ಬರಗಾಲ ಸಮರ್ಪಕ ನಿರ್ವಹಣೆಗೆ ನರೇಗಾ ಸಹಕಾರಿ: ಸೋಮಲಿಂಗಪ್ಪ ಛಬ್ಬಿ

KannadaprabhaNewsNetwork |  
Published : Mar 28, 2024, 12:51 AM IST
ಜಾಗೃತಿ ಜಾಥಾ ನಡೆಯಿತು  | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದ ಸಕ್ರಿಯ ನರೇಗಾ ಕೂಲಿಕಾರರನ್ನು ಒಗ್ಗೂಡಿಸಿ ಕೆಲಸಕ್ಕೆ ಬರುವಂತೆ ಪ್ರೇರೇಪಿಸಬೇಕು.

ಮುಂಡಗೋಡ: ತೀವ್ರವಾಗಿ ಆವರಿಸಿರುವ ಬೇಸಿಗೆ ಹಾಗೂ ಬರಗಾಲವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ನರೇಗಾ ಯೋಜನೆ ಸಹಕಾರಿಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗ್ರಾಮೀಣ ಜನರಿಗೆ ಕೆಲಸ ಒದಗಿಸಲು ಮುಂದಾಗಬೇಕು. ಮನೆ- ಮನೆಗೆ ಭೇಟಿ ನೀಡಿ ಕೆಲಸದ ಬೇಡಿಕೆ ಅರ್ಜಿಗಳನ್ನು ಸಂಗ್ರಹಿಸಿ ಏ. 1ರಿಂದ ಬೇಡಿಕೆಗೆ ಅನುಗುಣವಾಗಿ ಕೆಲಸ ನೀಡಬೇಕು ಎಂದು ಮುಂಡಗೋಡ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಛಬ್ಬಿ ತಿಳಿಸಿದರು.

ಜಿಲ್ಲೆಯ ಮುಂಡಗೋಡ ತಾಲೂಕಿನ ಇಂದೂರು, ಹುನಗುಂದ, ನಂದಿಕಟ್ಟಾ, ಗುಂಜಾವತಿ ಹಾಗೂ ಮೈನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬುಧವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದಂತೆ ಆಯೋಜಿಸಲಾದ ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ, ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ ಅಭಿಯಾನದ ಭಾಗವಾದ ಮನೆ ಮನೆ ಭೇಟಿ ಮಾಡಿ ನಮೂನೆ 6ರಲ್ಲಿ ಕೂಲಿ ಬೇಡಿಕೆ ಸಂಗ್ರಹಿಸುವ ಕಾರ್ಯ ಮತ್ತು ಲೋಕಸಭಾ ಚುನಾವಣೆಯ ಮತದಾನ ಜಾಗೃತಿ ಜಾಥಾದಲ್ಲಿ ಮಾತನಾಡಿದರು.

ಬರಗಾಲ ಘೋಷಣೆಯಾದ ಕಾರಣ ನರೇಗಾದಡಿ ಕಾರ್ಯ ನಿರ್ವಹಿಸುವ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಪರಸ್ಪರ ಹೊಂದಾಣಿಕೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಗ್ರಾಮೀಣ ಪ್ರದೇಶದ ಸಕ್ರಿಯ ನರೇಗಾ ಕೂಲಿಕಾರರನ್ನು ಒಗ್ಗೂಡಿಸಿ ಕೆಲಸಕ್ಕೆ ಬರುವಂತೆ ಪ್ರೇರೇಪಿಸಬೇಕು. ನರೇಗಾದಲ್ಲಿ ಲಭ್ಯವಿರುವ ವೈಯಕ್ತಿಕ ಕಾಮಗಾರಿ ಹಾಗೂ ಸಮುದಾಯ ಕಾಮಗಾರಿಗಳಲ್ಲಿ ಸಿಗುವ ಕೂಲಿ ಕೆಲಸ ಮತ್ತು ಸೌಲಭ್ಯಗಳ ಕುರಿತು ಅರಿವು ಮೂಡಿಸಿ ಕೆಲಸಕ್ಕಾಗಿ ಗುಳೆ ಹೋಗದಂತೆ ಮನವರಿಕೆ ಮಾಡಬೇಕು ಎಂದರು.

2024- 2025ನೇ ಸಾಲಿನ ಆರ್ಥಿಕ ವರ್ಷದಲ್ಲಿ ನರೇಗಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನರೇಗಾ ಕೂಲಿಕಾರರು ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಿದರೆ ಕೆಲಸ ನೀಡಲಾಗುವುದು ಎಂದರು.

ಇದೇ ವೇಳೆ ಲೋಕಸಭಾ ಚುನಾವಣೆ ಘೋಷಣೆ ನಿಮಿತ್ತ ಗ್ರಾಮಸ್ಥರಿಗೆ ಹಾಗೂ ಮತದಾರರಿಗೆ ಚುನಾವಣೆ ಮಹತ್ವ, ನಿಷ್ಪಕ್ಷಪಾತ ಮತದಾನ, ಮತದಾನ ಪ್ರಕ್ರಿಯೆ ಕುರಿತು ಮತದಾನ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಇಂದೂರು ಹಾಗೂ ಮೈನಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರಿನಿವಾಸ ಮರಾಠೆ, ಮಂಜುನಾಥ, ಐಇಸಿ ಸಂಯೋಜಕರಾದ ಫಕ್ಕೀರಪ್ಪ ತುಮ್ಮಣ್ಣನವರ, ಬಿಎಫ್‌ಟಿಗಳಾದ ಗಣಪತಿ ಪವಾರ, ಹನುಮಂತ ಇಡಗೋಡ, ಯುವರಾಜ್ ಕೆ., ಮಂಜು ಸಾಗರ, ಮಂಜು ಪೂಜಾರ ಸಂತೋಷ ಹಿರೇಮಠ ಮತ್ತು ಜಿಕೆಎಂ ಶಿವಲೀಲಾ, ಗ್ರಾಪಂ ಕಾರ್ಯದರ್ಶಿಗಳು, ಕ್ಲರ್ಕ್‌, ಬಿಲ್ ಕಲೆಕ್ಟರ್, ಡಿಇಒ, ಸಿಬ್ಬಂದಿ, ಸ್ವಸಹಾಯ ಸಂಘಗಳ ಮಹಿಳೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯಾದ್ಯಂತ ಏಕರೂಪ ಬಾಡಿಗೆ ದರ ನಿಗದಿಗೆ ಮಾಲೀಕರು ಸಹಕರಿಸಿ
ಕೋಗಿಲು ಲೇಔಟ್‌ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ: ರಾಮಲಿಂಗಾರೆಡ್ಡಿ