ಹೆರಿಗೆ ಕ್ಷೇತ್ರದಲ್ಲಿಯೂ ಬದಲಾವಣೆ : ಭಾರತದಲ್ಲಿ ಜನಪ್ರಿಯವಾಗುತ್ತಿದೆ ವಾಟರ್ ಬರ್ತಿಂಗ್ ವಿಧಾನ

KannadaprabhaNewsNetwork |  
Published : Mar 07, 2025, 11:48 PM ISTUpdated : Mar 08, 2025, 05:58 AM IST
ವಾಟರ್ ಬರ್ತಿಂಗ್ | Kannada Prabha

ಸಾರಾಂಶ

ಕಾಲ ವೇಗವಾಗಿದೆ. ಆಧುನಿಕವಾಗಿದೆ. ಹೊಸ ತಂತ್ರಜ್ಞಾನಗಳು ಬಂದು ಜಗತ್ತೇ ಹೊಸತಾಗಿದೆ. ಇದೀಗ ಹೆರಿಗೆ ಕ್ಷೇತ್ರದಲ್ಲಿಯೂ ಬದಲಾವಣೆ ಉಂಟಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ನೀರಿನಲ್ಲಿ ಹೆರಿಗೆ ಮಾಡಿಸುವ ವಾಟರ್‌ ಬರ್ತಿಂಗ್ ವಿಧಾನ ಬಹು ಜನಪ್ರಿಯಾಗುತ್ತಿದೆ.

ಕಾಲ ವೇಗವಾಗಿದೆ. ಆಧುನಿಕವಾಗಿದೆ. ಹೊಸ ತಂತ್ರಜ್ಞಾನಗಳು ಬಂದು ಜಗತ್ತೇ ಹೊಸತಾಗಿದೆ. ಇದೀಗ ಹೆರಿಗೆ ಕ್ಷೇತ್ರದಲ್ಲಿಯೂ ಬದಲಾವಣೆ ಉಂಟಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ನೀರಿನಲ್ಲಿ ಹೆರಿಗೆ ಮಾಡಿಸುವ ವಾಟರ್‌ ಬರ್ತಿಂಗ್ ವಿಧಾನ ಬಹು ಜನಪ್ರಿಯಾಗುತ್ತಿದೆ. ಹಾಗಂತ ಇದು ಬಹಳ ಹೊಸ ವಿಧಾನ ಅಂದುಕೊಳ್ಳುವ ಅಗತ್ಯವೇನೂ ಇಲ್ಲ. ಈ ಹೆರಿಗೆ ವಿಧಾನವು 1800ರಲ್ಲಿಯೇ ಚಾಲ್ತಿಯಲ್ಲಿತ್ತು ಎನ್ನಲಾಗಿದೆ. ಜೊತೆಗೆ 1970ರ ದಶಕದಲ್ಲಿ ಈ ಹೆರಿಗೆ ವಿಧಾನಕ್ಕೆ ಜಾಗತಿಕ ಮನ್ನಣೆ ದೊರಕಿದೆ. ಈ ವಿಧಾನವು ತಾಯಂದಿರಿಗೆ ದೈಹಿಕ ಮತ್ತು ಭಾವನಾತ್ಮಕ ಬೆಂಬಲ ನೀಡುವುದಲ್ಲದೆ ವೈದ್ಯಕೀಯ ಸೇವೆ ಪಡೆಯುವ ಅವಶ್ಯಕತೆಯನ್ನು ಕಡಿಮೆ ಮಾಡುತ್ತದೆ.

ಜಲ ಪ್ರಸವ ವಿಧಾನವು ಪ್ರಸವ ಸಂದರ್ಭದಲ್ಲಿ ನೋವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಆ ಮೂಲಕ ಹೆರಿಗೆ ಪ್ರಕ್ರಿಯೆಯು ಸುಸೂತ್ರವಾಗಿ ನಡೆಯಲು ಅನುವು ಮಾಡಿಕೊಡುತ್ತದೆ ಎಂದು ತಿಳಿದಿರುವವರು ಹೇಳುತ್ತಾರೆ. ಅಲ್ಲದೇ ಹೆಚ್ಚುವರಿ ನೋವು ನಿವಾರಕಗಳನ್ನು ಬಳಸುವ ಅಗತ್ಯ ಇರುವುದಿಲ್ಲ. ತಾಯಂದಿರು ಸಾಮಾನ್ಯವಾಗಿ ಬೆಚ್ಚಗಿನ ನೀರು ನರಗಳನ್ನು ಶಾಂತಗೊಳಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.

