ಸಾರಾಂಶ
ಬೆಂಗಳೂರು : ಜಗಜ್ಯೋತಿ ಬಸವಣ್ಣ ಮತ್ತು ರಾಷ್ಟ್ರಕವಿ ಕುವೆಂಪು ಅವರನ್ನು ಕೇವಲ ಭಾಷಣದ ವಸ್ತುಗಳನ್ನಾಗಿ ಮಾಡಿಕೊಳ್ಳಲಾಗಿದೆ. ಅವರು ಹೇಳಿದ್ದನ್ನು ಯಾರೂ ಪಾಲಿಸುತ್ತಿಲ್ಲ ಎಂದು ಸಚಿವ ಎಚ್.ಕೆ.ಪಾಟೀಲ್ ಬೇಸರ ವ್ಯಕ್ತಪಡಿಸಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಮತ್ತು ನಗರದ ಎಂ.ಚಂದ್ರಶೇಖರ್ ಪ್ರತಿಷ್ಠಾನದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಗುಜರಾತಿ ಭಾಷೆಯ ಹಿರಿಯ ಸಾಹಿತಿ ಡಾ.ಹಿಮಾಂಶಿ ಇಂದುಲಾಲ್ ಶೆಲತ್ ಅವರಿಗೆ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ ಪ್ರದಾನ ಮಾಡಿ ಮಾತನಾಡಿದ ಅವರು, ಬಸವಣ್ಣನವರು ಸಮಾನತೆಯ ಮಂತ್ರ ಬೋಧಿಸಿದರು. ಕುವೆಂಪು ಅವರು ವಿಶ್ವಮಾನವ ಸಂದೇಶ ಸಾರಿದ್ದು ಇವರ ಚಿಂತನೆ, ನಿಲುವುಗಳನ್ನು ಪರಿಪಾಲನೆ ಮಾಡಿದಾಗ ಮಾತ್ರ ಅವರ ಸಾಹಿತ್ಯ ನಮಗೆ ದಕ್ಕುತ್ತದೆ. ಆದರೆ ಬಸವಣ್ಣ ಮತ್ತು ಕುವೆಂಪು ಅವರನ್ನು ಕೇವಲ ಭಾಷಣದ ವಸ್ತುಗಳನ್ನಾಗಿ ಮಾಡಿಕೊಳ್ಳಲಾಗಿದೆ. ಖಿವರ ತತ್ವ-ಸಿದ್ಧಾಂತಗಳನ್ನು ಅನುಸರಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಕುಪ್ಪಳಿಯ ಕುವೆಂಪು ಪ್ರತಿಷ್ಠಾನವು ಸಾಹಿತ್ಯ ಸೇವೆ ಜೊತೆಗೆ ಜನಪರ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದೆ. ಈ ಪ್ರತಿಷ್ಠಾನಕ್ಕೆ ಇನ್ನಷ್ಟು ಬಲ ಬರಲಿ ಎಂದು ಶುಭ ಹಾರೈಸಿದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿದರು. ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಎಂ.ಚಂದ್ರಶೇಖರ್ ಪ್ರತಿಷ್ಠಾನದ ಸರೋಜ ಎಂ.ಚಂದ್ರಶೇಖರ್ ಇದ್ದರು.
ಕನ್ನಡ ಭಾಷೆಗೆ ಭವ್ಯ ಪರಂಪರೆ ಇದೆ. ಕುವೆಂಪು ರಾಷ್ಟ್ರೀಯ ಪುರಸ್ಕಾರ ತಮಗೆ ಸಿಕ್ಕಿರುವುದು ಬಹಳ ಖಷಿ ತಂದಿದೆ. ಅದಕ್ಕಾಗಿ ಈ ನಾಡಿಗೆ ಆಭಾರಿಯಾಗಿದ್ದೇನೆ.
- ಡಾ.ಹಿಮಾಂಶಿ ಇಂದುಲಾಲ್ ಶೆಲತ್, ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಕುವೆಂಪು ಭವನ ನಿರ್ಮಾಣ
ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಈಗಾಗಲೇ ನಿವೇಶನ ಗುರುತಿಸಿದ್ದು, ಕುವೆಂಪು ಭವನ ನಿರ್ಮಿಸಲಾಗುವುದು. ಕುವೆಂಪು ವಿಚಾರಧಾರೆಗಳನ್ನು ಮುಂದಿನ ಪೀಳಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದರು. ಕುವೆಂಪು ಅವರ ವಿಚಾರಧಾರೆಗಳನ್ನು ಯುವಜನರಿಗೆ ತಲುಪಿಸುವ ನಿಟ್ಟಿನಲ್ಲಿ ಟ್ರಸ್ಟ್ ಕಾರ್ಯೋನ್ಮುಖವಾಗಿದೆ. ಕುವೆಂಪು ರಾಷ್ಟ್ರೀಯ ಪುರಸ್ಕಾರವು ₹5 ಲಕ್ಷ ನಗದು, ಬೆಳ್ಳಿ ಪದಕ, ಪಾರಿತೋಷಕ ಒಳಗೊಂಡಿದ್ದು, ಇದು 12 ನೇ ಪ್ರಶಸ್ತಿಯಾಗಿದೆ ಎಂದು ವಿವರಿಸಿದರು.