ಜೂ.1ರಿಂದ ನೀವೂ ವಿಧಾನಸೌಧ ಪ್ರವಾಸಕ್ಕೆ ಹೋಗಿ

KannadaprabhaNewsNetwork | Updated : May 26 2025, 05:24 AM IST
ನಾಡಿನ ಶಕ್ತಿಕೇಂದ್ರ ವಿಧಾನಸೌಧ ಇನ್ನು ಮುಂದೆ ಜೂ.1ರಿಂದ ಪ್ರವಾಸಿ ತಾಣವಾಗಿ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳ್ಳಲಿದೆ.
Follow Us

 ಬೆಂಗಳೂರು : ನಾಡಿನ ಶಕ್ತಿಕೇಂದ್ರ ವಿಧಾನಸೌಧ ಇನ್ನು ಮುಂದೆ ಜೂ.1ರಿಂದ ಪ್ರವಾಸಿ ತಾಣವಾಗಿ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳ್ಳಲಿದೆ. ಎಲ್ಲಾ ಭಾನುವಾರ, ಎರಡು ಮತ್ತು ನಾಲ್ಕನೇ ಶನಿವಾರ ಜನ ಈ ಶಕ್ತಿಸೌಧ ವೀಕ್ಷಿಸಬಹುದು. ತನ್ಮೂಲಕ ಇಲ್ಲಿಯವರೆಗೆ ಕೇವಲ ಆಡಳಿತ ಕಾರ್ಯಗಳಿಗಷ್ಟೇ ಸೀಮಿತವಾಗಿದ್ದ ವಿಧಾನಸೌಧ ಇನ್ನು ಮುಂದೆ ಪ್ರವಾಸಿ, ಪ್ರೇಕ್ಷಣೀಯ ಸ್ಥಳಗಳ ಸಾಲಿಗೆ ಸೇರ್ಪಡೆಯಾಗಲಿದೆ.

ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ, ವಿಧಾನಸಭಾ ಸಚಿವಾಲಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮತ್ತು ವಿಧಾನಸೌಧ ಭದ್ರತಾ ವಿಭಾಗಗಳ ಸಹಯೋಗದಲ್ಲಿ ರೂಪಿಸಿರುವ ‘ವಿಧಾನಸೌಧ ಮಾರ್ಗದರ್ಶಿ ಪ್ರವಾಸ’ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ದೊರೆಯಿತು. ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌, ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಮತ್ತು ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಉದ್ಘಾಟಿಸಿ ಕಾರ್ಯಕ್ರಮದ ಉದ್ದೇಶ ವಿವರಿಸಿದರು.

ಸರ್ಕಾರದ ಈ ಮಹತ್ವದ ಕಾರ್ಯಕ್ರಮದಿಂದ ದೂರದಿಂದಲೇ ನೋಡಿ ಫೋಟೋ ಕ್ಲಿಕ್ಕಿಸಿ ಸಂತಸ ಪಡುತ್ತಿದ್ದವರು ಇನ್ಮುಂದೆ ರಾಜ್ಯದ ಆಡಳಿತಸೌಧವನ್ನು ಒಂದು ಸುತ್ತು ಹೊಡೆದು ಅಧಿವೇಶನ ನಡೆಯುವ ವಿಧಾನಸಭೆ, ವಿಧಾನಪರಿಷತ್‌ ಸಭಾಂಗಣಗಳು, ಮುಖ್ಯಮಂತ್ರಿಗಳ ಕೊಠಡಿ ಸೇರಿ ಇನ್ನಿತರೆ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ. ಈ ಐತಿಹಾಸಿಕ ಕಟ್ಟಡದ ಮಾಹಿತಿ ಒದಗಿಸಲು ಗೈಡ್‌ಗಳು ಕೂಡ ಇರಲಿದ್ದಾರೆ.

ವಿಧಾನಸೌಧ ವೀಕ್ಷಣೆಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವೆಬ್‌ಸೈಟ್‌ ಮೂಲಕ ಆಧಾರ್‌ ಕಾರ್ಡ್‌, ಪಾಸ್‌ಪೋರ್ಟ್‌ ಸೇರಿ ಅಧಿಕೃತ ದಾಖಲೆ ಹಾಗೂ 16 ವರ್ಷ ಮೇಲ್ಪಟ್ಟವರು ತಲಾ 50 ರು. ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. 15 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೆ ಉಚಿತ ಪ್ರವೇಶ ಇರಲಿದೆ.

