ವರ್ತೂರು ಪ್ರಕಾಶ್‌ ಆಪ್ತೆ ಶ್ವೇತಾಗೌಡ ವಿರುದ್ಧ ಬೆಂಗಳೂರಿನ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ.

ಬೆಂಗಳೂರು: ನವರತ್ನ ಜುವೆಲ್ಲರಿ ಅಂಗಡಿ ಮಾಲೀಕನಿಂದ ₹2.42 ಕೋಟಿ ಮೌಲ್ಯದ 2.9 ಕೆ.ಜಿ. ಚಿನ್ನಾಭರಣ ಖರೀದಿಸಿ ಹಣ ನೀಡದೆ ವಂಚಿಸಿದ್ದ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವರ್ತೂರು ಪ್ರಕಾಶ್‌ ಆಪ್ತೆ ಶ್ವೇತಾಗೌಡ ವಿರುದ್ಧ ಬೆಂಗಳೂರಿನ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆ ಸಾಗರದ ಪ್ರಗತಿ ಜುವೆಲ್ಲರಿ ಅಂಗಡಿ ಮಾಲೀಕ ಬಾಲರಾಜ್‌ ಸೇಟ್‌ ನೀಡಿದ ದೂರಿನ ಮೇರೆಗೆ ಶ್ವೇತಾ ಗೌಡ ವಿರುದ್ಧ ವಂಚನೆ ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ. ಆ್ಯಂಟಿಕ್‌ ಜುವೆಲ್ಲರಿ ಹಾಗೂ ವಜ್ರದ ಆಭರಣಗಳನ್ನು ಖರೀದಿಸುತ್ತಿದ್ದೇನೆಂದು ಬಾಲರಾಜ್‌ ಬಳಿ ಶ್ವೇತಾ ಹೇಳಿಕೊಂಡಿದ್ದಾಳೆ. ಡಿ.11ರಂದು ₹20.75 ಲಕ್ಷ ಮೌಲ್ಯದ 285 ಗ್ರಾಂ. ಆ್ಯಂಟಿಕ್‌ ಆಭರಣವನ್ನು ಶ್ವೇತಾ ಪಡೆದುಕೊಂಡಿದ್ದಳು. ಆದರೆ ಆಕೆ ನೀಡಿದ್ದ ಚೆಕ್‌ ಬೌನ್ಸ್‌ ಆಗಿವೆ.