ವಿರಾಜಪೇಟೆ ಸೇಂಟ್‌ ಆ್ಯನ್ಸ್‌ ಕಾಲೇಜು ಹಳೆ ವಿದ್ಯಾರ್ಥಿಗಳ ಸಮ್ಮಿಲನ

KannadaprabhaNewsNetwork | Published : Oct 25, 2024 12:46 AM

ಸಾರಾಂಶ

ವಿರಾಜಪೇಟೆ ಸೇಂಟ್‌ ಆ್ಯನ್ಸ್‌ ಪದವಿ ಕಾಲೇಜಿನಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಸಂಘದ ಸಮ್ಮಿಲನ 2024 ಕಾರ್ಯಕ್ರಮವನ್ನು ಕಾಲೇಜು ವ್ಯವಸ್ಥಾಪಕ, ಪ.ಪೂ. ಕಾಲೇಜು ಪ್ರಾಂಶುಪಾಲ ರೆ.ಫಾ. ಮದಲೈ ಮುತ್ತು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ವಿದ್ಯಾಸಂಸ್ಥೆಯ ಪ್ರಗತಿಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ಅಪಾರ ಎಂದು ವಿರಾಜಪೇಟೆ ಸೇಂಟ್‌ ಆ್ಯನ್ಸ್‌ ಪದವಿ ಕಾಲೇಜು ವ್ಯವಸ್ಥಾಪಕ, ಪ.ಪೂ. ಕಾಲೇಜು ಪ್ರಾಂಶುಪಾಲ ರೆ.ಫಾ. ಮದಲೈ ಮುತ್ತು ಅಭಿಪ್ರಾಯಪಟ್ಟಿದ್ದಾರೆ.

ಕಾಲೇಜಿನಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಸಂಘದ ಸಮ್ಮಿಲನ 2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಳೆ ವಿದ್ಯಾರ್ಥಿಗಳು ಒಂದೆಡೆ ಸೇರಲು ಹಳೆ ವಿದ್ಯಾರ್ಥಿ ಸಂಘ ಅಗತ್ಯ. ಹಳೆಯ ವಿದ್ಯಾರ್ಥಿ ಸಂಘದಿಂದ ವಿದ್ಯಾಸಂಸ್ಥೆಯ ಬೆಳವಣಿಗೆಗೆ ಪೂರಕವಾದ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಿದೆ ಎಂದರು.

ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ಹಾಗೂ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಜೇಮ್ಸ್ ಡೊಮಿನಿಕ್ ಮಾತನಾಡಿ, ಹಳೆಯ ವಿದ್ಯಾರ್ಥಿ ಸಂಘ ಕಾಲೇಜು ವ್ಯಾಸಂಗ ದಿನಗಳ ಹಳೆಯ ನೆನಪುಗಳನ್ನು ಮೆಲುಕು ಹಾಕಲು ಇರುವ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಸದಾ ತಾವು ಕಲಿತ ವಿದ್ಯಾಸಂಸ್ಥೆಗೆ ಕೃತಜ್ಞರಾಗಿರಬೇಕು. ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯಬೇಕು ಎಂದು ಹೇಳಿದರು.

ಪದವಿ ಕಾಲೇಜಿನ ಪ್ರಾಂಶುಪಾಲೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತೃಪ್ತಿ ಬೋಪಣ್ಣ ಮಾತನಾಡಿ, ಹಳೆ ವಿದ್ಯಾರ್ಥಿಗಳು ಸಂಸ್ಥೆಯ ಬೆಳವಣಿಗೆಗೆ ಸಹಕಾರ ನೀಡಬೇಕು. ಜೊತೆಗೆ ಹಳೆಯ ವಿದ್ಯಾರ್ಥಿ ಸಂಘ ನೋಂದಾಯಿಸಲಾಗಿದ್ದು ಹಳೆಯ ವಿದ್ಯಾರ್ಥಿಗಳು ವೃತ್ತಿ ಮಾರ್ಗದರ್ಶನ, ಹಣಕಾಸಿನ ನಿರ್ವಹಣೆ ಹಾಗೂ ಕಾಲೇಜು ಒದಗಿಸಿದ ಅವಕಾಶವನ್ನು ಸದ್ಬಳಕೆ ಮಾಡಬೇಕೆಂದರು.

ಕೆಲವೇ ತಿಂಗಳುಗಳಲ್ಲಿ ನ್ಯಾಕ್ ಸಮಿತಿ ಕಾಲೇಜಿಗೆ ಭೇಟಿ ನೀಡುತ್ತಿದ್ದು ಆ ನಿಟ್ಟಿನಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಸಹಕಾರ ಕೋರಿದರು.

ಹಳೆ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಹಳೆ ವಿದ್ಯಾರ್ಥಿಗಳಿಗೆ ಮನೋರಂಜನಾ ಆಟಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಾಗೂ ಉಪನ್ಯಾಸಕ ಜೋಯ್ಸನ್ ಲೋಬೋ ವರದಿ ಮಂಡಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಐಕ್ಯೂಎಸಿ ಸಂಚಾಲಕಿ ಹೇಮಾ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ನಿಕೇತ ಜೋಯ್ಸ್, ಖಜಾಂಚಿ ಹಾಗೂ ಉಪನ್ಯಾಸಕಿ ಸುನೀತಾ, ಉಪನ್ಯಾಸಕರು ಹಾಗೂ ಹಳೆಯ ವಿದ್ಯಾರ್ಥಿಗಳು ಇದ್ದರು.

ಉಪನ್ಯಾಸಕಿ ಹೇಮ ಸ್ವಾಗತಿಸಿದರು. ಉಪನ್ಯಾಸಕಿ ನಮ್ರತಾ ನಿರೂಪಿಸಿದರು. ದೃಶ್ಯಾ ವಂದಿಸಿದರು.

Share this article