ಶಕ್ತಿಸೌಧದ ಪ್ರವಾಸ ನಡಿಗೆ ಜೂ.1ರಿಂದ ಅಧಿಕೃತವಾಗಿ ಜಾರಿಯಾಗಲಿದೆ. ಪ್ರತಿ ಭಾನುವಾರ, ಎರಡು ಮತ್ತು ನಾಲ್ಕನೇ ಶನಿವಾರ ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿರಲಿದೆ. ಪ್ರವಾಸಕ್ಕೆ https://kstdc.co/activities ವೆಬ್‌ಸೈಟ್ ನಲ್ಲಿ ಮುಂಚಿತವಾಗಿಯೇ ಟಿಕೆಟ್‌ ಬುಕ್ ಮಾಡಿಕೊಳ್ಳಬೇಕು. ಆರಂಭದಲ್ಲಿ 16 ವರ್ಷ ಮೇಲ್ಪಟ್ಟವರಿಗೆ 50 ರು. ನಿಗದಿಯಾಗಿದ್ದು. 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ.

ಹೇಗಿರಲಿದೆ ವಿಧಾನಸೌಧ ಪ್ರವಾಸ?

ಪ್ರತಿ ದಿನ ತಲಾ 30 ಮಂದಿಯನ್ನೊಳಗೊಂಡ ಹತ್ತು ಬ್ಯಾಚ್‌ಗಳಿಗೆ ಮಾತ್ರ ವಿಧಾನಸೌಧ ವೀಕ್ಷಣೆಗೆ ಅವಕಾಶ. ಪ್ರತೀ ಬ್ಯಾಚ್‌ಗೂ ಒಂದೂವರೆ ಗಂಟೆ ಸಮಯ, ಒಂದೂವರೆ ಕಿ.ಮೀ. ನಡಿಗೆ ಇರಲಿದೆ. ವಿಕಾಸಸೌಧ ಪ್ರವೇಶದ್ವಾರದ (ಗೇಟ್‌ ನಂ.3) ಮೂಲಕ ಟೂರ್‌ ಆರಂಭವಾಗಲಿದೆ. ಭದ್ರತಾ ತಪಾಸಣೆ ದೃಷ್ಟಿಯಿಂದ ಟೂರ್‌ ಆರಂಭಕ್ಕೂ ಮುನ್ನ 20 ನಿಮಿಷ ಮುನ್ನ ಸ್ಥಳದಲ್ಲಿ ಇರಬೇಕು. ಬರುವವರು ಆಧಾರ್‌ ಕಾರ್ಡ್‌, ಪಾಸ್‌ಪೋರ್ಟ್‌ ಸೇರಿ ಸರ್ಕಾರದಿಂದ ವಿತರಿಸಿರುವ ಯಾವುದಾದರೂ ಅಧಿಕೃತ ಗುರುತಿನ ಚೀಟಿ ತರಬೇಕು. 

ವಿಧಾನಸೌಧದ ಫೌಂಡೇಷನ್‌ ಸ್ಟೋನ್‌, ವಿಧಾನಸೌಧ ಆವರಣದಲ್ಲಿರುವ ತಾಯಿ ಭುವನೇಶ್ವರಿ ಪ್ರತಿಮೆ ಹಾಗೂ ಮಹಾತ್ಮ ಗಾಂಧಿ, ಡಾ.ಬಿ.ಆರ್‌.ಅಂಬೇಡ್ಕರ್‌, ನೆಹರು, ಬಸವಣ್ಣ, ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆ ಸೇರಿ ಇನ್ನಿತರ ಮಹನೀಯರು, ಗಣ್ಯರ ಪ್ರತಿಮೆಗಳ ವೀಕ್ಷಣೆ, ನಂತರ ವಿಧಾನಸೌಧದ ಎಲ್ಲ ಮಹಡಿಗಳ ಕಾರಿಡಾರ್‌ಗಳ ವೀಕ್ಷಣೆ, ಮುಖ್ಯಮಂತ್ರಿಗಳು, ಸ್ಪೀಕರ್‌, ಸಭಾಪತಿ, ಸಚಿವರ ಕೊಠಡಿಗಳು, ಸಂಪುಟ ಸಭೆ ಕೊಠಡಿ, ವಿಧಾನಸಭೆ, ವಿಧಾನ ಪರಿಷತ್‌ ಸಭಾಂಗಣ ಹೀಗೆ ಇಡೀ ಶಕ್ತಿಸೌಧ ವೀಕ್ಷಿಸಬಹುದು. ನಿಗದಿತ ಸ್ಥಳದಲ್ಲಿ ಮಾತ್ರ ಫೋಟೋ ತೆಗೆಯಲು ಅವಕಾಶ. ಆರಂಭದಲ್ಲಿ 10 ಗೈಡ್‌ಗಳನ್ನು ಪ್ರವಾಸಿಗರ ಅನುಕೂಲಕ್ಕೆ ನೇಮಿಸಲಾಗಿದೆ. ಅವರು ವಿಧಾನಸೌಧದ ಭವ್ಯತೆ, ಪರಂಪರೆ, ಇತಿಹಾಸ, ಕಟ್ಟಡ ಶೈಲಿ, ಅಧಿವೇಶನಗಳ ಬಗ್ಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ವಿವರಿಸಲಿದ್ದಾರೆ.

