ವಾಂತಿ ಭೇದಿ: ಬಂದಾರು ಗ್ರಾಮಕ್ಕೆ ಜಿಲ್ಲಾ ವೈದ್ಯಾಧಿಕಾರಿಗಳ ತಂಡ ಭೇಟಿ

KannadaprabhaNewsNetwork | Published : May 18, 2025 1:15 AM
Follow Us

ಸಾರಾಂಶ

ಈ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿದ್ದು, ಪರಿಸರದ ಬಾವಿ, ಬೋರ್‌ವೆಲ್, ಕೆರೆಗಳು ಕಲುಷಿತಗೊಂಡಿದ್ದು ಅದರ ನೀರಿನ ಉಪಯೋಗದಿಂದ ಬಂದಿರುವ ಸಾಧ್ಯತೆ ಇದ್ದು, ಅಲ್ಲಿನ ಜಲಮೂಲಗಳ ನೀರಿನ ಪರೀಕ್ಷೆ ನಡೆಸಲು ಇಲಾಖೆ ಕ್ರಮ ಕೈಗೊಂಡಿದೆ.

ಕಲುಷಿತ ನೀರಿನಿಂದ ಹರಡಿರುವ ಸಾಂಕ್ರಾಮಿಕ ರೋಗ ಎಂಬ ಶಂಕೆ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಬಂದಾರು ಗ್ರಾಮದಲ್ಲಿ ವಾಂತಿ ಭೇದಿಯಿಂದ ಮಹಿಳೆಯೊಬ್ಬರು ಮೃತಪಟ್ಟು ಹಲವರು ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ವೈದ್ಯಾಧಿಕಾರಿಗಳ ತಂಡ ಶನಿವಾರ ಪರಿಸರದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಬಂದಾರು ಸಹಿತ ಸಮೀಪದ ಮೊಗ್ರು ಇಳಂತಿಲದಲ್ಲೂ ಹಲವರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ.

ಬಂದಾರಿನ ಮನೆಯೊಂದರಲ್ಲಿ ಆರತಕ್ಷತೆ ಸಮಾರಂಭದ ಭೋಜನ ಸೇವಿಸಿದ ಬಳಿಕ ಹಲವರು ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದರ ಬಳಿಕ ಆರತಕ್ಷತೆಯಲ್ಲಿ ಭಾಗವಹಿಸದ ಮಂದಿಯಲ್ಲೂ ಈ ಲಕ್ಷಣಗಳು ಕಂಡುಬಂದಿದೆ. ಇದುವರೆಗೆ 3 ಗ್ರಾಮಗಳಲ್ಲಿ ಸುಮಾರು 27 ಮಂದಿ ಅಸ್ವಸ್ಥರಾಗಿದ್ದಾರೆ. ಹಾಗೂ ಅನೇಕರು ಹೊರರೋಗಿಗಳಾಗಿ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿಖರ ಕಾರಣ ತಿಳಿಯುವ ಅಗತ್ಯವಿದ್ದು, ಇದಕ್ಕಾಗಿ 40 ಜನ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ತಂಡ ಒಂದು ವಾರ ಪರಿಸರದ 700ರಷ್ಟು ಮನೆಗಳಲ್ಲಿ ಪರಿಶೀಲನೆ ನಡೆಸುವಂತೆ ಡಿಎಚ್‌ಒ ಸೂಚಿಸಿದ್ದಾರೆ.ನೀರಿನ ಸಮಸ್ಯೆ?:

ಈ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿದ್ದು, ಪರಿಸರದ ಬಾವಿ, ಬೋರ್‌ವೆಲ್, ಕೆರೆಗಳು ಕಲುಷಿತಗೊಂಡಿದ್ದು ಅದರ ನೀರಿನ ಉಪಯೋಗದಿಂದ ಬಂದಿರುವ ಸಾಧ್ಯತೆ ಇದ್ದು, ಅಲ್ಲಿನ ಜಲಮೂಲಗಳ ನೀರಿನ ಪರೀಕ್ಷೆ ನಡೆಸಲು ಇಲಾಖೆ ಕ್ರಮ ಕೈಗೊಂಡಿದೆ. ಇದು ಪಂಚಾಯಿತಿ ನಳ್ಳಿ ನೀರಿನಿಂದ ಉಂಟಾಗಿರುವ ತೊಂದರೆ ಆಗಿರುವುದಿಲ್ಲ ಎಂದು ತಿಳಿಸಿರುವ ಡಿಎಚ್‌ಒ, ಸ್ಥಳೀಯ ಜನರಿಗೆ ಪಂಚಾಯಿತಿ ಮೂಲಕ ಮುಂದಿನ ಕೆಲವು ದಿನಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಕುರಿತು ತಿಳಿಸಿದ್ದಾರೆ.

ಈ ಪ್ರಕರಣದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿರುವ ಬಂದಾರಿನ ಕಮಲಾ ಯಾವ ಕಾರಣದಿಂದ ಮೃತಪಟ್ಟಿದ್ದಾರೆ ಎಂಬ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಪಂಚಾಯಿತಿಯಲ್ಲಿ ಸಭೆ:

ಪ್ರಕರಣದ ಕುರಿತು ಪಂಚಾಯಿತಿಯಲ್ಲಿ ಸಭೆ ನಡೆದಿದ್ದು, ಹೆಚ್ಚಿನ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಡಿಎಚ್‌ಒ ಡಾ. ತಿಮ್ಮಯ್ಯ ಎಚ್.ಆರ್., ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್ ಚಂದ್ರ, ಸಾಂಕ್ರಾಮಿಕ ರೋಗ ತಜ್ಞೆ ಡಾ.ಶಿಲ್ಪಾ, ಸೂಕ್ಷ್ಮಾಣು ಜೀವಿ ತಜ್ಞೆ ವೀಣಾ ವಿಜಯರಾಜ್, ಟಿಎಚ್‌ಒ ಡಾ. ಸಂಜಾತ್, ಸ್ಥಳೀಯ ವೈದ್ಯಾಧಿಕಾರಿ ಸುನಿಲ್ ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಕ ಗುರುರಾಜ ಉಮಚಗಿ, ಸೋಮನಾಥ್, ಸಮುದಾಯ ಆರೋಗ್ಯ ಅಧಿಕಾರಿ ಲೀಲಾವತಿ, ತಾಲೂಕು ಆರೋಗ್ಯ ಪರೀಕ್ಷಾಧಿಕಾರಿ ಸುನೀತಾ ಹೆಗ್ಡೆ, ಪಂಚಾಯಿತಿ ಅಧ್ಯಕ್ಷ ದಿನೇಶ್ ಖಂಡಿಗ, ಪಿಡಿಒ ಪುರುಷೋತ್ತಮ ಜಿ. ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

--------------ಮೇಲ್ನೋಟಕ್ಕೆ ಇದೊಂದು ಕಲುಷಿತ ನೀರಿನಿಂದ ಹರಡಿರುವ ಸಾಂಕ್ರಾಮಿಕ ರೋಗವೆಂದು ಕಂಡುಬರುತ್ತಿದ್ದು, ಜನರು ಭಯಪಡುವ ಅಗತ್ಯವಿಲ್ಲ. ಆದರೆ ಇಲಾಖೆ ಸೂಚಿಸುವ ಕ್ರಮಗಳನ್ನು ಅನುಸರಿಸಿ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು ಹಾಗೂ ಗ್ರಾಮಸ್ಥರು ಇಲಾಖೆಯ ಕ್ರಮಗಳಿಗೆ ಸ್ಪಂದಿಸಬೇಕು. ಪಂಚಾಯಿತಿ ವತಿಯಿಂದ ಉತ್ತಮ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

। ಡಾ. ತಿಮ್ಮಯ್ಯ ಎಚ್.ಆರ್., ಡಿಎಚ್‌ಒ, ಜಿಲ್ಲಾ ಆಸ್ಪತ್ರೆ, ದ.ಕ.