ಹಿರಿಯೂರು: ಮತದಾನದ ಹಕ್ಕು ಸಂವಿಧಾನಿಕ ಹಕ್ಕಾಗಿದ್ದು, ಭಾರತದ ಪ್ರಜಾಪ್ರಭುತ್ವದ ಭವ್ಯ ಭವಿಷ್ಯದ ರೂವಾರಿಗಳು ಇಂದಿನ ಯುವ ಮತದಾರರಾಗಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾ.ಮೊಹಮ್ಮದ್ ಮೊಯಿನುದ್ದೀನ್ ಹೇಳಿದರು.
ಯುವ ಮತದಾರರಲ್ಲಿ ಮತದಾನದ ಅರಿವು ಮೂಡಿಸುವ ಉದ್ದೇಶದೊಂದಿಗೆ 2011ರಿಂದ ಮತದಾರ ದಿನಾಚರಣೆ ನಡೆಸಲಾಗುತ್ತಿದೆ. ಆದ್ದರಿಂದ ಯುವ ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ಅಮೂಲ್ಯ ಮತದಾನ ಮಾಡುವ ಮೂಲಕ ಉತ್ತಮ ನಾಯಕನನ್ನು ಆಯ್ಕೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಡಿವೈಎಸ್ಪಿ ಚೈತ್ರಾ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಮತದಾನ ಮಾರಾಟಕ್ಕಿಲ್ಲ ಎಂಬುದು ಪ್ರತಿಯೊಬ್ಬರಿಗೂ ತಿಳಿಯಬೇಕು. ಪ್ರತಿಯೊಬ್ಬ ಮತದಾರ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರೆ ಮಾತ್ರ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಸಾಧ್ಯ. ಚುನಾವಣೆ ಕಾರ್ಯಕ್ರಮದಲ್ಲಿ ಕಂದಾಯ ಹಾಗೂ ಚುನಾವಣಾ ಶಾಖೆಗಿಂತ ಶಿಕ್ಷಣ ಇಲಾಖೆ ಕಾರ್ಯ ಅತಿಮುಖ್ಯವಾಗಿದೆ ಎಂದರು.ಈ ವೇಳೆ ತಹಸೀಲ್ದಾರ್ ಸಿ.ರಾಜೇಶ್ ಕುಮಾರ್, ಸಹಾಯಕ ಸರ್ಕಾರಿ ಅಭಿಯೋಜಕ ಟಿ.ಮಂಜಣ್ಣ, ಪೌರಾಯುಕ್ತ ಎಚ್.ಮಹಂತೇಶ್ ಮಾತನಾಡಿದರು.