ಯುವಜನರಲ್ಲಿ ಜನನಾಯಕನ ಕನಸು, ಗುರಿ ಬೀಜಾಂಕುರವಾಗಬೇಕು: ಎಚ್ಕೆಪಿ

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌, ವಿಧಾನಸೌಧ ಪ್ರವಾಸವನ್ನು ಮನೋರಂಜನೆ ಅಂತ ಯಾರೂ ಭಾವಿಸಬಾರದು. ಇಲ್ಲಿಗೆ ಬರುವ ನಮ್ಮ ವಿದ್ಯಾರ್ಥಿಗಳು, ಯುಜನರಲ್ಲಿ ನಾನೂ ಮುಖ್ಯಮಂತ್ರಿಯಾಗಬೇಕು, ಸಭಾಧ್ಯಕ್ಷ, ಸಭಾಪತಿ ಕುರ್ಚಿಯಲ್ಲಿ ಕೂರಬೇಕು. ವಿರೋಧ ಪಕ್ಷದ ನಾಯಕನಾಗಿ ಹೋರಾಟ ಮಾಡಬೇಕು. ನಮ್ಮ ಕ್ಷೇತ್ರದ ಶಾಸಕನಾಗಿ ಬಂದು ಇಲ್ಲಿ ಕೂರಬೇಕು ಎನ್ನುವ ಕನಸು, ಗುರಿಗಳ ಬೀಜಾಂಕುರ ಆಗಬೇಕೆಂಬ ಉದ್ದೇಶದಿಂದ ರೂಪಿಸಲಾಗಿದೆ ಎಂದು ಹೇಳಿದರು.

ಇಲ್ಲಿ ಮಹಾತ್ಮ ಗಾಂಧೀಜಿ, ಅಂಬೇಡ್ಕರ್‌ ಸೇರಿ ದೇಶವನ್ನು ಗುಲಾಮಗಿರಿ ಸಂಕೋಲೆಯಿಂದ ಕಿತ್ತೊಗೆದು ದೇಶಕ್ಕೆ ಸ್ವಾತಂತ್ರ್ಯ ನೀಡಿದ, ಪ್ರಜಾಪ್ರಭುತ್ವವೆಂಬ ದೊಡ್ಡ ಆಸ್ತಿ ನೀಡಿದ ಅನೇಕ ಮಹನೀಯರ ಪ್ರತಿಮೆಗಳಿವೆ. ಅವರಲ್ಲಿನ ಹೋರಾಟದ ಮನೋಭಾವ, ದೇಶಭಕ್ತಿ, ತ್ಯಾಗ, ಜನಸೇವೆಯ ಮನೋಭಾವ ನಮ್ಮ ಯುವಜರಲ್ಲಿ ಮೂಡಬೇಕು ಎನ್ನುವುದು ಈ ಪ್ರವಾಸದ ಉದ್ದೇಶ ಎಂದರು.

