ನರಗುಂದ: ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಬೆಳಕನ್ನು ಹರಿಸಲು ತಾಯಿ ಎನ್ನುವ ಎರಡಕ್ಷರದ ಮಹಾಮಂತ್ರವೇ ಸಾಕು ಎಂದು ಬಲ್ಲವರು ಹೇಳಿದ್ದಾರೆ. ನವಮಾಸ ತನ್ನ ಉದರದಲ್ಲಿ ಹೊತ್ತು ಲೋಕದಲ್ಲಿ ಬೆಳಕನ್ನು ಕಾಣುವಂತೆ ಮಾಡಿದ ತಾಯಿಯ ಪ್ರೀತಿ ವಾತ್ಸಲ್ಯ ಒಲುಮೆ ಮನುಕುಲದ ಉನ್ನತಿಯ ಚಿಲುಮೆಯಾಗಿರುವುದು. ಅಷ್ಟೇ ಅಲ್ಲದೆ ಅಸಂಖ್ಯಾತ ಕವಿಗಳ ಕಲಾವಿದರ ಮಹಾನ್ ವ್ಯಕ್ತಿಗಳ ಜೀವನದ ಉತ್ಸಾಹದ ಚಿಲುಮೆಯು ಆಗಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಪ್ರಭಕ್ಕನವರು ಹೇಳಿದರು. ಅವರು ಪಟ್ಟಣದ ಶ್ರೀ ಯಡಿಯೂರ ಸಿದ್ದಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಬಿ ಇಡಿ ಎನ್ಎಸ್ಎಸ್ ಘಟಕದ ನೇತೃತ್ವದಲ್ಲಿ ನಡೆದ ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಸೂಕ್ತ ಮಾರ್ಗದಲ್ಲಿ ಮುನ್ನಡೆಸಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಹಾಯ ಮಾಡುವ ಮಾರ್ಗದರ್ಶಕ ಆತ್ಮವೇ ತಾಯಿ ಎಂದರು. ಹೀಗಾಗಿ ಪರಮಾತ್ಮನಲ್ಲಿ ಎಲ್ಲರೂ ಸಂಧಿಸಬೇಕಾದರೆ ನಿಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಂಡರೆ ಸಾಕಬೇಕೆಂದು ಕರೆ ನೀಡಿದರು. ಕಾಲೇಜಿನ ಪ್ರಾಚಾರ್ಯರಾದ ಆರ್.ಬಿ.ಪಾಟೀಲ ಮಾತನಾಡಿ, ತಾಯಿ ದೇವರ ಪವಿತ್ರ ಸೃಷ್ಟಿ ನಮಗೆ ಜೀವ ನೀಡುವ ಮೂಲ ಅವಳು, ನಿಸ್ವಾರ್ಥ ಪ್ರೀತಿ, ತ್ಯಾಗ, ಕ್ಷಮೆ ಮತ್ತು ತಾಳ್ಮೆಯ ಪ್ರತಿಮೆ ಎಂದು ಹೇಳಿದರು. ವಾತ್ಸಲ್ಯದ ಮೂರ್ತಿಯಾದ ತಾಯಿಯು ತನ್ನ ಹಸಿವು ದಣಿವು ಮರೆತು ಮಕ್ಕಳ ಸಂತೋಷ ಗೆಲುವುಗಳನ್ನು ತನ್ನ ಜೀವನದ ಗುರಿಯಾಗಿಸಿಕೊಂಡು ಅವಿರತವಾಗಿ ಶ್ರಮಿಸುವಳು. ಮಗುವಿನ ಭಾವನಾತ್ಮಕ ಮತ್ತು ಮಾನಸಿಕ ಬೆಳವಣಿಗೆಯನ್ನು ನಿರ್ಮಿಸುವ ಮೂಲಾಧಾರವೇ ತಾಯಿಯಾಗಿದ್ದಾಳೆ ಎಂದು ಹೇಳಿದರು.
