ಕನಕಪುರ: ಪರಮಪೂಜ್ಯ ಶ್ರೀ. ಡಾ.ಮುಮ್ಮಡಿ ನಿರ್ವಾಣ ಸ್ವಾಮೀಜಿ ಬೆಂಗಳೂರು ದಕ್ಷಿಣ ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಕ್ಕೆ ದೊಡ್ಡ ದೀಪವಾಗಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಮರಿಸಿದರು.
ನನಗೂ ಸಮಾಜಕ್ಕೂ ಬಾಂಧವ್ಯ:
ನಮ್ಮ ವೀರಗಂಗಾಧರ ಅಜ್ಜಯ್ಯನವರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ನಾಡು ಧರ್ಮ ಸಾಮ್ರಾಜ್ಯವಾಗಲಿ. ಭಕ್ತಿಯ ನೆಲೆ ಬೀಡಾಗಲಿ ಎಂದು ಮಾರ್ಗದರ್ಶನ ನೀಡಿದ್ದಾರೆ. ನನಗೂ ಶಿವನ ಪಾದಕ್ಕೂ ಏನು ಸಂಬಂಧವೋ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಹಿಂದಿನ ತಲೆಮಾರುಗಳಿಂದ ಯಾರೇ ಹುಟ್ಟಿದರೂ ಕೆಂಪೇಗೌಡ ಎಂದು ಹೆಸರಿಡುವ ಪ್ರವೃತ್ತಿ ಇದೆ. ನಮ್ಮ ತಾಯಿ ಶಿವಾಲ್ದಪ್ಪ ಬೆಟ್ಟದ ಶಿವನಿಗೆ ಹರಕೆ ಕಟ್ಟಿಕೊಂಡ ಹಿನ್ನೆಲೆಯಲ್ಲಿ ನನಗೆ ಶಿವಕುಮಾರ್ ಎಂದು ಹೆಸರಿಟ್ಟರು. ಶ್ರೀ ದೇಗುಲ ಮಠದ ಸ್ವಾಮೀಜಿಗಳ ಬಳಿ ಆಶೀರ್ವಾದ ಪಡೆದಿದ್ದರು. ನಮ್ಮ ಮನೆಯಲ್ಲಿ ಏನೇ ಕೆಲಸವಾಗಬೇಕಾದರೂ ಈ ಮಠಕ್ಕೆ ಬಂದು ಸ್ವಾಮೀಜಿಗಳಿಂದ ಮಾರ್ಗದರ್ಶನ ಪಡೆಯುತ್ತಿದ್ದರು. ನಾನು ಕೂಡ ಧರ್ಮದಿಂದ ಏಳಬೇಕು, ಧರ್ಮದಿಂದ ಬಾಳಬೇಕು, ಧರ್ಮದಿಂದ ಆಳಬೇಕು, ಧರ್ಮದಿಂದ ತಾಳ್ಮೆಯಿಂದರಬೇಕು ಎಂದು ಕೆಲಸ ಮಾಡಿಕೊಂಡು ಬಂದಿದ್ದೇನೆ. ನಾನು ಹೈದರಾಬಾದ್ ಕರ್ನಾಟಕ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಓದಿದೆ. ಅಜ್ಜಯ್ಯ ಅವರು ಸ್ಥಾಪಿಸಿರುವ ರೇಣುಕಾಚಾರ್ಯ ಕಾಲೇಜಿನಲ್ಲಿ ಪದವಿ ಓದಿದೆ. ಹೀಗಾಗಿ ನನಗೂ ಈ ಭವ್ಯ ಸಮಾಜಕ್ಕೂ ದೊಡ್ಡ ಸಂಬಂಧ, ಬಾಂಧವ್ಯ ಇದ್ದುದರಿಂದ ಇದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.ನಾನು ಅಜ್ಜಯ್ಯನವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದಾಗ ಸಾಕಷ್ಟು ಚರ್ಚೆಯಾಯಿತು. ಅನೇಕ ಗಣ್ಯರು ನನ್ನನ್ನು ವಿವಿಧ ರೀತಿಯಲ್ಲಿ ಕೇಳಿದರು. ನಾನು ಅವರಿಗೆ ಇದು ನನ್ನ ನಂಬಿಕೆ ಎಂದು ಹೇಳಿದೆ. ನಮ್ಮ ಆರಾಧ್ಯ ದೈವ, ನಂಬಿಕೆ, ಮಾರ್ಗದರ್ಶನ ಕೊಟ್ಟವರನ್ನು, ಕಷ್ಟಕಾಲದಲ್ಲಿ ನಿಂತವರನ್ನು ನಾವು ಸ್ಮರಿಸಬೇಕು. ಈ ವಿಚಾರ ನನಗೆ, ಯಡಿಯೂರಪ್ಪನವರಿಗೆ, ಸೋಮಣ್ಣ ಅವರಿಗೆ ಗೊತ್ತು, ಬೇರೆಯವರಿಗೆ ಇದು ಗೊತ್ತಿಲ್ಲ ಎಂದು ತಿಳಿಸಿದರು.
