ತಮಿಳ್ನಾಡಿಗೆ ತಿಂಗಳಿಂದ ಕದ್ದು ಮುಚ್ಚಿ ನೀರು: ಅಶೋಕ

KannadaprabhaNewsNetwork |  
Published : Jul 30, 2026, 01:30 AM IST
3 | Kannada Prabha

ಸಾರಾಂಶ

ಕೊಡಗಿನ ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ಒಂದು ತಿಂಗಳಿನಿಂದಲೂ ಕದ್ದುಮುಚ್ಚಿ ನೀರು ಬಿಡುಗಡೆ ಮಾಡುತ್ತಿದ್ದು, ಬೆಂಗಳೂರಷ್ಟೇ ಅಲ್ಲ, ಮಂಡ್ಯ, ಮೈಸೂರಿಗೂ ಕುಡಿಯುವ ನೀರಿನ ಸಮಸ್ಯೆ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- ಬೆಂಗಳೂರಷ್ಟೇ ಅಲ್ಲ, ಮಂಡ್ಯ, ಮೈಸೂರಲ್ಲೂ ನೀರಿಗೆ ಹಾಹಾಕಾರ ಎದುರಾದೀತು: ವಿಪಕ್ಷ ನಾಯಕ ಎಚ್ಚರಿಕೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಕೊಡಗಿನ ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ಒಂದು ತಿಂಗಳಿನಿಂದಲೂ ಕದ್ದುಮುಚ್ಚಿ ನೀರು ಬಿಡುಗಡೆ ಮಾಡುತ್ತಿದ್ದು, ಬೆಂಗಳೂರಷ್ಟೇ ಅಲ್ಲ, ಮಂಡ್ಯ, ಮೈಸೂರಿಗೂ ಕುಡಿಯುವ ನೀರಿನ ಸಮಸ್ಯೆ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕದ್ದುಮುಚ್ಚಿ ತಮಿಳುನಾಡಿಗೆ ಹಾರಂಗಿ ಜಲಾಶಯದಿಂದ ನೀರು ಬಿಡುತ್ತಿದ್ದು, ಇದು ಹೀಗೆಯೇ ಮುಂದುವರಿದರೆ ಬೆಂಗಳೂರಷ್ಟೇ ಅಲ್ಲ, ಮಂಡ್ಯ, ಮೈಸೂರಿಗೂ ಕುಡಿಯುವ ನೀರಿಗೆ ಹಾಹಾಕಾರವಾಗಲಿದೆ ಎಂದು ಎಚ್ಚರಿಸಿದರು.

ಬೆಂಗಳೂರಿನಲ್ಲಿ 1.5 ಕೋಟಿ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ. ಸರ್ಕಾರ ತಕ್ಷಣವೇ ಮೇಲ್ಮನವಿ ಸಲ್ಲಿಸಬೇಕು. ನ್ಯಾಯ ಸಿಗುವವರೆಗೂ ಹೋರಾಟ ನಡೆಸಬೇಕು. ನಾವೂ ಮಂಡ್ಯದಲ್ಲಿ ಹೋರಾಟ ಶುರು ಮಾಡುತ್ತೇವೆ. ಇನ್ನೆರೆಡು ದಿನಗಳಲ್ಲೇ ಕೆಆರ್‌ಎಸ್ ಡ್ಯಾಂ ಬಳಿ ಬಿಜೆಪಿಯಿಂದ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಕರ್ನಾಟಕ ಬಂದ್‌ಗೆ ಕರೆ ಕೊಟ್ಟ ಬಗ್ಗೆ ನನಗೆ ಮಾಹಿತಿ ಇಲ್ಲ. ಅದರ ಬಗ್ಗೆ ತಿಳಿದುಕೊಂಡು ಹೇಳುತ್ತೇನೆ. ಯಾರೂ ಬೆಳೆಯನ್ನು ಬೆಳೆಯಬೇಡಿ. ನಾನು ಮಾತ್ರ ಬೇಳೆ ಬೇಯಿಸಿಕೊಳ್ಳುತ್ತೇನೆ ಎಂಬುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅಂದಿದ್ದಾರೆ ಎಂದು ಅವರು ಕುಟುಕಿದರು. ಬಿತ್ತನೆ ಬೀಜಗಳನ್ನು ವಾಪಸ್‌ ಕೊಡೋಕೆ ರೈತರು ಸಾಲುಗಟ್ಟಿ ನಿಂತುಕೊಂಡಿದ್ದಾರೆ ಎಂದು ರಾಜ್ಯವನ್ನು ಬರಪೀಡಿತವೆಂದು ಘೋಷಿಸದ ರಾಜ್ಯ ಸರ್ಕಾರದ ವಿರುದ್ಧ ಆರ್.ಅಶೋಕ ವಾಗ್ದಾಳಿ ನಡೆಸಿದರು.