ಸ್ಪೀಕರ್‌ ಯು.ಟಿ.ಖಾದರ್ ಮಾತನಾಡಿ, 75 ವರ್ಷ ವಿಧಾನಸೌಧದ ಒಳಗೆ ಯಾರನ್ನೂ ಬಿಟ್ಟಿರಲಿಲ್ಲ. ಈಗ ಈ ಅದ್ಭುತ ಪ್ರಜಾಪ್ರಭುತ್ವದ ದೇಗುಲವನ್ನು ಕರ್ನಾಟಕ ಮಾತ್ರವಲ್ಲ, ದೇಶದ ಎಲ್ಲರಿಗೂ ತೆರೆದಿಡುತ್ತಿದ್ದೇವೆ. ಇದೊಂದು ಮಹತ್ವದ ಶೈಕ್ಷಣಿಕ ಮತ್ತು ಸಂವಿಧಾನಿಕ ಜಾಗೃತಿ ಕಾರ್ಯಕ್ರಮ. ಸಾರ್ವಜನಿಕರಿಗೆ ವಿಧಾನಸೌಧದ ಎಲ್ಲ ವಿಚಾರಗಳನ್ನು ತಿಳಿಯುವ ಅವಕಾಶ, ಜನರನ್ನು ಸರ್ಕಾರಕ್ಕೆ ಹತ್ತಿರಗೊಳಿಸುವ ಪ್ರಯತ್ನ ಇದಾಗಿದೆ ಎಂದರು.

ಕಾರ್ಯಕ್ರಮದಲ್ಲಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ, 35 ವರ್ಷಗಳಗಳ ಹಿಂದೆ ನಾನೂ ವಿದ್ಯಾರ್ಥಿಯಾಗಿ ಸ್ಕೌಟ್ಸ್‌ಗೈಡ್ಸ್‌ನಲ್ಲಿ ಬೇರೆ ಬೇರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ನಾನು, ಈಗ ವಿಧಾನಸಭೆ ಸಭಾಧ್ಯಕ್ಷ ಆಗಿದ್ದೇನೆ. ದೇವರು ಎಲ್ಲರಿಗೂ ಶಕ್ತಿ ಕೊಟ್ಟಿದ್ದಾರೆ. ನನಗಿಂತ ದೊಡ್ಡ ಸ್ಥಾನಕ್ಕೆ ನೀವು ಹೋಗಲು ಪ್ರಯತ್ನಿಸಬೇಕು. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ತಂದಿದ್ದೇವೆ ಎಂದರು.

 ಬುದ್ದಿಗಿದ್ದಿ ಐತೇನ್ರಿ ನಿಮ್ಗೆ ಅಂದಿದ್ರು: ಸಭಾಪತಿ

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಸ್ಪೀಕರ್‌ ಹಾಗೂ ನಾನು ಹಿಂದೆ ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳ ಮಾಡಿ ಸಾರ್ವಜನಿಕರನ್ನು ವಿಧಾನಸಭೆ, ವಿಧಾನ ಪರಿಷತ್‌ ಸಭಾಂಗಣ ವೀಕ್ಷಣೆಗೆ ಅವಕಾಶ ನೀಡಿದಾಗ ಕೆಲ ಮಾಜಿ ಶಾಸಕರು, ಹಿರಿಯರು ಆಕ್ಷೇಪಿಸಿದ್ದರು. ನಿಮಗೇನು ಬುದ್ದಿಗಿದ್ದಿ ಐತೇನ್ರಿ ಜನರನ್ನು ಒಳಗೆ ಬಿಟ್ಟಿದ್ದೀರಿ. ವಿಧಾನಸಭೆ, ವಿಧಾನ ಪರಿಷತ್ತನ್ನು ಧರ್ಮಶಾಲೆ ಮಾಡಿದ್ದೀರಾ ಎಂದು ಕೇಳಿದ್ದಾಗಿ ಹೇಳಿದರು.

ನಾವೇನೋ ಒಳ್ಳೆಯ ಭಾವನೆಯಿಂದ ಹೀಗೆ ಮಾಡಿದರೆ ಹಿಂಗಾಯ್ತಲ್ಲಾ ಅಂತ ಯೋಚಿಸಿ, ಕೊನೆಗೆ ಈಗ ಸರ್ಕಾರದ ಸಹಕಾರದೊಂದಿಗೆ ಸ್ಪಷ್ಟ ನಿಯಮಗಳನ್ನೇ ರೂಪಿಸಿ ಸಾರ್ವಜನಿಕರು ವಿಧಾನಸೌಧ ಪ್ರವೇಶಿಸಲು ಅವಕಾಶ ಕಲ್ಪಿಸಿದ್ದೇವೆ. ಇದನ್ನು ಜನ ಸದುಪಯೋಗಪಡಿಸಿಕೊಳ್ಳಬೇಕು. ಈ ಕಾರ್ಯಕ್ರಮ ಉತ್ತಮ ರಾಜಕೀಯಪಟುಗಳು ಹೊರಬರಲು ನೆರವಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.

Read more Articles on