ಇಂದು ಸ್ವಾಮೀಜಿಗಳು ನನ್ನ ಕೈನಿಂದ ಒಂದು ಪುಸ್ತಕ ಬಿಡುಗಡೆ ಮಾಡಿಸಿದರು. ಅದರಲ್ಲಿ ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ, ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥ ಮಿದಂ ಶರೀರಮ್ ಎಂಬ ಶ್ಲೋಕವಿದೆ. ಅಂದರೆ ಮರ ತನ್ನ ಸ್ವಂತಕ್ಕಿಂದ ಬೇರೆಯವರಿಗೆ ಹಣ್ಣು, ನೆರಳು ಕೊಟ್ಟು ಉಪಕಾರ ಮಾಡುತ್ತದೆ. ಅದರಂತೆ ನದಿ ಕೂಡ ತನ್ನ ಸ್ವಂತಕ್ಕಿಂತ ಬೇರೆ ಪ್ರಾಣಿಗಳು, ಜೀವಿಗಳಿಗೆ ನೀರು ಒದಗಿಸುತ್ತದೆ. ಹಸು ಕೂಡ ನಮಗೆ ಹಾಲು ಕೊಟ್ಟು, ವ್ಯವಸಾಯಕ್ಕೆ ಗೊಬ್ಬರ ಕೊಟ್ಟು ನೆರವು ನೀಡುತ್ತದೆ. ಅದೇ ರೀತಿ ನಮ್ಮ ಶರೀರ ಕೂಡ ಸಮಾಜದಲ್ಲಿ ಪರೋಪಕಾರಕ್ಕೆ ಸೀಮಿತವಾದದ್ದು ಎಂದು ಈ ಶ್ಲೋಕದ ಅರ್ಥ. ಅದೇ ರೀತಿ ನಮ್ಮ ಮುಮ್ಮಡಿ ಶ್ರೀಗಳು ತಮ್ಮನ್ನು ತಾವು ಸಮಾಜಕ್ಕೆ ಮುಡಿಪಾಗಿಟ್ಟಿದ್ದರು ಎಂದು ಹೇಳಿದರು.
ನಾನು ಕಳೆದ 45 ವರ್ಷಗಳಿಂದ ಇಲ್ಲಿಗೆ ಬಂದಾಗೆಲ್ಲಾ ಎಷ್ಟೇ ಒತ್ತಡ, ಕಷ್ಟವಿದ್ದರೂ ನನ್ನನ್ನು ಕುಟುಂಬದ ಸದಸ್ಯನಂತೆ ನನಗೆ ಆಶೀರ್ವಾದ ಮಾಡಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾರೆ. ನಾನು ಚುನಾವಣೆಯಲ್ಲಿ ಅರ್ಜಿ ಹಾಕುವಾಗ ಅವರು ಹಾಸಿಗೆ ಹಿಡಿದಿದ್ದರು. ಆಗ ಅವರನ್ನು ಭೇಟಿ ಮಾಡಿದಾಗ, ನೀವು ಮುಖ್ಯಮಂತ್ರಿಯಾಗಬೇಕು ಎಂಬುದೇ ನಮ್ಮ ಆಸೆ ಎಂದು ಚುನಾವಣೆಗೆ ಹಣ ಕೊಟ್ಟರು, ಇಂದು ನನಗೆ ದೊಡ್ಡ ಜವಾಬ್ದಾರಿ ವಹಿಸಿದ್ದಾರೆ. ಮಠದ ಭಕ್ತನಾಗಿ ಮುಂದೆ ನಡೆಯಬೇಕಾದ ಕಾರ್ಯಗಳ ಹೊರೆಯನ್ನು ನನಗೆ ಹೊರಿಸಿದ್ದು ಮನೆ ಹುಷಾರು, ಮಠ ಹುಷಾರು ಎಂದು ನಮ್ಮ ಹಿರಿಯರು ಹೇಳಿದಂತೆ ನನ್ನ ಮನೆಯನ್ನು ಕಾಪಾಡಿಕೊಳ್ಳುವಂತೆ ಈ ಮಠವನ್ನು ಕಾಪಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಕೆ ಕೆ ಪಿ ಸುದ್ದಿ 0101):
ಕೆ ಕೆ ಪಿ ಸುದ್ದಿ 1(2) :ಶ್ರೀ ಮುಮ್ಮಡಿ ನಿರ್ವಣಾ ಮಹಾಸ್ವಾಮಿಗಳ ಸ್ಮರಣಾರ್ಥ ಸೇತುವೆ ಉದ್ಘಾಟಿಸಿದ ಸಿ ಎಂ ಡಿಕೆಶಿ