ಮಂಗಳೂರು: ಗುರು-ಶಿಷ್ಯ ಪರಂಪರೆಯ ಪಾವಿತ್ರ್ಯ, ಘರಾಣಾ ಸಂಪ್ರದಾಯದ ಗಾಂಭೀರ್ಯ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಆಳವನ್ನು ಸ್ವರಗಳ ಮೂಲಕ ಅನಾವರಣಗೊಳಿಸುವ ‘ಅನುಬಂಧ-ಎ ಸೇಕ್ರೆಡ್ ಬಾಂಡ್’ ಸಂಗೀತೋತ್ಸವ ಆ. ೨೩ರಂದು ಸಂಜೆ ೫ಕ್ಕೆ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ.
ಗುರು-ಶಿಷ್ಯರ ಸಿತಾರ್ ತಂತಿಗಳಲ್ಲಿ ಅರಳುವ ಮೀಂಡ್, ಗಮಕ ಹಾಗೂ ತಾನ್ಗಳಿಗೆ ವಿಶ್ವಪ್ರಸಿದ್ಧ ತಬಲಾ ವಾದಕ ಮುಂಬಯಿಯ ಪಂ. ಯೋಗೇಶ್ ಸಂಶಿ ಮತ್ತು ಅವರ ಶಿಷ್ಯ ಯಶವಂತ ವೈಭವ್ ಲಯದ ಸೊಬಗು ತುಂಬಲಿದ್ದಾರೆ. ಸಿತಾರ್ ಮತ್ತು ತಬಲಾದ ನಡುವಿನ ಸೂಕ್ಷ್ಮ ಸಂವಾದ ಶ್ರೋತೃಗಳನ್ನು ನಾದದ ಆಂತರಿಕ ಲೋಕಕ್ಕೆ ಕರೆದೊಯ್ಯಲಿದೆ.
ಸಂಗೀತೋತ್ಸವದ ಪೂರ್ವಾರ್ಧದಲ್ಲಿ ಕಶ್ಯಪ್ ಬಂಧು ಖ್ಯಾತಿ ಪಡೆದ ಸಹೋದರರಾದ ಹೊಸದಿಲ್ಲಿಯ ಪಂ. ಪ್ರಭಾಕರ್ ಕಶ್ಯಪ್ ಹಾಗೂ ಪಂ. ದಿವಾಕರ್ ಕಶ್ಯಪ್ ಅವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದೆ. ಹಾರ್ಮೋನಿಯಂನಲ್ಲಿ ಖ್ಯಾತ ಕಲಾವಿದ ಪಂ. ರವೀಂದ್ರ ಕಟೋಟಿ ಹಾಗೂ ತಬಲಾದಲ್ಲಿ ಯಶವಂತ ವೈಭವ್ ಸಹವಾದನ ನೀಡಲಿದ್ದಾರೆ.ಗುರು ಮತ್ತು ಶಿಷ್ಯ ಒಂದೇ ವೇದಿಕೆಯಲ್ಲಿ ಜುಗಲ್ಬಂದಿ ನಡೆಸುವ ವಿನೂತನ ಪರಿಕಲ್ಪನೆ ಇದಾಗಿದೆ. ಗುರುವಿನ ಪರಿಪಕ್ವತೆ ಮತ್ತು ಶಿಷ್ಯನ ಉತ್ಸಾಹ ಒಂದೇ ನಾದದಲ್ಲಿ ಬೆರೆತಾಗ ಪರಂಪರೆ ಹಾಗೂ ಹೊಸತನದ ಅಪೂರ್ವ ಸಂಗಮ ಸೃಷ್ಟಿಯಾಗಲಿದೆ.
ಹಾರ್ಮೋನಿಯಂನಲ್ಲಿ ಖ್ಯಾತ ಕಲಾವಿದ ಪಂ. ರವೀಂದ್ರ ಕಟೋಟಿ ಹಾಗೂ ತಬಲಾದಲ್ಲಿ ಯಶವಂತ್ ವೈಭವ್ ಸಹವಾದನ ನೀಡಲಿದ್ದಾರೆ. ಗಾಯನ, ಹಾರ್ಮೋನಿಯಂ ಮತ್ತು ತಬಲಾದ ನಡುವಿನ ನಾದಸಂವಾದ ಶ್ರೋತೃಗಳಿಗೆ ಸಮೃದ್ಧ ಸಂಗೀತಾನುಭವ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.
‘ಅನುಬಂಧ’ ಎಂಬ ಶೀರ್ಷಿಕೆಯೇ ಸಂಗೀತೋತ್ಸವದ ಆಶಯವನ್ನು ಸಾರುತ್ತದೆ. ಇದು ರಾಗದಿಂದ ಬೆಸೆದ ಸಂಬಂಧ. ಮಾತಿನ ಬಂಧವಲ್ಲ, ಸ್ವರದ ಬಂಧ. ಗುರುನಿಂದ ಶಿಷ್ಯನಿಗೆ, ಶಿಷ್ಯನಿಂದ ಮುಂದಿನ ಪೀಳಿಗೆಗೆ ನಿರಂತರವಾಗಿ ಹರಿಯುವ ಸಂಗೀತದ ಅಮರ ಪ್ರವಾಹವೇ ಈ ‘ಅನುಬಂಧ’. ಈ ಕಾರ್ಯಕ್ರಮಕ್ಕೆ ಬುಕ್ ಮೈ ಶೋ ಆ್ಯಪ್ ಮೂಲಕ ಸೀಟು ಕಾಯ್ದಿರಿಸಿಕೊಳ್ಳಬಹುದಾಗಿದೆ.