ಶಕುಂತಲಾ ವೀರನಗೌಡ ಪಾಟೀಲ ಮಾತನಾಡಿ, ಈ ಕಾರ್ಯಕ್ರಮವು ಅದ್ಭುತವಾಗಿದ್ದು ನನಗೆ ತುಂಬಾ ಸಂತೋಷವನ್ನು ನೀಡಿದೆ. ಇದೇ ರೀತಿಯ ಕಾರ್ಯಕ್ರಮಗಳು, ಕಾಲೇಜಿನಲ್ಲಿ ನಡೆದುಕೊಂಡು ಬಂದರೆ ಮಕ್ಕಳಲ್ಲಿ ಪ್ರೀತಿ ವಿಶ್ವಾಸ ಸಂಬಂಧಗಳು ಕೂಡ ಗಟ್ಟಿಯಾಗುತ್ತದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಆಗಮಿಸಿದ್ದ ಎಲ್ಲ ತಾಯಂದಿರಿಂದ ಸಾಂಕೇತಿಕವಾಗಿ ತೊಟ್ಟಿಲನ್ನು ತೂಗುವ ಮೂಲಕ ಕಾರ್ಯಕ್ರಮದಲ್ಲಿ ಬಿ ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳೆಲ್ಲರೂ ತಮ್ಮ ತಮ್ಮ ತಾಯಂದಿರ ಪಾದ ಪೂಜೆಯನ್ನು ಮಾಡಿ ಮಾತೃದೇವೋಭವ ಎಂದು ಎಲ್ಲಾ ತಾಯಂದಿರಿಂದ ಆಶೀರ್ವಾದ ಪಡೆದುಕೊಂಡರು.
ಕಲಾ ಸೌರಭದ ಅಡಿಯಲ್ಲಿ ವಿವಿಧ ಪ್ರಶಿಕ್ಷಣಾರ್ಥಿಗಳಿಂದ ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲ ತಾಯಂದಿರಿಗೆ ಎಸ್ವೈಎಸ್ ಶಿಕ್ಷಣ ಸಂಸ್ಥೆಯಿಂದ ಒಲವಿನ ಉಡುಗೊರೆಯನ್ನು ನೀಡಲಾಯಿತು ಮತ್ತು ವಿವಿಧ ತಾಯಂದಿರು ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡು ಮಕ್ಕಳ ಮೇಲಿನ ತಮ್ಮ ಪ್ರೀತಿಯನ್ನು ಅಭಿವ್ಯಕ್ತ ಪಡಿಸಿದರು. ಹಾಗೆಯೇ ಎಲ್ಲ ವಿದ್ಯಾರ್ಥಿಗಳು ತಮ್ಮ ತಮ್ಮ ತಾಯಂದಿರೊಂದಿಗೆ ಅಮ್ಮನ ಕೈ ತುತ್ತು ಅಮೃತಕ್ಕೆ ಸಮಾನ ಎನ್ನುವಂತೆ ಎಲ್ಲರೂ ಸಾಮೂಹಿಕವಾಗಿ ಪ್ರಸಾದ ಸ್ವೀಕಾರ ಮಾಡಿಕೊಂಡರು. ಈ ಸಂದರ್ಭದಲ್ಲಿ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಎಂ.ಇ. ವಿಶ್ವಕರ್ಮ ಹಾಗೂ ಸಲಹಾ ಸಮಿತಿಯ ಸದಸ್ಯರು ಮತ್ತು ಕಾಲೇಜಿನ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ತಾಯಿಂದರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.ರಾಜೇಶ್ವರಿ ಆಯಟ್ಟಿ ಸ್ವಾಗತಿಸಿದರು. ನೀಲಾಂಬಿಕ ಹೂಗಾರ ಕಾರ್ಯಕ್ರಮ ನಿರೂಪಿಸಿದರು, ಜ್ಯೋತಿ ಪಾರಿಗೊಂಡ ವಂದಿಸಿದರು.