ತನ್ನ ಮರಿಗಳನ್ನು ಹುಡುಕಿಕೊಂಡು ಬಂದ ತಾಯಿ ಚಿರತೆ ಬೋನಿಗೆ ಸೆರೆ

KannadaprabhaNewsNetwork |  
Published : Mar 21, 2026, 01:30 AM IST
20ಕೆಎಂಎನ್ ಡಿ16,17 | Kannada Prabha

ಸಾರಾಂಶ

ಆದರೆ, ತಾಯಿ ಚಿರತೆ ಪತ್ತೆಯಾಗದ ಕಾರಣ ಗ್ರಾಮಸ್ಥರು, ರೈತರು ಆತಂಕಕ್ಕೆ ಒಳಗಾಗಿದ್ದರು. ಚಿರತೆ ಓಡಾಡುವ ಸ್ಥಳದಲ್ಲಿ ಬೋನು ಇಟ್ಟು ಅದನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಚಿರತೆ ಹೆಜ್ಜೆ ಗುರುತುಗಳನ್ನು ಕಂಡು ಹಿಡಿದು ಚಿರತೆ ಓಡಾಡುತ್ತಿದ್ದ ಸ್ಥಳದಲ್ಲಿ ಬೋನ್ ಇಟ್ಟಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾಕುಪ್ರಾಣಿ, ನಾಯಿಗಳ ಮೇಲೆ ದಾಳಿ ಮಾಡಿ ಹಲವು ದಿನಗಳಿಂದ ರೈತರು, ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದ್ದ ಚಿರತೆ ತಾಲೂಕಿನ ಭೂತನಹೊಸೂರು ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.

ಗ್ರಾಮದ ಕಬ್ಬಿನಗದ್ದೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದು, ಗ್ರಾಮಸ್ಥರ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಿಗಳನ್ನು ವಶಕ್ಕೆ ಪಡೆದಿದ್ದರು.

ಆದರೆ, ತಾಯಿ ಚಿರತೆ ಪತ್ತೆಯಾಗದ ಕಾರಣ ಗ್ರಾಮಸ್ಥರು, ರೈತರು ಆತಂಕಕ್ಕೆ ಒಳಗಾಗಿದ್ದರು. ಚಿರತೆ ಓಡಾಡುವ ಸ್ಥಳದಲ್ಲಿ ಬೋನು ಇಟ್ಟು ಅದನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಚಿರತೆ ಹೆಜ್ಜೆ ಗುರುತುಗಳನ್ನು ಕಂಡು ಹಿಡಿದು ಚಿರತೆ ಓಡಾಡುತ್ತಿದ್ದ ಸ್ಥಳದಲ್ಲಿ ಬೋನ್ ಇಟ್ಟಿದ್ದರು.

ಶುಕ್ರವಾರ ಬೋನಿನೊಳಗೆ ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರು ಚಿರತೆ ಬೋನಿನಲ್ಲಿರುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ಸುದ್ಧಿ ಮುಟ್ಟಿಸಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಬೋನಿನಲ್ಲಿ ಸೆರೆಯಾಗಿದ್ದ ಚಿರತೆಯನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆ ವಾಹನದಲ್ಲಿ ಕೊಂಡೊಯ್ದು ಕಳೆದ ಎರಡು ದಿನಗಳ ಹಿಂದೆಯಷ್ಟೆ ಪತ್ತೆಯಾಗಿದ್ದ ಚಿರತೆ ಮರಿಗಳನ್ನು ತಾಯಿ ಚಿರತೆಯೊಂದಿಗೆ ಸೇರಿಸಿ ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾದರು.

ಭೂತನಹೊಸೂರು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಜಮೀನುಗಳಲ್ಲಿ ಓಡಾಟ ಮಾಡುತ್ತಿದ್ದ ಚಿರತೆ ಹಲವು ದಿನಗಳಿಂದ ಗ್ರಾಮಸ್ಥರು, ರೈತರ ನಿದ್ದೆಗೆಡಿಸಿತ್ತು. ಅಲ್ಲದೇ ಸಾಕು ಪ್ರಾಣಿಗಳು, ನಾಯಿಗಳ ಮೇಲೆ ದಾಳಿ ಮಾಡುತ್ತಿತ್ತು. ಈ ಹಿಂದೆಯೂ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇರಿಸಿದ್ದರೂ ಬೋನಿಗೆ ಬೀಳದೆ ತಪ್ಪಿಸಿಕೊಂಡು ಚಿರತೆ ಓಡಾಟ ನಡೆಸುತ್ತಿತ್ತು.

ಭೂತನಹೊಸೂರು ಗ್ರಾಮದ ಸಮೀಪ ಗುರುವಾರ ರೈತರ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಸಿಕ್ಕಿದ್ದವು. ತಾಯಿ ಚಿರತೆ ಮರಿ ಹುಡುಕಿಕೊಂಡು ಬರುವ ಸೂಚನೆ ಅರಿತು ಸ್ಥಳದಲ್ಲಿ ಬೋನ್ ಇಟ್ಟಲಾಗಿತ್ತು. ಮರಿಗಳನ್ನು ಹುಡುಕಲು ಬಂದು ತಾಯಿ ಚಿರತೆ ಬೋನಿಗೆ ಬಿದ್ದು ಚಿರತೆ ಮರಿ ಮತ್ತು ತಾಯಿ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಚಿರತೆ ಬೋನಿಗೆ ಬಿದ್ದಿರುವ ವಿಷಯ ತಿಳಿದು ಸುತ್ತಮುತ್ತಲಿನ ನೂರಾರು ಜನರು ಚಿರತೆ ನೋಡಲು ಮುಗಿಬಿದ್ದ ಘಟನೆಯೂ ನಡೆಯಿತು. ಮುಂಜಾಗೃತ ಕ್ರಮವಾಗಿ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಜನರು ಚಿರತೆ ಇರುವ ಬೋನಿನ ಬಳಿ ತೆರಳದಂತೆ ಎಚ್ಚರಿಕೆ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರೇಹಳ್ಳಿಯಲ್ಲಿ ಮತ್ತೆ ಕಾಡುಕೋಣ ಕಾಡೆಮ್ಮೆ ಪ್ರತ್ಯಕ್ಷ
ಗವೇನಹಳ್ಳಿಯಲ್ಲಿ ಹೊಸತಡಕಿಗೆ ಗುಡ್ಡೆ ಮಾಂಸ ಖರೀದಿ