ದಾಬಸ್ಪೇಟೆ: ಸಿರಿಧಾನ್ಯಗಳ ಸೇವನೆಯಿಂದ ರೋಗಗಳನ್ನು ದೂರವಿಡಬಹುದು. ಈ ನಿಟ್ಟಿನಲ್ಲಿ ರೈತ ಮಹಿಳೆಯರು ಕ್ರಿಯಾಶೀಲರಾಗಬೇಕೆಂದು ಸೋಂಪುರ ರೈತ ಸಂಪರ್ಕ ಕೇಂದ್ರದ ನೋಡಲ್ ವಿಜ್ಞಾನಿ ಕೆ.ಬಿ.ಸುರೇಶ್ ತಿಳಿಸಿದರು.
ಮರಳಕುಂಟೆ ಗ್ರಾಮದಲ್ಲಿ 2024-25ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಆತ್ಮ ಯೋಜನೆಯಡಿ ಮಹಿಳಾ ಕಿಸಾನ್ ದಿವಸ್ ಹಾಗೂ ಕೃಷಿ ಪರಿವರ್ತನೆಯಲ್ಲಿ ಉದ್ಯಮಶೀಲ ಮಹಿಳೆಯರ ಪಾತ್ರ ಎಂಬ ಕಿಸಾನ್ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.ಬೆಳೆಗಳಿಗೆ ರೋಗರುಜುನಗಳು ಬಾರದಂತೆ ಬೀಜ ಬಿತ್ತನೆ ಸಮಯದಲ್ಲೇ ರೈತರು ಅಗತ್ಯ ಕ್ರಮ ಕೈಗೊಳ್ಳಬೇಕು. ಇದರಿಂದ ಬೆಳೆ ಸಮೃದ್ಧವಾಗಿ ಬೆಳೆದು ಇಳುವರಿ ಹೆಚ್ಚಿಸುತ್ತದೆ. ಮಹಿಳೆಯರು ಸ್ವಾವಲಂಬಿ ಬದುಕು ನಡೆಸಲು ಕೃಷಿ ಹಾಗೂ ಕೃಷಿ ಆಧಾರಿತ ಸ್ವ ಉದ್ಯೋಗ ಮಾಡುವ ಮೂಲಕ ಆರ್ಥಿಕವಾಗಿ ಸದೃಢರಾಗಬಹುದು. ಈ ನಿಟ್ಟಿನಲ್ಲಿ ಸರ್ಕಾರ ಕೂಡ ಸಹಕಾರ ನೀಡುತ್ತಿದೆ ಎಂದರು.
ಸೋಂಪುರ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಪ್ರಭು ಮಾತನಾಡಿ, ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಲು ರೈತ ಮಹಿಳೆಯರ ಪಾತ್ರ ಅಗತ್ಯ. ರೈತರಿಗೆ ನರೇಗಾ ಯೋಜನೆಯಡಿ ಅನೇಕ ಸೌಲಭ್ಯಗಳು ಲಭ್ಯವಿದ್ದು, ಸರ್ಕಾರ ಸಹಾಯಧನ ನೀಡುವ ಜೊತೆಗೆ ಸಾಲ ಸೌಲಭ್ಯ ನೀಡಿ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ರೈತ ಮಹಿಳೆಯರು ಯೋಜನೆಗಳ ಪ್ರಯೋಜನ ಪಡೆಯಬೇಕು. ಜೊತೆಗೆ ಈ ಬಾರಿ ಅತಿವೃಷ್ಟೆಯಿಂದಾಗಿ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. ಬೆಳೆ ಪರಿಹಾರದ ನಷ್ಟ ಭರಿಸಲು ಸರ್ಕಾರ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆ ಜಾರಿಗೆ ತಂದಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಜೊತೆಗೆ ಆಧಾರ್ ಹಾಗೂ ಪಹಣಿ ನೀಡಿ ಇ ಕೆವೈಸಿ ಮಾಡಿಸಿ ಎಫ್ಐಡಿಯಲ್ಲಿ ದಾಖಲಿಸಿದರೆ ಮಾತ್ರವೇ ಸರ್ಕಾರದ ಸೌಲಭ್ಯಗಳು ರೈತರಿಗೆ ಸಿಗಲು ಸಾಧ್ಯ ಎಂದರು.ಈ ಸಂದರ್ಭದಲ್ಲಿ ನೆಲಮಂಗಲ ಸಹಾಯಕ ಕೃಷಿ ನಿರ್ದೇಶಕ ಸಿದ್ದಲಿಂಗಯ್ಯ, ಮರಳಕುಂಟೆ ಗ್ರಾಪಂ ಅಧ್ಯಕ್ಷೆ ಶೋಭಾರಾಣಿ, ಉಪಾಧ್ಯಕ್ಷ ನಾಗರಾಜಪ್ಪ, ನಿಡವಂದ ಕೆನರಾ ಬ್ಯಾಂಕ್ ಮ್ಯಾನೇಜರ್ ಬಸವರಾಜೇಶ್ವರಿ ಪಾಟೀಲ್, ಕೃಷಿ ಅಧಿಕಾರಿಗಳಾದ ರವಿಕುಮಾರ್, ನವಿನಾ, ಅಂಜನಾ, ಸಿಬ್ಬಂದಿಗಳಾದ ವೀಣಾ, ರಂಜಿತಾ, ನರಸಿಂಹಮೂರ್ತಿ, ಜಲಾನಯನ ಸಹಾಯಕ ಕೆಂಪರಾಜು, ಗ್ರಾಪಂ ಸದಸ್ಯೆ ನಾಗಮಣಿ, ಪ್ರಗತಿಪರ ರೈತ ನರಸಿಂಹಯ್ಯ ಇತರರಿದ್ದರು.
ಪೋಟೋ 6 :ಮರಳಕುಂಟೆಯಲ್ಲಿ ಕೇಂದ್ರ ಪುರಸ್ಕೃತ ಆತ್ಮ ಯೋಜನೆಯಡಿ ಮಹಿಳಾ ಕಿಸಾನ್ ದಿವಸ್ ಹಾಗೂ ಕೃಷಿ ಪರಿವರ್ತನೆಯಲ್ಲಿ ಉದ್ಯಮಶೀಲ ಮಹಿಳೆಯ ಪಾತ್ರ ಎಂಬ ಕಿಸಾನ್ ಗೋಷ್ಠಿಯನ್ನು ನೋಡಲ್ ವಿಜ್ಞಾನಿ ಸುರೇಶ್ ಉದ್ಟಾಟಿಸಿದರು.