ದಾಬಸ್ಪೇಟೆ: ಕಳೆದ ಎರಡು ವರ್ಷದಿಂದ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳೇ ಕ್ಷೇತ್ರ ಅಭಿವೃದ್ಧಿಯಾಗುತ್ತಿರುವುದಕ್ಕೆ ಉದಾಹರಣೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಧ್ಯೇಯ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.
ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗದರಿಲಿ ಎಂದು ವೃಷಭಾವತಿ ಯೋಜನೆಯ ಮೂಲಕ ತಾಲೂಕಿನ ಕೆರೆಗಳಿಗೆ ನೀರು ಹರಿಸಲಿದ್ದು, ಕಾಮಗಾರಿ ಚಾಲನೆಯಲ್ಲಿದೆ. ಇದ್ದರಿಂದ ಅಂತರ್ಜಲ ವೃದ್ಧಿಯಾಗಲಿದೆ. ಅಲ್ಲದೇ, ಕೃಷಿ ಚಟುವಟಿಕೆಗೆ ನೆರವಾಗಲಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಗುಣಮಟ್ಟದ ನೀರು ಪೂರೈಸುತ್ತೇವೆಯೇ ಹೊರೆತು ಕೊಳಚೆ ನೀರಲ್ಲ ಎಂದರು.
ಕಾಂಗ್ರೆಸ್ ಮುಖಂಡ ಹಸಿರುವಳ್ಳಿ ಕುಮಾರ್ ಮಾತನಾಡಿ, ಕ್ಷೇತ್ರದ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇದನ್ನು ಸಹಿಸಲಾಗದೆ ಕೆಲವರು ವೃಷಭಾವತಿ ಯೋಜನೆ ಕುರಿತು ಟೀಕೆ ಮಾಡುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮರೆಮಾಚುವ ಯತ್ನದಲ್ಲಿದ್ದಾರೆ. ಜನರು ಕೂಡ ಬುದ್ದಿವಂತರು. ಸುಖಾಸುಮ್ಮನೆ ಅಭಿವೃದ್ಧಿ ಕಾರ್ಯಗಳನ್ನು ವಿರೋಧಿಸುವುದು ಸರಿಯಲ್ಲ ಎಂದು ಹೇಳಿದರು.ಈ ಸಂದರ್ಭದಲ್ಲಿ ಹಸಿರುವಳ್ಳಿ ಗ್ರಾಪಂ ಅಧ್ಯಕ್ಷೆ ರಾಜಮ್ಮ, ಉಪಾಧ್ಯಕ್ಷ ಅನಂತರಾಜು, ಸದಸ್ಯರಾದ ವಾದಕುಂಟೆ ಚನ್ನಕೃಷ್ಣ ತಿಮ್ಮೇಗೌಡ, ಪಿಡಿಒ ಶೀಲಾ, ಯುತ್ ಕಾಂಗ್ರೆಸ್ ಅಧ್ಯಕ್ಷ ಯಶಂತ್ ಕುಮಾರ್, ಮುಖಂಡರಾದ ವರದನಾಯಕನಹಳ್ಳಿ ಪುರುಷೋತ್ತಮಗೌಡ, ನರಸಿಂಹಮೂರ್ತಿ, ಗಂಗಣ್ಣ ಚಿಕ್ಕನಹಳ್ಳಿ ಸಿದ್ದರಾಜು, ಜಕ್ಕನಹಳ್ಳಿ ಮುನಿರಾಜು ಮತ್ತಿತರು ಭಾಗವಹಿಸಿದ್ದರು.