- - -

(ಬಾಕ್ಸ್‌-1)

* ನಿಮ್ಮ ವೈಫಲ್ಯದಿಂದಲೇ ಕಾವೇರಿ ನೀರು ಬಿಡುಗಡೆಗೆ ಆದೇಶ

- ಡಿ.ಕೆ.ಶಿವಕುಮಾರ ನಿಮ್ಮ ಲೀಗಲ್ ಟೀಂ ಏನು ಮಾಡುತ್ತಿದೆ?: ಆರ್.ಅಶೋಕ ದಾವಣಗೆರೆ: ನಿಮ್ಮ ವೈಫಲ್ಯದಿಂದಲೇ ಕಾವೇರಿ ನೀರು ಬಿಡುಗಡೆಗೆ ಆದೇಶವಾಗಿದ್ದು, ನಿಮ್ಮ ಲೀಗಲ್ ಟೀಂ ಏನು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ‍ಆದವರಿಗೆ ನಮ್ಮ ಜಲಾಶಯ ಮುಖ್ಯವೋ ಅಥವಾ ಕಾಕ್ರೋಚ್ ಪಾರ್ಟಿ ಸಭೆ ಮುಖ್ಯವೋ? ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ದೆಹಲಿಗೆ ಹೋಗಿ, ಕಾಕ್ರೋಚ್ ಪಾರ್ಟಿ ಪ್ರತಿಭಟನೆಗ ಹೋಗಿದ್ದರು ಎಂದರು.

ಕಾನೂನು ತಜ್ಞರ ಜೊತೆಗೆ ಕಾವೇರಿನ ನೀರಿನ ವಿಚಾರವಾಗಿ ಮುಖ್ಯಮಂತ್ರಿ ಸಭೆ ಮಾಡಿ, ಚರ್ಚಿಸಬೇಕಾಗಿತ್ತು. ನಾವು ಕಾವೇರಿಗಾಗಿ ವಕೀಲರ ಫೀಸ್ ₹300 ಕೋಟಿ ಕೊಟ್ಟಿದ್ದೆವು. ತಮಿಳುನಾಡಿನಲ್ಲೂ ಇಂಡಿ ಒಕ್ಕೂಟದ ಸರ್ಕಾರವೇ ಇದೆ. ಯಾವ ಪುರುಷಾರ್ಥಕ್ಕೆ ತಮಿಳುನಾಡು ಮುಖ್ಯಮಂತ್ರಿಗೆ ವಿಧಾನಸೌಧಕ್ಕೆ ಕರೆಸಿದ್ದಿರಿ ಎಂದು ಅವರು ಪ್ರಶ್ನಿಸಿದರು.

ತಮಿಳುನಾಡು ಮುಖ್ಯಮಂತ್ರಿ ಇಲ್ಲಿಗೆ ಬಂದು ಮೇಕೆದಾಟು ಯೋಜನೆಗೆ ವಿರೋಧ ಇದೆಯನ್ನುತ್ತಾರೆ. ಇದು ಫೋಟೋ ಶೂಟ್‌ಗೆ ಮಾಡುವ ಕಾರ್ಯಕ್ರಮ. ಸುಮ್ಮನೇ ₹10 ಕೋಟಿ ವ್ಯರ್ಥವಾಗುತ್ತದೆ. ತಕ್ಷಣ‍ವೇ ಬರ ಪರಿಹಾರಕ್ಕೆ ಸರ್ಕಾರ ₹10 ಸಾವಿರ ಕೋಟಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ರೈತರಿಗೆ ಬರ ಪರಿಹಾರ ನೀಡದಿದ್ದರೆ ಅಧಿವೇಶನ ನಡೆಯಲು ನಾವು ಬಿಡುವುದಿಲ್ಲ. ಎಲ್ಲ ಶಾಸಕರ ಜೊತೆ ಸೇರಿಕೊಂಡು ತೀವ್ರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದು ಆರ್.ಅಶೋಕ ಎಚ್ಚರಿಸಿದರು.

