ಕುಮಾರಪಟ್ಟಣ: ವಿಶ್ವಕರ್ಮ ಎಂದರೆ ಹಿಂದೂ ಧರ್ಮದ ಪುರಾಣಗಳ ಪ್ರಕಾರ, ದೇವತೆಗಳ ಮೂರ್ತಿಗಳ ಸೃಷ್ಟಿಕರ್ತರು. ವಿಶ್ವಕರ್ಮ ಅನ್ನುವ ಪಂಗಡಗಳು ಭಾರತದಾದ್ಯಂತ ವಿಸ್ತರಿಸಿ ವಿಂಗಡನೆಯಾಗಿವೆ ಎಂದು ವಡ್ನಾಳ ವಿಶ್ವಕರ್ಮ ಮಹಾ ಸಂಸ್ಥಾನ ಸಾವಿತ್ರಿ ಪೀಠ, ಕಾಶಿ ಮಠದ ಅಷ್ಟೋತ್ತರ ಶತಶ್ರೀ ಶಂರಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.
ವಿಶ್ವಕರ್ಮ ಸಮಾಜದವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸರ್ಕಾರ ವಿಶ್ವಕರ್ಮಿಗಳ ಆರ್ಥಿಕಾಭಿವೃದ್ಧಿಗಾಗಿ ಜಾರಿಗೆ ತಂದಿರುವ ಯೋಜನೆಯ ಲಾಭ ಪಡೆಯಬೇಕು. ದೇಶದ ಅಭಿವೃದ್ಧಿಗೆ ವಿಶ್ವಕರ್ಮರ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣತಮ್ಮಪ್ಪ ಬಾರ್ಕಿ ಮಾತನಾಡಿ, ಗುರು-ಹಿರಿಯರ ಆಶೀರ್ವಾದದಲ್ಲಿ, ನಮ್ಮ ಊರಲ್ಲಿ ಎಲ್ಲ ಜಾತಿ ಜನಾಂಗದವರು ಒಂದು, ಸರ್ವ ಜನಾಂಗದ ಶಾಂತಿಯ ತೋಟದಂತೆ ಇದ್ದೇವೆ. ಪಕ್ಷಭೇದ ಮರೆತು ಊರಿನ ಅಭಿವೃದ್ಧಿಗೆ ಎಲ್ಲರೂ ಶ್ರಮಿಸುತ್ತೇವೆ. ಒಟ್ಟಾರೆ ನಮ್ಮ ಚಳಗೇರಿ ಗ್ರಾಮದಲ್ಲಿ ಧರ್ಮಸಭೆಗಳು, ಇನ್ನಿತರ ಎಲ್ಲ ಕಾರ್ಯಕ್ರಮಗಳಿಗೆ ಒಗ್ಗಟ್ಟಾಗಿ ಎಲ್ಲ ಸಮಾಜದವರು ಭಾಗವಹಿಸಿ ಯಶಸ್ವಿಗೊಳಿಸುತ್ತೇವೆ ಎಂದು ಹೇಳಿದರು.ಧರ್ಮಸಭೆಯ ಅಧ್ಯಕ್ಷತೆಯನ್ನು ಚಂದ್ರಚಾರಿ ಪತ್ತಾರ್ ವಹಿಸಿದ್ದರು. ಮಾಜಿ ಶಾಸಕ ಅರುಣಕುಮಾರ್ ಪೂಜಾರ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಂಜುನಾಥಗೌಡ ಶಿವಣ್ಣನವರ, ಜಿಪಂ ಮಾಜಿ ಸದಸ್ಯ ಸಂತೋಷ್ಕುಮಾರ್ ಪಾಟೀಲ್ ಮಾತನಾಡಿದರು. ಊರಿನ ಪ್ರಮುಖರಾದ ಗುರುಸಿದ್ದನಗೌಡ ಪಾಟೀಲ್, ಜಕಣಾಚಾರಿ, ಮಾಯಾಚಾರಿ, ಬಸಪ್ಪಎತ್ತಿನಮನಿ, ಕುಮಾರ್ ತೋಟದ ಭಾಗವಹಿಸಿದ್ದರು.
ಬಾಜಾ, ಭಜಂತ್ರಿ, ಡೊಳ್ಳು, ಸಮಾಳ ವಾದ್ಯಗಳೊಂದಿಗೆ, ವೀರಾಚಾರಿ ಕಮ್ಮಾರ್ ತಂಡದವರಿಂದ ಪುರವಂತಿಕೆ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಾಳಿಕಾದೇವಿ, ವಿಶ್ವಕರ್ಮ, ಮೌನೇಶ್ವರ ದೇವರ ಶಿಲಾಮೂರ್ತಿಗಳ ಮೆರವಣಿಗೆ ಸಾಗಿ, ಕಾಳಿಕಾ ದೇವಿ ದೇವಸ್ಥಾನಕ್ಕೆ ಬಂದು ತಲುಪಿತು.