಸಿರುವುದು ಕಾಳಿ ಹುಲಿ ರಕ್ಷಿತ ಪ್ರದೇಶದ ವ್ಯಾಪ್ತಿಯ ಜನತೆಯಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ವಸಂತಕುಮಾರ್ ಕತಗಾಲ

ಕನ್ನಡಪ್ರಭ ವಾರ್ತೆ ಕಾರವಾರ

ಕಾಳಿ ಹುಲಿ ರಕ್ಷಿತ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಕರಡು ಅಧಿಸೂಚನೆ ಹೊರಡಿಸಿರುವುದು ಕಾಳಿ ಹುಲಿ ರಕ್ಷಿತ ಪ್ರದೇಶದ ವ್ಯಾಪ್ತಿಯ ಜನತೆಯಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಈ ಕರಡು ಅಧಿಸೂಚನೆ ಹೊರಡಿಸಿದ್ದು, ಈ ಬಗ್ಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು 60 ದಿನಗಳ ಕಾಲಾವಕಾಶವನ್ನೂ ನೀಡಲಾಗಿದೆ. ಪರಿಸರ ಸೂಕ್ಷ್ಮ ವಲಯ ಘೋಷಣೆಯಿಂದ ಆ ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ತೊಂದರೆ ಎದುರಾಗಲಿದೆಯೇ, ರಸ್ತೆ, ಸೇತುವೆ, ನಿರ್ಮಾಣ ಕಾಮಗಾರಿಗಳಿಗೆ ತೊಂದರೆ ಎದುರಾಗಲಿದೆಯೇ ಎಂಬ ಆತಂಕ ಸ್ಥಳೀಯರದ್ದಾಗಿದೆ. ಆದರೆ ಈ ಅಧಿಸೂಚನೆಯಿಂದ ಸ್ಥಳೀಯರ ಜನಜೀವನದ ಮೇಲೆ ಯಾವುದೇ ತೊಂದರೆ ಆಗಲಾರದು ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ಹೇಳಿಕೆ.

ಗಣಿಕಾರಿಗೆ, ಕೈಗಾರಿಕೆಗೆ ನಿಷೇಧ?:

ಸೂಕ್ಷ್ಮ ವಲಯ ಎಂದು ಘೋಷಣೆ ಆದಲ್ಲಿ ಮೂರು ವಿಭಾಗಗಳು ಇರಲಿವೆ. ಒಂದು ನಿಷೇಧಿತ ವಲಯ ಇದರಲ್ಲಿ ಗಣಿಗಾರಿಕೆ, ಪರಿಸರಕ್ಕೆ ಹಾನಿಕಾರಕ ಕೈಗಾರಿಕೆಗಳ ಸ್ಥಾಪನೆಯನ್ನು ನಿಷೇಧಿಸಲಾಗುತ್ತದೆ. ಎರಡನೇಯದ್ದು ರೆಗ್ಯುಲೇಟೆಡ್ ವಲಯ. ಇದರಲ್ಲಿ ಹೋಂ ಸ್ಟೇ, ಪರಿಸರಕ್ಕೆ ಪೂರಕವಾದ ಪ್ರವಾಸಿ ಚಟುವಟಿಕೆಗಳಿಗೆ ಅವಕಾಶ ಇದೆ. ಮತ್ತೊಂದು ಪ್ರೊಮೋಟೆಡ್ ಚಟುವಟಿಕೆಗಳು ಅಂದರೆ ಜನರ ವಾಸ್ತವ್ಯ, ದೈನಂದಿನ ಜೀವನಕ್ಕೆ ಅವಕಾಶ. ಈ ಮೂರೂ ವಿಭಾಗಗಳ ಮೇಲುಸ್ತುವಾರಿಗೆ ಒಂದು ಸಮಿತಿ ನೇಮಕ ಆಗಲಿದೆ. ಸಮಿತಿ ಎಲ್ಲ ಚಟುವಟಿಕೆಗಳ ಮೇಲೆ ನಿಗಾ ಇಡಲಿದೆ.

ಆದರೆ ವಲಯವನ್ನು ವೈಜ್ಞಾನಿಕವಾಗಿ ಗುರುತಿಸಿ ಅಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳ ಬಗ್ಗೆ ಸ್ಪಷ್ಟವಾಗಿ ನಮೂದಿಸಬೇಕು. 10 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಿತ ವಲಯ ಎಂದು ಗುರುತಿಸಿದ ಮೇಲೆ ಅದರ ಪಕ್ಕದಲ್ಲೇ ಪರಿಸರಕ್ಕೆ ಮಾರಕವಾದ ಚಟುವಟಿಕೆಗಳು ಬರಲು ಅವಕಾಶ ಇರಬಾರದು. ಯಾವುದೇ ಸಮಸ್ಯೆಗಳಿದ್ದರೂ ಸ್ಥಳೀಯ ನಿವಾಸಿಗಳ ಸಭೆ ಕರೆದು ಇತ್ಯರ್ಥಪಡಿಸಿಕೊಳ್ಳಬೇಕು ಎನ್ನುವುದು ಪರಿಸರಪ್ರಿಯರ ಅಂಬೋಣವಾಗಿದೆ.

-------

ಗೊಂದಲ ಬೇಡ

ಪರಿಸರ ಸೂಕ್ಷ್ಮ ವಲಯದ ಕರಡು ಅಧಿಸೂಚನೆ ಆಗಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳಲ್ಲಿ ಯಾವುದೇ ಗೊಂದಲ ಬೇಡ. ಪರಿಸರಕ್ಕೆ ಹಾನಿಕಾರಕ ಚಟುವಟಿಕೆಗಳಿಗಷ್ಟೇ ಕಡಿವಾಣ ಬೀಳಲಿದೆ.

-ನೀಲೇಶ್ ಶಿಂಧೆ ನಿರ್ದೇಶಕ, ಕಾಳಿ ಹುಲಿ ಸಂರಕ್ಷಿತ ಪ್ರದೇಶ.

------

ಸ್ಪಷ್ಟತೆ ಇಲ್ಲಉದ್ದೇಶಿತ ಪರಿಸರ ಸೂಕ್ಷ್ಮ ವಲಯದ ಕರಡು ಅಧಿಸೂಚನೆಯಲ್ಲಿ ಸಾಕಷ್ಟು ಗೊಂದಲಗಳಿದ್ದು, ಇವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಪಾಲುದಾರರ ಸಭೆಯನ್ನು ಕರೆಯುವಂತೆ ಹುಲಿ ಯೋಜನೆ ಡಿಸಿಎಫ್‌ಗೆ ಪತ್ರ ಬರೆದು ವಿನಂತಿಸಿದ್ದೇನೆ. ಏನೇ ಆಗಲಿ, ಸ್ಥಳೀಯರ ದಿನನಿತ್ಯದ ಜೀವನಕ್ಕೆ ಯಾವುದೇ ತೊಂದರೆ ಆಗಬಾರದು ಹಾಗೂ ಪರಿಸರಕ್ಕೆ ಹಾನಿ ಆಗುವಂತಹ ಯೋಜನೆಗಳಿಗೆ ಅನುಮತಿ ನೀಡಬಾರದು.

-ಗಿರಿಧರ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವೇಶ್ವರ, ಶಂಕರಾಚಾರ್ಯ ಜಯಂತಿಗೆ ಸಿದ್ಧತೆ
ಶ್ರಮದ ಬೆವರಿನ ಫಲ ಶಾಶ್ವತ, ಸುಖದಾಯಕ: ರಂಭಾಪುರಿ ಶ್ರೀ