ಈ ಕುರಿತು ಮಾತನಾಡುವ ಬೆಂಗಳೂರು ಹೆಬ್ಬಾಳದ ಮದರ್ ಹುಡ್ ಹಾಸ್ಪಿಟಲ್ಸ್‌ನ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಸಿರೀಷಾ ರೆಡ್ಡಿ ಅವರು, ‘ಜೀವನಶೈಲಿಯ ಬದಲಾವಣೆಗಳಿಂದ, ಅರಿವಿನ ಕೊರತೆಯಿಂದ ಮತ್ತು ವೈದ್ಯಕೀಯ ಕ್ಷೇತ್ರ ಬಹಳ ಬೆಳವಣಿಗೆ ಹೊಂದಿರುವುದರಿಂದ ಸಿಸೇರಿಯನ್ ಹೆರಿಗೆ ಪ್ರಮಾಣವೂ ಹೆಚ್ಚಾಗಿದೆ. ಹಿಂದೆ ಸಂಕೀರ್ಣ ಪ್ರಕರಣಗಳಲ್ಲಿ ಜೀವಗಳನ್ನು ಉಳಿಸುವ ಉದ್ದೇಶದಿಂದ ಸಿಸೇರಿಯನ್ ವಿಧಾನವನ್ನು ಪರಿಚಯಿಸಲಾಗಿತ್ತು. ಆದರೆ ಈಗ ವೈದ್ಯಕೀಯವಾಗಿ ಅಗತ್ಯವಿಲ್ಲದಿದ್ದರೂ ಸಿಸೇರಿಯನ್‌ ವಿಧಾನಗಳನ್ನು ಅತಿಯಾಗಿ ಬಳಸುತ್ತಿರುವುದು ಆತಂಕಕಾರಿಯಾಗಿದೆ’ ಎನ್ನುತ್ತಾರೆ.

ಯಾರಾರು ಜಲ ಪ್ರಸವಕ್ಕೆ ಸಿದ್ಧರಾಗಬಹುದು ಎಂದು ಹೇಳುವ ಡಾ. ಸಿರೀಷಾ ರೆಡ್ಡಿ ಅವರು, ‘ಸಾಮಾನ್ಯವಾಗಿ ಪ್ರತೀ 100 ಮಹಿಳೆಯರಲ್ಲಿ 70 ರಿಂದ 80 ಗರ್ಭಿಣಿಯರು ಉತ್ತಮ ತಯಾರಿ ಮತ್ತು ಬೆಂಬಲ ದೊರೆತರೆ ಸಹಜ ಹೆರಿಗೆಗೆ ಒಳಗಾಗುವ ಸಾಮರ್ಥ್ಯ ಹೊಂದಿರುತ್ತಾರೆ. ಕೇವಲ ಶೇ.20 ರಿಂದ ಶೇ.30ರಷ್ಟು ಗರ್ಭಿಣಿಯರು ಮಾತ್ರ ಸಿಸೇರಿಯನ್ ಅಗತ್ಯವಿರುವ ವರ್ಗಕ್ಕೆ ಸೇರಿಸಬಹುದಾಗಿದೆ’ ಎಂದು ಹೇಳುತ್ತಾರೆ.

ಅತಿಯಾದ ಮಧುಮೇಹ ಸಮಸ್ಯೆ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿರುವ ಮಹಿಳೆಯರು ಜಲ ಪ್ರಸವ ವಿಧಾನವನ್ನು ಆರಿಸಿಕೊಳ್ಳುವುದು ಸಾಧ್ಯವಿಲ್ಲ. ಯಾಕೆಂದರೆ ಅವರಿಗೆ ವೈದ್ಯಕೀಯ ನೆರವಿನ ಅವಶ್ಯಕತೆ ಇರುತ್ತದೆ. ಈ ಹಿಂದೆ ನಾರ್ಮಲ್ ಡೆಲಿವರಿ ಅಥವಾ ಸಹಜ ಹೆರಿಗೆ ಹೊಂದಿದ್ದ ಮಹಿಳೆಯರು ವೈದ್ಯಕೀಯ ವೃತ್ತಿಪರರ ನೆರವನ್ನು ಪಡೆಯುವ ಮೂಲಕ ಸಹಜ ಪ್ರಸವ ಪ್ರಕ್ರಿಯೆಯನ್ನು ಆಯ್ಕೆ ಮಾಡಬಹುದು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಹಳದಿ ಮಾರ್ಗ ಮೆಟ್ರೋಗೆ ಆ.10ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