ತರೀಕೆರೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸ್ತ್ರೀ ಸಂವೇದನಾ ಸಂವಾದ
ಪ್ರಪಂಚದಲ್ಲಿ ಸಮಾಜದ ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದು, ಇಂದು ಬಾನಿನಿಂದ ಭುವಿಯವರೆಗೂ ಎಲ್ಲಾ ಕ್ಷೇತ್ರ ಗಳಲ್ಲಿಯೂ ಪುರುಷರಿಗಿಂತ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.ಪಟ್ಟಣದ ಸಪ್ತಗಿರಿ ಕನ್ವೇಷನ್ ಹಾಲ್ ನಲ್ಲಿ ತಾಲೂಕು ಆಡಳಿತ, ತಾಪಂ, ಮಹಿಳಾ ಮತ್ತು ಕಲ್ಯಾಣ ಇಲಾಖೆ, ಜಿ.ಎಚ್. ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಮತ್ತು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸ್ತ್ರೀ ಸಂವೇದನಾ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಹೆಣ್ಣು-ಗಂಡು ಎಂಬ ಭೇದವಿರಬಾರದು. ನಮ್ಮ ಕ್ಷೇತ್ರದಲ್ಲಿರುವ ಮಹಿಳೆಯರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತಿತರೆ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ಮುಂಬರುವ ಲೋಕಸಭಾ ಮತ್ತು ವಿಧಾನ ಸಭಾ ಚುನಾವಣೆಗಳಲ್ಲಿ ಶೇ. 33ರ ಮೀಸಲಾತಿ ಅನ್ವಯ ಕರ್ನಾಟಕದಲ್ಲಿ 90 ಕ್ಕೂ ಹೆಚ್ಚು ಮಹಿಳಾ ವಿಧಾನಸಭಾ ಸದಸ್ಯರು ಆಯ್ಕೆಯಾಗಲಿದ್ದಾರೆ, ಅದೇ ರೀತಿ ಲೋಕಸಭೆಯಲ್ಲೂ ಮಹಿಳೆಯರ ಸಂಖ್ಯೆ 250ಕ್ಕೂ ಹೆಚ್ಚಾಗಲಿದೆ ಎಂದು ಹೇಳಿದರು.ಸರ್ಕಾರ ಮಹಿಳೆಯರಿಗಾಗಿ ಋತುಚಕ್ರ ರಜೆ, ಹೆರಿಗೆ ರಜೆ, ಮಾತೃತ್ವ ರಜೆ, ಮಕ್ಕಳ ಹಾರೈಕೆ ರಜೆ, ಐದು ವರ್ಷ ಮಗುವಿ ರುವ ಮಹಿಳೆಯರಿಗೆ ಅವರ ಇಚ್ಚೆಯ ಸ್ಥಳದಲ್ಲಿ ಕರ್ತವ್ಯ ಸಲ್ಲಿಸಲು ಅವಕಾಶ, ಶಿಶುಪಾಲನ ಕೇಂದ್ರ, ಮಹಿಳಾ ಉದ್ಯೋಗಿಗೆ ₹5 ಲಕ್ಷಗಳ ವರೆಗೆ ಉಚಿತ ಚಿಕಿತ್ಸೆ, ಸ್ವಾವಲಂಬಿಯಾಗಿ ಬದುಕಲು ಹಲವಾರು ಯೋಜನೆಗಳಲ್ಲಿ ಸಹಾಯಧನದ ನೆರವು ಸೇರಿದಂತೆ ಅನೇಕ ಯೋಜನೆ ಜಾರಿಗೊಳಿಸಿದೆ ಎಂದು ಹೇಳಿದರು.ಸಮಾಜ ಗಂಡು ಮಕ್ಕಳಿಗೆ ಎಷ್ಟು ಆದ್ಯತೆ ನೀಡುತ್ತೇವೆಯೋ, ಅಷ್ಟೇ ಆದ್ಯತೆಯನ್ನು ಹೆಣ್ಣು ಮಕ್ಕಳಿಗೂ ನೀಡಬೇಕು. ನಮ್ಮ ಜಿಲ್ಲೆಯು ಬಾಲ ಗರ್ಭಿಣಿಯಾಗುತ್ತಿರುವುದರಲ್ಲಿ ಐದನೇ ಸ್ಥಾನದಲ್ಲಿರುವುದನ್ನು ಮನಗಂಡು ಜಿಲ್ಲಾ ಪಂಚಾಯಿತಿ ಸಿಇಓ ಕೀರ್ತನಾ ರವರ ಮಹತ್ವಕಾಂಕ್ಷೆಯ ಯೋಜನೆಯಾದ ಭದ್ರ ಬಾಲೆಯನ್ನು ಸಕರಾತ್ಮಕವಾಗಿ ಜಾರಿಗೊಳಿಸಲು ಸರ್ಕಾರ, ಜನಪ್ರತಿನಿಧಿಗಳ ಜೊತೆ ಸಮಾಜವು ಕೈ ಜೋಡಿಸಿದರೆ ಈ ಸಾಮಾಜಿಕ ಪಿಡುಗು ಹೋಗಲಾಡಿಸಲು ಸಾಧ್ಯ ಎಂದರು.ಮಹಿಳೆಯರ ಶ್ರೋಯೋಭಿವೃದ್ಧಿಗೆ ಸದಾ ನಿಮ್ಮ ಜೊತೆ ಇರುತ್ತೇನೆ. ನೀವು ಆತ್ಮ ವಿಶ್ವಾಸದಿಂದ ತಮ್ಮ ಪ್ರತಿಭೆ ಹೊರಹಾಕಬೇಕು. ಶ್ರಮವಹಿಸಿ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನಕ್ಕೇರಬೇಕು, ಇಂದು ಮಹಿಳೆಯರು ಸ್ವಾವಲಂಭಿ ಯಾಗಿ ಜೀವನ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ತಲಾ ಆದಾಯ ದೇಶ ದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉದ್ಯೋಗ ಹೆಚ್ಚಿದೆ. ಅದೇ ರೀತಿ ಅನ್ನೂ ಕೆಲವು ಕಡೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದು ನಿಲ್ಲಬೇಕು ಎಂದರು.ಸಭೆಯಲ್ಲಿ ಮಾನಸಿಕ ವೈದ್ಯೆ ಸುಜಾತ ಮಹಿಳೆಯರ ಜೀವನಕ್ರಮ ಮತ್ತು ನೆಮ್ಮದಿಯ ಬದುಕಿಗೆ ಬೇಕಾದ ಕೆಲ ವಿಷಯ ಗಳನ್ನು ತಿಳಿಸಿ, ಸಭೆಯಲ್ಲಿದ್ದ ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಜಿ.ಎಚ್. ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿಶ್ರೀನಿವಾಸ್, ಕೆಡಿಪಿ ಸದಸ್ಯೆ ರಚನಾ ಶ್ರೀನಿವಾಸ್ ಮಾತನಾಡಿದರು. ಶಿಶು ಅಭಿವೃದ್ಧಿ ಇಲಾಖೆ ಮೇಲ್ವೀಚಾರಕಿ ಸುನೀತಾ, ಅಶ್ವಿನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಚರಣ್ ರಾಜ್ ಭಾಗವಹಿಸಿದ್ದರು.
-29ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಸ್ತ್ರೀ ಸಂವೇದನಾ ಸಂವಾದ ವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಜಿ.ಎಚ್. ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿಶ್ರೀನಿವಾಸ್ ಮತ್ತಿತರರು ಇದ್ದರು.