- - -

(ಬಾಕ್ಸ್‌-2) * ದಾವಣಗೆರೆ, ಜಗಳೂರು ಬರ ಪರಿಶೀಲಿಸಿದ ಅಶೋಕ ಟೀಂ - ನಂತರ ಚಿತ್ರದುರ್ಗಕ್ಕೆ ಭೇಟಿ ನೀಡಿ, ಬಳ್ಳಾರಿಗೆ ತಂಡದ ಪಯಣ ದಾವಣಗೆರೆ: ತೀವ್ರ ಬರದ ಹಿನ್ನೆಲೆಯಲ್ಲಿ ವಿಪಕ್ಷ ನಾಯರ ಆರ್.ಅಶೋಕ ನೇತೃತ್ವದಲ್ಲಿ ಬಿಜೆಪಿ ಬರ ಅಧ್ಯಯನ ತಂಡವು ಚಿತ್ರದುರ್ಗ, ದಾವಣಗೆರೆ ಜಿಲ್ಲೆಯಲ್ಲಿ ಬುಧವಾರ ಬರ ಅಧ್ಯಯನ ಪ್ರವಾಸವನ್ನು ಕೈಗೊಂಡಿತು.

ಚಿತ್ರದುರ್ಗ ಜಿಲ್ಲೆಯ ವೀಕ್ಷಣೆ ನಂತರ ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಆನಗೋಡು ಭಾಗ, ನೇರ್ಲಿಗೆ ಗ್ರಾಮ, ಕೊಡಗನೂರು ಕೆರೆ ಇತರೆಡೆ ಅಡಕೆ ತೋಟ, ಹೊಲಗಳಿಗೆ ಆರ್.ಅಶೋಕ ನೇತೃತ್ವದ ತಂಡ ಭೇಟಿ ನೀಡಿ, ಬರ ಪರಿಸ್ಥಿತಿ ಅವಲೋಕಿಸಿ, ರೈತರಿಂದ ಮಾಹಿತಿ ಪಡೆಯಿತು.

ನಂತರ ದಾವಣಗೆರೆ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿ, ನಂತರ ಜಗಳೂರು ತಾಲೂಕಿನ ಪ್ರವಾಸ ಆರಂಭಿಸಿತು. ಅಲ್ಲಿಂದ ಚಿತ್ರದುರ್ಗ ಜಿಲ್ಲೆಯ ಕಡೆಗೆ ತಂಡವು ಚಳ್ಳಕೆರೆ, ಮೊಳಕಾಲ್ಮೂರು ತಾಲೂಕಿನಲ್ಲಿ ಸಂಚರಿಸಿ, ರಾತ್ರಿ ಬಳ್ಳಾರಿಗೆ ತೆರಳಿ, ಅಲ್ಲಿ ವಾಸ್ತವ್ಯ ಮಾಡಿತು.

ಮಾಜಿ ಸಚಿವ ಬಸವರಾಜ ಭೈರತಿ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಶಾಸಕರಾದ ಹರಿಹರದ ಬಿ.ಪಿ.ಹರೀಶ, ಶಿರಹಟ್ಟಿ ಡಾ.ಚಂದ್ರು ಲಮಾಣಿ, ಹೂವಿನ ಹಡಗಲಿ ಕೃಷ್ಣಾ ನಾಯ್ಕ, ವಿಪ ಸದಸ್ಯ ಕೆ.ಎಸ್.ನವೀನ, ಆಗ್ನೇಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ, ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಸ್.ವಿ.ರಾಮಚಂದ್ರ, ಎಚ್.ಪಿ. ರಾಜೇಶ, ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ನಾಗರಾಜ, ಪ್ರಧಾನ ಕಾರ್ಯದರ್ಶಿಗಳಾದ ಆರ್.ಅಶೋಕ, ಐರಣಿ ಅಣ್ಣೇಶ, ಧನಂಜಯ ಕಡ್ಲೇಬಾಳು, ಎಸ್.ಎಂ.ವೀರೇಶ ಹನಗವಾಡಿ, ಚಂದ್ರಶೇಖರ ಪೂಜಾರ,ಬಿ.ಎಸ್.ಜಗದೀಶ, ಆಲೂರು ನಿಂಗರಾಜ, ಅನಿಲಕುಮಾರ ನಾಯ್ಕ, ಶ್ರೀನಿವಾಸ ದಾಸಕರಿಯಪ್ಪ, ಎಚ್.ಪಿ.ವಿಶ್ವಾಸ, ಚೇತನಾ ಬಾಯಿ ಇತರರು ಇದ್ದರು.

- - -

-(ಫೋಟೋಗಳಿವೆ.)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವ ಸಾಯಿ ಕೃಪಾದಲ್ಲಿ ಗುರು ಸ್ಮರಣೆ
ಎಲ್ಲ ತಾಲೂಕುಗಳಿಗೂ ತಲಾ ₹50 ಕೋಟಿ ಬಿಡುಗಡೆಗೊಳಿಸಿ