ನವಲಗುಂದ: ಆಪರೇಷನ್ ಸಿಂದೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ಬಿಜೆಪಿಯ ತಿರಂಗಾ ಯಾತ್ರೆಯನ್ನು ಮೇ 22ರಂದು ಆಯೋಜಿಸಲಾಗಿದೆ ಎಂದು ಬಿಜೆಪಿ ನವಲಗುಂದ ಮಂಡಲ ಅಧ್ಯಕ್ಷ ಗಂಗಪ್ಪ ಮನಮಿ ಹೇಳಿದರು.
ಮೇ 22 ರಂದು ಬೆಳಗ್ಗೆ 9 ಗಂಟೆಗೆ ಪಟ್ಟಣದ ಗಣಪತಿ ದೇವಸ್ಥಾನದಿಂದ ಪಕ್ಷಾತೀತವಾಗಿ ನಡೆಯಲಿರುವ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್ ಕಚೇರಿ ವರೆಗೂ ಸಂಚರಿಸಲಿದೆ ಎಂದರು.
ಹುಬ್ಬಳ್ಳಿ, ಸೊಲ್ಲಾಪುರ, ಸವದತ್ತಿ, ಯಲ್ಲಮ್ಮನಗುಡ್ಡ ಸೇರಿದಂತೆ ವಿವಿಧ ಸುಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ನವಲಗುಂದ ಬೈಪಾಸ್ ರಸ್ತೆ ₹327 ಕೋಟಿ ವೆಚ್ಚದ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಇದಕ್ಕೆ ನಿರಂತರವಾಗಿ ಪ್ರಯತ್ನ ಮಾಡಿದ್ದ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಹ್ಲಾದ ಜೋಶಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೂ ಕ್ಷೇತ್ರದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಮಾಜಿ ಯೋಧರಾದ ಮಲ್ಲಿಕಾರ್ಜುನ ಮುತ್ತಲಗೇರಿ, ಶಿವಾನಂದ ಕಮ್ಮಾರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪಿ.ಎಚ್. ಕೋನರಡ್ಡಿ, ಎಸ್.ಎಫ್. ನೀರಲಗಿ, ಪಿ.ಕೆ. ಹಿರೇಗೌಡ್ರ, ಜಿ.ವಿ. ಹೊಳೆಯನ್ನವರ, ಎಂ.ಎನ್. ವಗ್ಗರ, ಎಲ್.ಬಿ. ಕಮತ, ಸಿದ್ದನಗೌಡ ಪಾಟೀಲ್, ದೇವರಾಜ್ ದಾಡಿಬಾಯಿ, ಸಾಯಿಬಾಬಾ ಆನೆಗುಂದಿ, ಮಂಜುನಾಥ ಗಣಿ, ಸುರೇಶ ಗಾನಗೇರ, ಎಸ್.ಬಿ. ದಾನಪ್ಪಗೌಡ್ರ, ಮಲ್ಲಿಕಾರ್ಜುನ ಸಂಗನಗೌಡ್ರ, ಶಕುಂತಲಾ ಕರ್ಜಗಿ, ಬಸವರಾಜ್ ಕಾತರಕಿ, ನಿಂಗಯ್ಯ ಬಣ್ಣದನೂಲಮಠ, ಮೈಲಾರೆಪ್ಪ ವೈದ್ಯ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.
ಪಕ್ಷಾತೀತವಾಗಿ ನಡೆಯಲಿರುವ ಈ ತಿರಂಗಾ ಯಾತ್ರೆ ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಎಂಬ ಘೋಷಣೆಯೊಂದಿಗೆ ಗಣಪತಿ ದೇವಸ್ಥಾನದಿಂದ ಕಾಲ್ನಡಿಗೆಯೊಂದಿಗೆ ಪಟ್ಟಣದಾದ್ಯಂತ ತಿರಂಗ ಯಾತ್ರೆ ಸಂಚರಿಸಲಿದೆ. ಯಾತ್ರೆಯಲ್ಲಿ ವಿವಿಧ ಮಠಾಧೀಶರು, ಎಲ್ಲ ಜನಪ್ರತಿನಿಧಿಗಳು, ನ್ಯಾಯವಾದಿಗಳು, ಮಾಜಿ ಸೈನಿಕರು, ರೈತ ಸಂಘಟನೆಗಳು, ಶಿಕ್ಷಕರ ಸಂಘಟನೆಗಳು, ಕನ್ನಡಪರ ಹಾಗೂ ದಲಿತ ಪರ ಸಂಘ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿಯ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ ಹೇಳಿದರು.