ಉಡುಪಿ: ಯಕ್ಷಗಾನ ನಮ್ಮ ನಾಡಿನ ಅಮೂಲ್ಯ ಸಾಂಸ್ಕೃತಿಕ ಪರಂಪರೆ. ಈ ಜನಪದ ಕಲೆ ಉಳಿಸಿ ಬೆಳೆಸುವ ಹೊಣೆಗಾರಿಕೆ ಯುವಜನತೆಯ ಮೇಲಿದೆ. ಯಕ್ಷಗಾನ ತರಬೇತಿ, ಪ್ರದರ್ಶನ ಹಾಗೂ ಅಧ್ಯಯನಗಳಲ್ಲಿ ಯುವಕರು ಸಕ್ರಿಯವಾಗಿ ಭಾಗವಹಿಸಿದರೆ ಪ್ರಬುದ್ಧವಾದ ಈ ಕಲೆಯ ಉಳಿವಿಗೆ ಹೊಸ ಉಸಿರು ನೀಡಿದಂತಾಗುತ್ತದೆ ಎಂದು ಮಾಹೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಹೇಳಿದ್ದಾರೆ.ಇಲ್ಲಿನ ಇಂದ್ರಾಳಿ ಯಕ್ಷಗಾನ ಕೇಂದ್ರದಲ್ಲಿ, ಯಕ್ಷಗುರುಕುಲ ಶಿಕ್ಷಣ ಟ್ರಸ್ಟ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಯಕ್ಷಗಾನ ಕೇಂದ್ರದ ೫೩ನೇ ವರ್ಷದ ವಾರ್ಷಿಕೋತ್ಸವ ಹಾಗೂ ಎಂ. ಎಂ. ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಾಹೆ ವಿ.ವಿ.ಯಲ್ಲಿ ಯಕ್ಷಗಾನ ಕೇಂದ್ರದ ಸಹಯೋಗದೊಂದಿಗೆ ಯಕ್ಷಗಾನ ಕಲೆಯ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳಿಂದ ಹಿಡಿದು ವಯೋವೃದ್ಧರೂ ಈ ಕಲೆಯನ್ನು ಶ್ರದ್ಧೆಯಿಂದ ಕಲಿತು, ಆರಾಧಿಸಿ ಸಂಭ್ರಮಿಸುತ್ತಿರುವುದು ಸಂತೋಷದೊಂದಿಗೆ ಹೆಮ್ಮಯಾಗುತ್ತಿದೆ ಎಂದರು.
ಮಾರಣಕಟ್ಟೆ ಮೇಳದ ಹಿರಿಯ ಕಲಾವಿದ ಚಂದ್ರಗೌಡ ಗೋಳಿಕೆರೆ ಅವರನ್ನು ಯಕ್ಷರಂಗದ ಭೀಷ್ಮ ‘ಎಂ.ಎಂ ಹೆಗ್ಡೆ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಚಂದ್ರಗೌಡರು, ಎಂ.ಎಂ. ಹೆಗ್ಡೆಯವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿರುವ ನನಗೆ ಅವರ ಹೆಸರಿನ ಪ್ರಶಸ್ತಿ ಲಭಿಸಿರುವುದು ನನ್ನ ಪುಣ್ಯ ಎಂದು ಧನ್ಯತಾಭಾವ ಸೂಚಿಸಿದರು. ಎಂಐಟಿ ಪ್ರಾಧ್ಯಾಪಕ ಡಾ.ಪ್ರವೀಣ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಸರ್ಟಿಫಿಕೇಟ್ ಕೋರ್ಟ್ನಡಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಯಕ್ಷಗಾನ ಸರ್ಟಿಫಿಕೇಟ್ ಕೋರ್ಸ್ನ ಪ್ರಶಿಕ್ಷಣಾರ್ಥಿ ವಾಣಿ ಮಾತನಾಡಿದರು.
ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಶೆಣೈ, ಭುವನಪ್ರಸಾದ್ ಹೆಗ್ಡೆ, ಕೇಂದ್ರದ ಗುರುಗಳಾದ ಉಮೇಶ್ ಸುವರ್ಣ ಗೋಪಾಡಿ, ಕೃಷ್ಣಮೂರ್ತಿ ಭಟ್ ಬಗ್ವಾಡಿ, ಬಸವ ಮುಂಡಾಡಿ ಉಪಸ್ಥಿತರಿದ್ದರು. ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೇಂದ್ರದ ಸಲಹಾ ಸಮಿತಿ ಸದಸ್ಯ ಪ್ರೊ.ಎಸ್.ವಿ. ಉದಯ ಕುಮಾರ್ ಶೆಟ್ಟಿ ಅಭಿನಂದನ ಭಾಷಣ ಮಾಡಿದರು. ಉಪನ್ಯಾಸಕ ಪ್ರೊ.ಕೆ. ರಾಘವೇಂದ್ರ ತುಂಗ ನಿರೂಪಿಸಿ, ವಂದಿಸಿದರು.ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಂದ ಹಿಮ್ಮೇಳ ಪ್ರತಿಭೆ, ಸರ್ಟಿಫಿಕೇಟ್ ಕೋರ್ಸ್ನ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವರಂಗ, ಕೇಂದ್ರದ ವಿದ್ಯಾರ್ಥಿಗಳಿಂದ "ಸಮರ ಸೌಗಂಧಿಕ’ ಯಕ್ಷಗಾನ ಪ್ರದರ್ಶನಗೊಂಡಿತು.