ಚಂಚಲ ಮನಸ್ಸಿಗೆ ಕಡಿವಾಣ ಹಾಕಿದಾಗ ಯಶಸ್ಸಿನ ಹಾದಿ ಸರಳವಾಗುತ್ತದೆ-ಶಿವಪ್ಪಗೌಡರ

KannadaprabhaNewsNetwork | Published : Feb 3, 2024 1:49 AM

ಸಾರಾಂಶ

ಶಿಸ್ತು, ಸಂಯಮ ಜತೆಗೆ ಚಂಚಲ ಮನಸ್ಸಿಗೆ ವಿದ್ಯಾರ್ಥಿಗಳು ಕಡಿವಾಣ ಹಾಕಿದಾಗ ಶೈಕ್ಷಣಿಕ ಜೀವನದ ಯಶಸ್ಸಿನ ಹಾದಿ ಸರಳವಾಗುತ್ತದೆ ಎಂದು ಎಸ್.ಎಂ. ಭೂಮರಡ್ಡಿ ಕಾಲೇಜಿನ ಆಡಳಿತಾಧಿಕಾರಿ ಪ್ರಶಾಂತ ಶಿವಪ್ಪಗೌಡರ ಹೇಳಿದರು.

ಗಜೇಂದ್ರಗಡ: ಶಿಸ್ತು, ಸಂಯಮ ಜತೆಗೆ ಚಂಚಲ ಮನಸ್ಸಿಗೆ ವಿದ್ಯಾರ್ಥಿಗಳು ಕಡಿವಾಣ ಹಾಕಿದಾಗ ಶೈಕ್ಷಣಿಕ ಜೀವನದ ಯಶಸ್ಸಿನ ಹಾದಿ ಸರಳವಾಗುತ್ತದೆ ಎಂದು ಎಸ್.ಎಂ. ಭೂಮರಡ್ಡಿ ಕಾಲೇಜಿನ ಆಡಳಿತಾಧಿಕಾರಿ ಪ್ರಶಾಂತ ಶಿವಪ್ಪಗೌಡರ ಹೇಳಿದರು.

ಸ್ಥಳೀಯ ಎಸ್.ಎಂ. ಭೂಮರಡ್ಡಿ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ, ಕ್ರೀಡೆ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳ ಜೀವನ ಗೋಲ್ಡನ್ ಲೈಫ್ ಎಂದು ಬಣ್ಣಿಸಲಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದ ನಂತರವೂ ಸಹ ಜೀವನವನ್ನು ಗೋಲ್ಡನ್ ಲೈಫ್ ಆಗಬೇಕಾದರೆ ವಿದ್ಯಾರ್ಥಿಗಳು ನಿರಂತರ ಅಧ್ಯಯನದ ಜತೆಗೆ ಯಶಸ್ಸಿನ ಗುರಿ ತಲುಪಲು ಶಿಸ್ತು ಸಂಯಮ ಅಳವಡಿಸಿಕೊಳ್ಳುವುದರ ಜತೆಗೆ ಚಂಚಲ ಮನಸ್ಸಿಗೆ ಕಡಿವಾಣ ಹಾಕುವುದು ಮುಖ್ಯವಾಗಿದೆ. ಹೀಗಾಗಿ ಪಠ್ಯದ ಜತೆಗೆ ಕ್ರೀಡೆ, ಸಾಹಿತ್ಯಿಕ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಸದೃಢ ಮನಸ್ಸನ್ನು ಹೊಂದಲು ಸಾಧ್ಯವಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಜಿ.ಬಿ. ಗುಡಿಮನಿ ಮಾತನಾಡಿ, ವಿದ್ಯಾರ್ಥಿಗಳು ಆಕರ್ಷಣೆಗೆ ಒಳಗಾಗದೆ ನಿರಂತರ ಅಧ್ಯಯನಕ್ಕೆ ಆದ್ಯತೆ ನೀಡಬೇಕು. ಅಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಸರ್ವಾಂಗೀಣ ಅಭಿವೃದ್ಧಿಗೆ ಎಸ್‌ಎಂ ಭೂಮರಡ್ಡಿ ಶಿಕ್ಷಣ ಸಂಸ್ಥೆ ತನ್ನದೆಯಾದ ಕೊಡುಗೆ ನೀಡುತ್ತಿದೆ. ಹೀಗಾಗಿ ಕಾಲೇಜಿನ ವಿದ್ಯಾರ್ಥಿಗಳು ಕ್ರಮ ಬದ್ಧ ಅಧ್ಯಯನದ ಮೂಲಕ ಶೈಕ್ಷಣಿಕ ಜೀವನದಲ್ಲಿ ಉತ್ತಮ ಸಾಧನೆಗೈದು ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.

ವಿಜಯಪುರ ಕಾರಾಗೃಹದ ಅಧೀಕ್ಷಕ ಡಾ.ಐ.ಜೆ. ಮ್ಯಾಗೇರಿ ಮಾತನಾಡಿ, ಕಾಲೇಜುಗಳ ಪ್ರಗತಿಗೆ ಪ್ರಾಂಶುಪಾಲರು ಸೇರಿ ಉಪನ್ಯಾಸಕರ ಪಾತ್ರ ಮಹತ್ವವಾಗಿರುತ್ತದೆ. ಯಾವುದೇ ವ್ಯವಸ್ಥೆ ಒಳ್ಳೆಯದಾಗಿರಬೇಕು ಎಂದಾದರೆ ಒಳ್ಳೆಯ ಮನಸ್ಸುಗಳ ಜತೆಗೆ ಸಕಾರಾತ್ಮಕ ಆಲೋಚನೆಗಳ ಸಮ್ಮಿಲನವಾದಾಗ ಅಭಿವೃದ್ಧಿ ಸರಾಗವಾಗಿ ಸಾಗುತ್ತದೆ. ಸ್ಥಳೀಯ ಎಸ್‌ಎಂ ಭೂಮರಡ್ಡಿ ಕಾಲೇಜಿನ ವಿದ್ಯಾಭ್ಯಾಸ ಮಾಡಿದ ಸಾಕಷ್ಟು ವಿದ್ಯಾರ್ಥಿಗಳು ಈಗಾಗಲೇ ದೇಶ ಹಾಗೂ ರಾಜ್ಯದ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು, ಶೈಕ್ಷಣಿಕ ಜೀವನದ ಕನಸು ಕಟ್ಟುಕೊಂಡಿರುವ ನೀವು ಉತ್ತಮ ಸಾಧನೆಗೈದು ಪಟ್ಟಣ ಹಾಗೂ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸುವಂತವರಾಗಿ ಎಂದರು.

ಎಸ್.ಎಂ. ಭೂಮರಡ್ಡಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎನ್.ಶಿವರಡ್ಡಿ, ನಿವೃತ್ತ ಉಪನ್ಯಾಸಕ ಬಿ.ಎ.ಕೆಂಚರಡ್ಡಿ, ಉಪನ್ಯಾಸಕರಾದ ಎ.ಎಸ್. ವಡ್ಡರ, ವಿ.ಎಂ. ಜೂಚನಿ, ಎಂ.ಎಲ್. ಕ್ವಾಟಿ, ಸಂತೋಷ ವಾಲಿಕಾರ, ಆನಂದ ಜೂಚನಿ, ಗೋಪಿ ರಾಯಬಾಗಿ, ಎಲ್.ಕೆ. ಹಿರೇಮಠ, ಮಂಜು ನಾಗರಾಳ ಸೇರಿ ಇತರರು ಇದ್ದರು.

Share this article