ಗಾಂಧೀಜಿ ಸಿದ್ಧಾಂತ ಪಾಲನೆಯಿಂದ ಸ್ವಾತಂತ್ರ್ಯಕ್ಕೆ ನೈಜ ಅರ್ಥ: ಕಲ್ಯಾಣಿ ಕಾಂಬ್ಳೆ

KannadaprabhaNewsNetwork | Published : Aug 16, 2024 12:52 AM

ಸಾರಾಂಶ

ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ತ್ಯಾಗ ಸ್ಮರಣೀಯ, ಸ್ವಾತಂತ್ರ್ಯಕ್ಕಾಗಿಯೇ ಜೀವನ ಮುಡಿಪಾಗಿಟ್ಟ ಅಸಂಖ್ಯ ಹೋರಾಟಗಾರರ ಉದ್ದೇಶ ಮತ್ತು ಜೀವನಗಾಥೆಯೇ ಎಲ್ಲರಿಗೂ ಸದಾ ಪ್ರೇರಣಾದಾಯಕವಾಗಿದೆ ಎಂದು ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ವೆಂಕಟೇಶ ಕಾಂಬ್ಳೆ ಹೇಳಿದರು.

ಕುಮಟಾ: ರಾಷ್ಟ್ರಪಿತ ಮಹಾತ್ಮಾ ಗಾಂಧಿ ತಿಳಿಸಿದ ಸತ್ಯ, ಅಹಿಂಸೆ, ಸರಳತೆ, ಧರ್ಮಶ್ರದ್ಧೆ ಮತ್ತು ಸ್ವಚ್ಛತೆ ಇನ್ನಿತರ ಸಿದ್ಧಾಂತಗಳನ್ನು ಪಾಲಿಸುತ್ತಾ ಧರ್ಮ ಜಾತಿಭಾವ ಭೇದವಿಲ್ಲದೇ ಸಹೋದರ ಭಾವದಿಂದ ಬಾಳಿದರೆ ಸ್ವಾತಂತ್ರ್ಯಕ್ಕೆ ನೈಜ ಅರ್ಥ ಬರುತ್ತದೆ ಎಂದು ಉಪವಿಭಾಗಾಧಿಕಾರಿ ಕಲ್ಯಾಣಿ ವೆಂಕಟೇಶ ಕಾಂಬ್ಳೆ ಹೇಳಿದರು.

ಮಣಕಿ ಮಹಾತ್ಮಾ ಗಾಂಧಿ ಮೈದಾನದಲ್ಲಿ ೭೮ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಗೈದು ಸಾರ್ವಜನಿಕ ಸಂದೇಶ ನೀಡಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ತ್ಯಾಗ ಸ್ಮರಣೀಯ, ಸ್ವಾತಂತ್ರ್ಯಕ್ಕಾಗಿಯೇ ಜೀವನ ಮುಡಿಪಾಗಿಟ್ಟ ಅಸಂಖ್ಯ ಹೋರಾಟಗಾರರ ಉದ್ದೇಶ ಮತ್ತು ಜೀವನಗಾಥೆಯೇ ಎಲ್ಲರಿಗೂ ಸದಾ ಪ್ರೇರಣಾದಾಯಕವಾಗಿದೆ. ವೈವಿಧ್ಯತೆಯಲ್ಲಿ ಏಕತೆ ನಮ್ಮ ಶಕ್ತಿ. ಅಂಥ ಸಮಾಜವನ್ನು ನಿರಂತರ ಕಟ್ಟಬೇಕು. ಸಂವಿಧಾನ ಮತ್ತು ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿಯವುದು ನಮ್ಮ ಜವಾಬ್ದಾರಿ, ನಾವೆಲ್ಲರೂ ಗುಡಿಮರಗಳನ್ನು ಪ್ರಕೃತಿಯನ್ನು ಉಳಿಸೋಣ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಕನ್ನಡ ಮಾಧ್ಯಮದಲ್ಲಿ ಶ್ರೇಯಾಂಕಿತರಾದ ಸಂದೇಶ ಪಟಗಾರ, ಸೌಜನ್ಯಾ ಹೆಗಡೆ, ಕೆ.ಆರ್. ಜಾಹ್ನವಿ, ಆಂಗ್ಲ ಮಾಧ್ಯಮದಲ್ಲಿ ಕಾರ್ತಿಕ ರಾವುತ್ಕರ, ವೈಷ್ಣವಿ ನಾಯ್ಕ, ಭೂಮಿಕಾ ಭಟ್ ಇನ್ನಿತರರನ್ನು ಗೌರವಿಸಲಾಯಿತು. ಕ್ರೀಡಾ ಸಾಧಕರಾದ ಸುರೇಶ ಗೌಡ, ಸುಪ್ರಿಯಾ ಗೌಡ, ದಿವ್ಯಾ ನಾಯ್ಕ, ದೇವಕಿ ಗೌಡ, ಭೂಮಿಕಾ ಹೆಗಡೆ, ಸರ್ಕಾರಿ ನೌಕರಿಯಲ್ಲಿ ಉತ್ತಮ ಕರ್ತವ್ಯ ನಿರ್ವಹಣೆಗಾಗಿ ಆರ್‌ಎಫ್‌ಒ ಎಸ್.ಟಿ. ಪಟಗಾರ, ಪಿಡಿಒ ನವೀನ ನಾಯ್ಕ, ಚಾಲಕಿ ಜಯಂತಿ ಗೌಡ ಅವರನ್ನು ಸನ್ಮಾನಿಸಲಾಯಿತು.

ತಾಪಂ ಇಒ ಆರ್.ಎಲ್. ಭಟ್, ಪುರಸಭೆ ಸದಸ್ಯೆ ಗೀತಾ ಮುಕ್ರಿ, ಟಿಎಚ್‌ಒ ಡಾ. ಆಜ್ಞಾ ನಾಯಕ, ಸಿಪಿಐ ತಿಮ್ಮಪ್ಪ ನಾಯಕ, ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಕಸಾಪ ಅಧ್ಯಕ್ಷ ಸುಬ್ಬಯ್ಯ ನಾಯ್ಕ, ಉಪಪ್ರಾಚಾರ್ಯ ಜಿ.ಎಸ್. ಭಟ್, ಸಿಡಿಪಿಒ ಪಾಟೀಲ ಇನ್ನಿತರರು ಇದ್ದರು.

ಪಿಎಸ್‌ಐ ಮಂಜುನಾಥ ಗೌಡರ್ ಕವಾಯತು ನೇತೃತ್ವವಹಿಸಿ ಗೌರವ ವಂದನೆ ಸಲ್ಲಿಸಿದರು. ತಹಸೀಲ್ದಾರ್‌ ಸತೀಶ ಗೌಡ ಸ್ವಾಗತಿಸಿದರು. ಶಿಕ್ಷಕ ಎಂ.ಎಂ. ನಾಯ್ಕ ನಿರ್ವಹಿಸಿದರು. ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳ ತಂಡದಿಂದ ದೇಶಭಕ್ತಿ ಸಾರುವ ಸಾಂಸ್ಕೃತಿಕ ಪ್ರದರ್ಶನ ನಡೆಯಿತು.

Share this article